ಬೊಮ್ಮಾಯಿ ಗುಡ್ ನ್ಯೂಸ್ ತರ್ತಾರಾ? ಇಲ್ಲ ಬರಿಗೈಯಲ್ಲಿ ಬರ್ತಾರಾ?
ಬೆಂಗಳೂರು, ಮೇ 09: ಕಾಮನ್ ಮ್ಯಾನ್ ಬಸವರಾಜ ಬೊಮ್ಮಾಯಿ ಅವರ ಮತ್ತೊಂದು ದೆಹಲಿ ಭೇಟಿ ಫಿಕ್ಸ ಆಗಿದೆ. ಈವರೆಗೂ ಎಂಟು ಬಾರಿ ದೆಹಲಿ ನಾಯಕರ ಭೇಟಿ ಮಾಡಿ ಬರಿಗೈಯಲ್ಲಿ ವಾಪಸು ಆಗಿದ್ದಾರೆ. ಆದರೆ ಈ ಬಾರಿಯ ಭೇಟಿ ಭಾರೀ ಮಹತ್ವ ಪಡೆದಿದೆ.
ಸಚಿವ ಸ್ಥಾನಕ್ಕೆ ಕುದಿಯುತ್ತಿರುವ ಮನಸುಗಳನ್ನು ತಣಿಸುವ ನಿಟ್ಟಿನಲ್ಲಿ ಖಾಲಿಯಿರುವ ಸಂಪುಟ ಸ್ಥಾನ ತುಂಬುವ ಸಂತಸದ ಸುದ್ದಿ ಹೊತ್ತು ತರಲಿದ್ದಾರೋ ? ಇಲ್ಲವೇ ಕ್ಯಾಬಿನೆಟ್ ಪುನಾರಚನೆಗೆ ನಾಂದಿ ಹಾಡಲಿದ್ದಾರೋ ಗೊತ್ತಿಲ್ಲ. ಸಿಎಂ ದೆಹಲಿ ಪ್ರಯಾಣ ಸುದ್ದಿ ಹೊರ ಬೀಳುತ್ತಿದ್ದಂತೆ ಕೆಲ ಶಾಸಕರು ಸಚಿವ ಸ್ಥಾನದ ಕನಸು ಕಾಣಲು ಆರಂಭಿಸಿದ್ದಾರೆ.

ಮೇ. 11 ರಂದು ಗುಡ್ ನ್ಯೂಸ್ ತರ್ತಾರಾ ಸಿಎಂ
ಬಸವರಾಜ ಬೊಮ್ಮಾಯಿ ಮೇ. 10 ರಂದು ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆ ವರೆಗೂ ಕೇಂದ್ರ ಸಚಿವರು ಹಾಗೂ ವರಿಷ್ಠರ ಭೇಟಿ ಕಾರ್ಯ ಮುಗಲಿಯಲಿದೆ. ಸಂಜೆ 6 ಗಂಟೆಗೆ ಇನ್ವೆಸ್ಟ್ ಕರ್ನಾಟಕ 22 ಗ್ಲೋಬಲ್ ಮೀಟ್ ಕುರಿತ ಕೆಲವು ದೇಶಗಳ ರಾಯಭಾರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಮೇ. 11 ರಂದು ಬೊಮ್ಮಾಯಿ ವಾಪಸು ಬರಲಿದ್ದಾರೆ. ಕೇಂದ್ರ ವರಿಷ್ಠರು ರಾಜ್ಯಕ್ಕೆ ಬಂದು ತೆರಳಿದ ಬಳಿಕ ಬೊಮ್ಮಾಯಿ ದೆಹಲಿಗೆ ಹೋಗುತ್ತಿರುವುದರಿಂದ ಈ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಪಾಳಯದಲ್ಲಿ ಅದಾಗಲೇ ಸಚಿವ ಸ್ಥಾನ ಆಕಾಂಕ್ಷಿಗಳು ಬೊಮ್ಮಾಯಿ ದೆಹಲಿ ಭೇಟಿಗೆ ಶುಭ ಕೋರಿದ್ದಾರೆ. ಶುಭ ಸುದ್ದಿ ತನ್ನಿ ಎಂದು ಪರೋಕ್ಷವಾಗಿ ಕೇಳಿಕೊಂಡಿದ್ದಾರೆ.

ಯಾರಿಗೆ ಸಚಿವ ಸ್ಥಾನದ ಲಾಟರಿ
ಬಿಜೆಪಿಯಲ್ಲಿ ಯಾವ ಕ್ಷಣ ಯಾವ ಅಚ್ಚರಿ ನಿರ್ಧಾರ ಹೊರ ಬೀಳಬಹುದು. ಈ ಭಾರಿ ಬೊಮ್ಮಾಯಿ ದೆಹಲಿ ಭೇಟಿ ವೇಳೆ ವರಿಷ್ಠರು ಸಂಪುಟ ಸಹೋದ್ಯೋಗಿಗಳ ಅಂತಿಮ ಪಟ್ಟಿ ಬೊಮ್ಮಾಯಿ ಕೈಗಿಟ್ಟು ಕಳುಹಿಸಲಿದೆ ಎಂದೇ ಹೇಳಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಶೀರ್ವಾದ ಸಿಕ್ಕವರಿಗೆ ಈ ಬಾರೀ ಸಚಿವ ಸ್ಥಾನದ ಲಾಟರಿ ಹೊಡೆಯಲಿದೆ ಎಂದೇ ಹೇಳಲಾಗುತ್ತಿದೆ. ಅಂತೂ ಬಸವರಾಜ ಬೊಮ್ಮಾಯಿ ಅವರು ಈವರೆಗೂ ಎಂಟು ಸಲ ದೆಹಲಿಗೆ ಪ್ರಯಾಣ ಮಾಡಿ ಬರೀ ಗೈಯಲ್ಲಿ ಬಂದಿದ್ದಾರೆ. ಕನಿಷ್ಠ ಪಕ್ಷ 9 ನೇ ದೆಹಲಿ ಪ್ರಯಾಣದಲ್ಲಾದರೂ ಗುಡ್ ನ್ಯೂಸ್ ತರಲಿದ್ದಾರೆ ಎಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ.

ವರಿಷ್ಠರ ಆಶೀರ್ವಾದ ಯಾರಿಗೆ ಸಿಗಲಿದೆ:
ರಾಜ್ಯದಲ್ಲಿ ಸಂಪುಟ ಪುನಾರಚನೆ ಆಗಲಿದೆ. ಬಸವರಾಜ ಬೊಮ್ಮಾಯಿಗೆ " ಶರವೇಗದ ಕ್ಯಾಬಿನೆಟ್" ನೀಡಲು ಹೈಕಮಾಂಡ್ ತೀರ್ಮಾನಿಸಿದೆ ಎಂಬ ಮಾತುಗಳ ಬೆನ್ನಲ್ಲೇ ಬೊಮ್ಮಾಯಿಯೇ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂಬ ಊಹಾಪೋಹ ಸುದ್ದಿ ಹರಿದಾಡಿತ್ತು. ಇದೆಲ್ಲದ್ದಕ್ಕೂ ಕೇಂದ್ರ ವರಿಷ್ಠರು ಕರ್ನಾಟಕ ಭೇಟಿ ವೇಳೆ ತಿಲಾಂಜಲಿ ನೀಡಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕಾಮನ್ ಮ್ಯಾನ್ ಬೊಮ್ಮಾಯಿ ಆಡಳಿತದ ವೈಖರಿಗೆ ನಮ್ಮ ತೃಪ್ತಿಯಿದೆ. ಉತ್ತಮ ಆಡಳಿತ ನೀಡುತ್ತಿದ್ದಾರೆ. ಯಾವ ಕಾರಣಕ್ಕೂ ಸಿಎಂ ಬದಲಾಗಲ್ಲ ಎಂದು ಬಿಜೆಪಿ ವರಿಷ್ಠರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಕಾರಣಾಂತರದಿಂದ ಖಾಲಿಯಾಗಿರುವ ಸಂಪುಟ ಸ್ಥಾನಗಳನ್ನು ಭರ್ತಿ ಮಾಡುವ ಸುಳಿವು ಕೊಟ್ಟು ದೆಹಲಿ ಪ್ರಯಾಣ ಮಾಡಿದ್ದರು.

ಪ್ರಮಾಣ ವಚನ ಕನಸಲ್ಲಿ ಶಾಸಕರು:
ಕೇಂದ್ರ ವರಿಷ್ಠರು ರಾಜ್ಯ ಭೇಟಿಯ ವೇಳೆ ಬೊಮ್ಮಾಯಿ ಆಡಳಿತದ ವೈಖರಿ ಜತೆಗೆ ಶಾಸಕರ ಕಾರ್ಯ ವೈಖರಿ ಪೋಗ್ರಸ್ ವರದಿಗಳನ್ನು ಶಾಸಕರ ವಾರು ಅಮಿತ್ ಷಾ ಸಂಗ್ರಹಿಸಿದ್ದರು. ಮುಂದಿನ ಚುನಾವಣೆ ಗುರಿಯಾಗಿಟ್ಟುಕೊಂಡು ಶಾಸಕರ ಮೌಲ್ಯಮಾಪನ ಮಾಡಿದ್ದರು. ಇದೀಗ ಅಮಿತ್ ಷಾ ಅವರು ನೀಡುವ ವರದಿ ಆಧಾರದ ಮೇಲೆ ಯಾರಿಗೆ ಸಚಿವರಾಗುವ ಅದೃಷ್ಠ ಒಲಿಯಲಿದೋ ಕಾದು ನೋಡಬೇಕು. ಈ ಬಾರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ಕಾರಣವೇ ಸಂಪುಟ ಪುನರ್ ರಚನೆ ಎಂದು ಹೇಳಲಾಗುತ್ತಿದೆ.

ಹಿರಿಯ ನಾಗರಿಕ ಸಚಿವರಿಗೆ ಕೋಕ್
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹಲವು ಸಚಿವ ಸ್ಥಾನ ಖಾಲಿಯಿವೆ. ಸಿಡಿ ಕೇಸಿನಲ್ಲಿ ಸಂಪುಟದಿಂದ ಕೆಳಗಿದ ಜಾರಕಿಹೊಳಿ ಸಚಿವರಾಗಲು ಹಪಹಪಿಸುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರು ಕಮೀಷನ್ ಕೇಸಲ್ಲಿ ರಾಜೀನಾಮೆ ನೀಡಿದ್ದಾರೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಎಂ ಕ್ಯಾಂಡಿಡೇಟ್ ಅಶ್ವತ್ಥ್ ನಾರಾಯಣ್ ಅವರ ಹೆಸರು ತಳಕು ಹಾಕಿಕೊಂಡಿದೆ. ಇನ್ನೂ ಅನೇಕ ಸಚಿವರ ಕಾರ್ಯಶೈಲಿ ತೃಪ್ತಿಕರವಾಗಿಲ್ಲ. ಹೀಗಾಗಿ ಮುಂದಿನ ಚುನಾವಣೆ ಗುರಿಯಿಟ್ಟುಕೊಂಡು ನೋಡುವುದಾರೆ ಸಂಪುಟ ಪುನಾರಚನೆ ಬಿಜೆಪಿಗೆ ಅನಿವಾರ್ಯ. ಅನೇಕ ಸಲ ಸಂಪುಟ ಸ್ಥಾನ ಅಲಂಕರಿಸಿರುವರಿಗೆ ಕೋಕ್ ಕೊಟ್ಟು ಪಕ್ಷದ ಸಂಘಟನೆ ಕೆಲಸಕ್ಕೆ ನಿಯೋಜಿಸುವ ವರಿಷ್ಠರ ಪ್ಲಾನ್ ಈಗಲಿನಿಂದಲೇ ಕಾರ್ಯಗತಗೊಳಿಸುವ ಅಗತ್ಯತೆ ಬಿದ್ದಿದೆ. ಈ ಎಲ್ಲಾ ವಿಚಾರಗಳ ನಡುವೆ ಬೊಮ್ಮಾಯಿ ಕ್ಯಾಬಿನೆಟ್ ಪುನಾರಚನೆಗೆ ಈ ಬಾರಿ ಕೇಂದ್ರ ವರಿಷ್ಠರು ಗ್ರೀನ್ ಸಿಗ್ನಲ್ ಕೊಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಂತೂ ಬೊಮ್ಮಾಯಿ ವಾಪಸು ಬಂದ ಬಳಿಕವ ಈ ಎಲ್ಲಾ ಗೊಂದಲಗಳಿಗೆ ತೆರೆ ಬಳಲಿದೆ.












Click it and Unblock the Notifications