ಚಂದ್ರಶೇಖರ್ ಸಾವಿನ ತನಿಖೆ, ಜನಸಂಕಲ್ಪ ಯಾತ್ರೆ ಬಗ್ಗೆ ಸಿಎಂ ಪ್ರತಿಕ್ರಿಯೆ
ಬೆಂಗಳೂರು, ನವೆಂಬರ್ 06: ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರನ ಸಾವಿನ ವಿಚಾರ, ಈಗಾಗಲೇ ಸಿಕ್ಕಿರುವ ಮಾಹಿತಿಯ ವರದಿ ನೀಡಿದರೆ ತನಿಖೆಯ ದಿಕ್ಕು ಕುರಿತು ಸೂಕ್ತವಾಗಿ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದರ ವರದಿ ನೀಡಿದರೆ ಯಾವ ದಿಕ್ಕಿನಲ್ಲಿ ಸಾವಿನ ಪ್ರಕರಣದ ತನಿಖೆಯನ್ನು ನಡೆಸಬೇಕು ಎಂಬುದರ ಬಗ್ಗೆ ಸೂಚನೆ ನೀಡಲಾಗುವುದು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ತನಿಖೆ ಮೂಲಕ ಸತ್ಯಾಂಶ ಹೊರಬರಲಿದೆ ಎಂದು ಅವರು ತಿಳಿಸಿದರು.
ಸೋಮವಾರ ಮತ್ತೆ ಬಿಜೆಪಿಯ ಬಹುಮುಖ್ಯವಾದ 'ಜನ ಸಂಕಲ್ಪ ಯಾತ್ರೆ'ಯು ಮುಂದುವರಿಯಲಿದೆ. ಸೋಮವಾರದಿಂದ ನಡೆಯಲಿರುವ ಮೂರು ದಿನದ ಈ ಯಾತ್ರೆಯು ನಾಳೆ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ. ನಂತರ ಗದಗ, ಹಾವೇರಿ ಹಾಗೂ ಬೆಳಗಾವಿ ಭಾಗದಲ್ಲಿ ಸಂಕಲ್ಪ ಯಾತ್ರೆ ಜರುಗಲಿದೆ. ಸಹಸ್ರ ಸಂಖ್ಯೆಯಲ್ಲಿ ಜನರು, ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಯಾತ್ರೆಯು ಡಿಸೆಂಬರ್ವರೆಗೆ ನಡೆಯಲಿದೆ ಎಂದು ಅವರು ವಿವರಿಸಿದರು.
ಇದೇ ತಿಂಗಳು ST, ST ಸಮಾವೇಶ
ಇತ್ತೀಚೆಗೆ ಕಲ್ಯಾಣ ಕರ್ನಾಟಕದಲ್ಲಿ ನಡೆದ ಒಬಿಸಿ ಸಮಾವೇಶಕ್ಕೆ ಭಾರಿ ಸ್ಪಂದನೆ ದೊರೆತಿದೆ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿಜಯಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಇದೇ ರೀತಿ ನವೆಂಬರ್ 20 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ (ಎಸ್ಟಿ )ಮೋರ್ಚಾದ ಬೃಹತ್ ಸಮಾವೇಶ ಹಾಗೂ ನವೆಂಬರ್ 30ರಂದು ಮೈಸೂರಿನಲ್ಲಿ ಪರಿಶಿಷ್ಟ ಪಂಗಡ (ಎಸ್ಸಿ)ದ ಬೃಹತ್ ಸಮಾವೇಶ ನಡೆಸಲಾಗುವುದು. ಈ ಬಗ್ಗೆ ನಿರ್ಧಾರಗಳು ಬಹುತೇಕ ಅಂತಿಮವಾಗಿವೆ ಎಂದು ತಿಳಿಸಿದರು.
ಚರ್ಚೆ ಬಳಿಕ ಸಂಪುಟ ವಿಸ್ತರಣೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಚಿವರಾಗಿದ್ದಾಗ ಸೋಲಾರ್ ಶಕ್ತಿ ಉತ್ಪಾದನೆಗೆ ಖಾಸಗಿಯವರಿಗೆ ನೀಡುವ ಲೈಸನ್ಸ ವಿಚಾರದಲ್ಲಿ ನಡೆದ ಅವ್ಯವಹಾರವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದರು. ಅದರ ಬಗ್ಗೆ ಬಿಜೆಪಿ ತನಿಖೆ ನಡೆಸುವುದಾಗಿ ಜನಸಂಕಲ್ಪ ಯಾತ್ರೆ ವೇಳೆ ತಿಳಿಸಿದ್ದೇವೆ, ಅದು ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಕ್ಷೇತ್ರದ ವಿಚಾರವಾಗಿ ಭೇಟಿ ಮಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರವು ಗಮನದಲ್ಲಿದೆ. ಸದ್ಯ ಕೇಂದ್ರ ನಾಯಕರು ಹಿಮಾಚಲ ಪ್ರದೇಶದ ಚುನಾವಣೆ ನಿರತರಾಗಿದ್ದು, ಅವರ ತಿಳಿಸಿದ ಕೂಡಲೇ ನಾನು ದೆಹಲಿಗೆ ಹೋಗಿ ಆ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದರು.
ವಂದೇ ಭಾರತ್ ಎಕ್ಸಪ್ರೆಸ್ ರೈಲು ಕನಸು ನನಸು
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ನವೆಂಬರ್ 11ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಬಹುದಿನದ ಕನಸಾದ ಚೆನ್ನೈ-ಬೆಂಗಳೂರು-ಮೈಸೂರಿಗೆ ಸಂಚರಿಸುವ 'ವಂದೆ ಭಾರತ್' ಎಕ್ಸಪ್ರೆಸ್ ರೈಲಿನ ಮೊದಲ ಚಾಲನೆಗೆ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಲದಾದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಅವರು ಉದ್ಘಾಟಿಸಲಿದ್ದಾರೆ. ಇದು ವಾರ್ಷಿಕವಾಗಿ 25ಮಿಲಿಯನ್ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರ ರಾಜಧಾನಿಯ ನಂತರ ದೊಡ್ಡ ಟರ್ಮಿನಲ್ ಇದಾಗಿದೆ. ಇದರಿಂದಾಗಿ ಇಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108ಅಡಿ ಎತ್ತರದ ಬೃಹತ್ ಕೆಂಪೇಗೌಡರ 'ಪ್ರಗತಿ ಪ್ರತಿಮೆ' ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಥೀಮ್ ಪಾರ್ಕ್ ಸಹ ಇದೇ ವೇಳೆ ಉದ್ಘಾಟನೆಗೊಳ್ಳಲಿದೆ ಎಂದು ಬೊಮ್ಮಾಯಿ ವಿವರಿಸಿದರು.