ಬಳ್ಳಾರಿ: ಸಿಂಗಾಪುರ- ನಿಟ್ಟೂರು ಸೇತುವೆ ಕಾಮಗಾರಿಗೆ ಅನುದಾನ: ಸಿಎಂ ಬೊಮ್ಮಾಯಿ ಭರವಸೆ
ಬಳ್ಳಾರಿ, ಅಕ್ಟೋಬರ್ 14: ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಂಗಾಪುರ ನಿಟ್ಟೂರು ಸೇತುವೆ ಕಾಮಗಾರಿಗೆ ಸಂಪೂರ್ಣ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿರಗುಪ್ಪದಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, "ಸಂಸದ ಸಂಗಪ್ಪ ಕರಡಿ ಹಾಗೂ ಸೋಮಲಿಂಗಪ್ಪ ಅವರು ಬಹಳಷ್ಟು ಬೇಡಿಕೆಗಳನ್ನು ಇಟ್ಟಿದ್ದಾರೆ. ಬೈಪಾಸ್ ರಸ್ತೆ ಯೋಜನೆ ಸಿದ್ಧವಾಗುತ್ತಿದ್ದು ಬರುವ ದಿನಗಳಲ್ಲಿ ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಿದೆ. ಒಳಚರಂಡಿ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮಂಡಳಿಗೆ ಸೂಚಿಸಿದ್ದೇನೆ. ಸಿರಗುಪ್ಪ ತಾಲ್ಲೂಕಿನ ಅಭಿವೃದ್ಧಿಗೆ ಸಂಪೂರ್ಣ ವಾಗಿ ಅನುದಾನ ಒದಗಿಸಲು ನಮ್ಮ ಸರ್ಕಾರ ಬದ್ಧ," ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಜಿಲ್ಲೆಯ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ.ಗಳ ಯೋಜನೆ:
ಈ ವರ್ಷ ನಾವು ನೆನೆಗುದಿಗೆ ಬಿದ್ದಿದ್ದ ಖನಿಜ ನಿಧಿಯನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ತಂದು 4-5 ಜಿಲ್ಲೆಗಳಿಗೆ 25 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಯನ್ನು ಮಾಡುತ್ತಿದ್ದೇವೆ. ತಲಾ 5 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಿ, ಮುಂದಿನ 5 ವರ್ಷಗಳಲ್ಲಿ 5 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಈ ಜಿಲ್ಲೆಯ ಅಭಿವೃದ್ಧಿಗಾಗಿ ಒದಗಿಸುತ್ತೇವೆ ಎಂದರು.

ಜನೋಪಯೋಗಿ ಶಾಸಕರು:
ಶಾಸಕ ಸೋಮಲಿಂಗಪ್ಪ ಅವರು ಜನೋಪಯೋಗಿ ಶಾಸಕರು. ಈ ಕ್ಷೇತ್ರದ ಬಡವರು, ದೀನದಲಿತರರು, ಎಲ್ಲಾ ಸಮುದಾಯಗಳ ಬಗ್ಗೆ ಅತ್ಯಂತ ಪ್ರೀತಿ ಗೌರವದಿಂದ ಸಾಮಾನ್ಯ ಸೇವಕನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ 4 ವಸತಿ ಶಾಲೆಗಳು, ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.ಕುಡಿಯುವ ನೀರಿಗೆ ಸಿರಗುಪ್ಪೆ ಕೆರೆ ನಿರ್ಮಾಣ, ಬ್ರಿಡ್ಜ್ ಕಂ ಬ್ಯಾರೇಜ್, ಹಾಸ್ಟೆಲ್ ಗಳು ಬಿ.ಆರ್.ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಏತ ನೀರಾವರಿ ಯೋಜನೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಕ್ಕೆ ತಂದಿದ್ದಾರೆ. ಅವರ ರಿಪೋರ್ಟ್ ಕಾರ್ಡ್ ತಂದಿದ್ದು, ಸೇವಕನನ್ನು ಆಯ್ಕೆ ಮಾಡುತ್ತೀರೋ, ನಾಯಕನನ್ನು ಆಯ್ಕೆ ಮಾಡುತ್ತೀರೋ ಎನ್ನುವ ತೀರ್ಮಾನ ಜನರದ್ದು. ಮನೆ ಬಾಗಿಲಿಗೆ ಬಂದು ಸೇವೆ ನೀಡುವ ಸಜ್ಜನ, ಸರಳ ವ್ಯಕ್ತಿ ಯಾದ ಸೋಮಲಿಂಗಪ್ಪ ಅವರಿಗೆ ಜನ ಮುಂದಿನ 5 ವರ್ಷ ಸೇವೆ ಮಾಡಲು ಆಶೀರ್ವಾದ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ , ಸಚಿವರಾದ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು ಮತ್ತಿತರರು ಹಾಜರಿದ್ದರು.












Click it and Unblock the Notifications