Karnataka Rains : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದಲ್ಲಿ 4ದಿನ ಮಳೆ ನಿರೀಕ್ಷೆ
ಬೆಂಗಳೂರು, ಡಿಸೆಂಬರ್ 25: ನೈರುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತೆ ಪ್ರಬಲ ವಾಯುಭಾರ ಕುಸಿತ ಕಂಡು ಬಂದ ಪರಿಣಾಮ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಕರ್ನಾಟಕದ ಕೆಲವೆಡೆ ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
'ಮಾಂಡೌಸ್' ಚಂಡಾಮಾರುತದ ಅಬ್ಬರ ತಣ್ಣಗಾಯಿತು ಎಂದುಕೊಳ್ಳುತ್ತಿರುವಾಗಲೇ ವಾತಾವರಣದಲ್ಲಿ ಮತ್ತೆ ವೈಪರಿತ್ಯಗಳು ಘಟಿಸಿವೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿ ಶ್ರೀಲಂಕಾ ದೇಶದಿಂದ 40ಕಿ.ಮೀ. ದೂರ ಅಂದರೆ ಚೆನ್ನೈನಿಂದ 210ಕಿ.ಮೀ.ದೂರದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಸದಾನಂದ ಅಡಿಗ ಅವರು ತಿಳಿಸಿದ್ದಾರೆ.
ಈ ವೈರಿತ್ಯವು ಭಾನುವಾರ ಸಂಜೆ ವೇಳೆಗೆ ಶ್ರೀಲಂಕಾ ಕರಾವಳಿ ಪ್ರದೇಶ ದಾಟಲಿದೆ. ಮರುದಿನ ಸೋಮವಾರ ಬೆಳಗ್ಗೆ ಪಶ್ಚಿಮ ದಿಕ್ಕಿನೆಡೆಗೆ ಸಾಗಿ ಕೋಮರಿನ್ ಪ್ರದೇಶ ತಲುಪಿದೆ. ಇದರ ಪ್ರಭಾವದಿಂದಾಗಿ ಮುಂದಿನ ಐದು ದಿನ ಪೈಕಿ ನಾಲ್ಕು ದಿನಬೆಂಗಳೂರು, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ಹಗುರು ಮಳೆ ಆಗಲಿದೆ. ಇದೇ ವೇಳೆ ಉತ್ತರ ಒಳನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

ಬೆಂಗಳೂರು ಸೇರಿ ಕೆಲವೆಡೆ ಮಳೆ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು ಹಾಗೂ ರಾಮನಗರದ ಒಂದೆರಡು ಕಡೆಗಳಲ್ಲಿ ಮುಂದಿನ ನಾಲ್ಕು ದಿನ ಮಳೆ ಸುರಿಯಲಿದೆ. ಡಿಸೆಂಬರ್ 27 ಮತ್ತು 28ರಂದು ಕೊಡಗು, ಮೈಸೂರು, ಚಾಮರಾಜ ನಗರದಲ್ಲಿ ಗುಡುಗು ಸಹಿತಿ ಮಳೆ ಬೀಳಲಿದೆ ಎಂದರು.
ಇನ್ನೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ 48ಗಂಟೆ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಆಗಾಗ ಸೋನೆ ಮಳೆ ಆಗುವ ಸಾಧ್ಯತೆ ಇದೆ. ಗರಿಷ್ಠ 27 ಕನಿಷ್ಠ 152 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.












Click it and Unblock the Notifications