
ರೈತರಿಗೆ ಸಿಹಿ ಸುದ್ದಿ: 2ಲಕ್ಷ ಹೆಕ್ಟೇರ್ನಲ್ಲಿನ ತೊಗರಿ ಬೆಳೆ ನಾಶ: ಪರಿಹಾರ ಘೋಷಣೆ ಸಭೆ ನಡೆಸಿ ಸಿಎಂ ಪ್ರತಿಕ್ರಿಯೆ
ಕಲಬುರಗಿ, ಜನವರಿ 24: ತೊಗರಿ ಕಣಜ ಎಂದು ಕರೆಯಲಾಗುವ ಕಲಬುರಗಿ ಜಿಲ್ಲೆಯಲ್ಲಿ ಅತೀವೃಷ್ಟಿಯಂತಹ ಕಾರಣಗಳಿಂದ ಭಾರಿ ಪ್ರಮಾಣದಲ್ಲಿ ತೊಗರಿ ಬೆಳೆ ನಾಶವಾಗಿತ್ತು. ಈ ನಷ್ಟದ ರೈತರಿಗೆ ಇದೀಗ ರಾಜ್ಯ ಸರ್ಕಾರ ಸ್ಪಂದಿಸಿದೆ.
ತೊಗರಿ ಬೆಳಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಭೆ ನಡೆಸಿದ್ದು, ಅಂಕಿ ಅಂಶಗಳ ಆಧರಿಸಿ ಅಧಿಕಾರಿಗಳಿಂದ ಮಹತ್ತರ ಸಲಹೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲಬುರಗಿ; ಜನವರಿ 25ರಂದು ನೇರ ಸಂದರ್ಶನ
ಮಂಗಳವಾರ ಕಲಬುರಗಿಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಭಾಗದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ವಿಶೇಷವಾಗಿ ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ತೊಗರಿ ನಾಶವಾಗಿದ್ದು, ಅದಕ್ಕೆ ಪರಿಹಾರ ನೀಡಲು ರೈತರು ಕೂಡ ಒತ್ತಾಯ ಮಾಡಿದ್ದಾರೆ. ಈ ಎಲ್ಲ ಅಂಶಗಳು ಸರ್ಕಾರದ ಗಮನಕ್ಕಿದೆ ಎಂದು ತಿಳಿಸಿದರು.
ಇನ್ನೂ ಪರಿಹಾರ ವಿಚಾರವಾಗಿ ಸಭೆ ನಡೆಸಲಾಗಿದೆ. ಇದರಲ್ಲಿ ಕೃಷಿ ಇಲಾಖೆ, ಆರ್ಥಿಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಪರಿಹಾರ ಎಷ್ಟು ಕೊಡಬೇಕೆಂದು ತೀರ್ಮಾನಿಸಿ ಆದಷ್ಟು ಶೀಘ್ರವೇ ಘೋಷಿಸಲಾಗುವುದು ಎಂದು ಅವರು ತಿಳಿಸಿದರು.
ಗಾಣಗಾಪುರದ ಅಭಿವೃದ್ಧಿಗೆ 67 ಕೋಟಿ ರೂ. ಡಿಪಿಆರ್ ಸಿದ್ದ
ವಿಠಲ ಹೇರೂರ ಅವರ ಮೂರ್ತಿಯ ಅನಾವರಣ ಹಾಗೂ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಜಿಲ್ಲಾಡಳಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಸುಮಾರು 60 ಕೋಟಿ ಗಿಂತ ಹೆಚ್ಚು ಅನುದಾನದ ಅಗತ್ಯವಿದೆ. ಕಾಶಿ ವಿಶ್ವನಾಥ, ಉಜ್ಜಯನಿಯ ಮಹಾಕಾಲೇಶ್ವರದಲ್ಲಿ ನಿರ್ಮಿಸಿರುವಂತೆ ಕಾರಿಡಾರ್ ನಿರ್ಮಿಸಬೇಕು ಎಂದು 67 ಕೋಟಿ ರೂ.ಗಳ ಡಿಪಿಆರ್ ಸಿದ್ದ ಮಾಡಿದ್ದಾರೆ.ಬರುವ ಬಜೆಟ್ ನಲ್ಲಿ ಸರ್ಕಾರ ಕಾರಿಡಾರ್ ನಿರ್ಮಾಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು.
ಬೆಂಗಳೂರು ಏರ್ ಶೋಗೆ ಪ್ರಧಾನಿ ಚಾಲನೆ
ಏರ್ ಶೋ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ ಗಳೊಂದಿಗೆ ವೀಡಿಯೊ ಸಂವಾದ ನಡೆಸಲಾಗಿದೆ. ಫೆ 13ನೇ ರಂದು ಆರಂಭವಾಗುವ ಬೆಂಗಳೂರು ಏರೋ ಇಂಡಿಯಾ ಷೋ ಪ್ರತಿಷ್ಠಿತ ಕಾರ್ಯಕ್ರಮ ಆಗಿದೆ. 1996 ರಿಂದ ಬೆಂಗಳೂರು ಏರ್ ಫೋರ್ಸ್ ನಿಲ್ದಾಣದಲ್ಲಿ ನಿರಂತರ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಈ ಬಾರಿಯ ಏರ್ ಶೋ ದಲ್ಲಿ ಅತೀ ಹೆಚ್ವು ಜನ ಭಾಗವಹಿಸಲಿದ್ದಾರೆ. ಗಣ್ಯರು, ಏರೋಸ್ಪೇಸ್ ಮುಖ್ಯಸ್ಥರು, ಕಂಪನಿಗಳ ಸಿಇಒಗಳು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತೀಯ, ಕರ್ನಾಟಕ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಏರೋಸ್ಪೇಸ್ ಕಂಪನಿಗಳ ವಸ್ತು ಪ್ರದರ್ಶನವಿದೆ. ಸಾರ್ವಜನಿಕರು ನೋಡಲು ವ್ಯವಸ್ಥೆ ಇರಲಿದೆ. ಮುಖ್ಯವಾಗಿ ಈ ಬಾರಿ ಏರ್ ಶೋ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಈ ಸಂಬಂಧವೇ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಪೂರ್ವಭಾವಿ ಸಿದ್ಧತೆಗಳ ಸಭೆ ನಡೆಯಿತು ಎಂದು ಬೊಮ್ಮಾಯಿ ತಿಳಿಸಿದರು.
ಪಿಎಸ್ಐ ಅಕ್ರಮ: ಅಧಿಕಾರಿ ಮೇಲೂ ತನಿಖೆ
ಪಿ.ಎಸ್.ಐ ನೇಮಕಾತಿಗೆ ಸಂಬಂಧಿಸಿದಂತೆ ಆರೋಪಿ ರುದ್ರೇಗೌಡ ತನಿಖಾಧಿಕಾರಿಗಳು ಡಿವೈಎಸ್ಪಿ ಶಂಕರಗೌಡರು 3 ಕೋಟಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಆರೋಪಿ ಹೇಳಿಕೆ ಬಗ್ಗೆ ಮಾಹಿತಿ ಅಲ್ಲಿಯ ತನಿಖಾಧಿಕಾರಿ ಬಳಿ ಇರುತ್ತದೆ. ಮೊದಲು ಅವರ ಮೇಲಿನ ಆರೋಪ, ಕೋರ್ಟಿನ ಆದೇಶ, ನ್ಯಾಯಾಂಗ ಬಂಧನ ಎಲ್ಲಾ ಕಾನೂನಿನ ಪ್ರಕಾರ ತನಿಖೆಯಾಗುತ್ತದೆ. ಆತ ನೀಡಿದ ಸಾಕ್ಷ್ಯಾಧಾರಗಳ ಮೇಲೆ ಅಧಿಕಾರಿಯ ಮೇಲೂ ತನಿಖೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.