ಜಾತಿ ನಿಂದನೆ ಪ್ರಕರಣದಲ್ಲೂ ವಕೀಲ ಜಗದೀಶ್ಗೆ ಜಾಮೀನು: ಜೈಲಿನಿಂದ ಶೀಘ್ರದಲ್ಲಿ ರಿಲೀಸ್!
ಜಾತಿ ನಿಂದನೆ ಆರೋಪ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ವಕೀಲ ಜಗದೀಶ್ ಮಹದೇವ್ ಅವರಿಗೆ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಕೋರ್ಟ್ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಕಳೆದ ಎರಡು ದಿನದ ಹಿಂದಷ್ಟೇ ಜಗದೀಶ್ಗೆ ಜಾಮೀನು ಮಂಜೂರು ಆಗಿತ್ತು. ಇದೀಗ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ದಾಖಲಿಸಿರುವ ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ಬಾಕಿಯಿದ್ದು, ಈ ಪ್ರಕರಣದಲ್ಲಿ ಬಾಡಿ ವಾರಂಟ್ ಆದೇಶ ಹೊರಡಿಸಿಲ್ಲ. ಹೀಗಾಗಿ ಅತಿ ಶೀಘ್ರದಲ್ಲಿಯೇ ವಕೀಲ ಜಗದೀಶ್ ಮಹದೇವ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕೋರ್ಟ್ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ಗೆ ಜಾಮೀನು ಮಂಜೂರು
ಜಾತಿ ನಿಂದನೆ ಪ್ರಕರಣ:
ಕುಮಾರಸ್ವಾಮಿ ಲೇಔಟ್ ನಿವಾಸಿ ಮುತ್ತಯ್ಯ ಎಂಬುವರು ವಕೀಲ ಜಗದೀಶ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಕೋರಿ ವಕೀಲ ಜಗದೀಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಮಾ. 07 ಕ್ಕೆ ತೀರ್ಪು ಕಾಯ್ದಿರಿಸಲಾಗಿತ್ತು. ಇದೀಗ ಎರಡನೇ ಪ್ರಕರಣದಲ್ಲೂ ಜಾಮೀನು ಸಿಕ್ಕಿದ್ದು, ಇನ್ನು ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಗೆ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ಬಾಕಿಯಿದೆ.
ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ವಕೀಲ ಜಗದೀಶ್ ಮತ್ತು ಇತರೆ ಆರೋಪಿಗಳಿಗೆ ಕೆಲ ದಿನಗಳ ಹಿಂದೆ 68ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾ. ಕಾಶಿಂ ಚೂರಿಖಾನ್ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದರು. ಜಾತಿ ನಿಂದನೆ ಪ್ರಕರಣದ ಜಾಮೀನು ಅರ್ಜಿ ಬಾಕಿ ಇದ್ದಿದ್ದರಿಂದ ಜಗದೀಶ್ ಬಿಡುಗಡೆಯಾಗಿರಲಿಲ್ಲ. ಐವತ್ತು ಸಾವಿರ ರೂ. ಮೊತ್ತದ ಭದ್ರತಾ ಬಾಂಡ್, ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸಾಕ್ಷಿಗಳನ್ನು ಹೆದರಿಸುವಂತಿಲ್ಲ. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಸಾಮಾಜಿಕ ಜಾಲ ತಾಣ ಬಳಿಸಿ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಗದೀಶ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.
ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಶರತ್ ಖಾದ್ರಿ, ಪ್ರಶಾಂತಿ ಸುಭಾಷ್, ಜಗದೀಶ್ ಪುತ್ರ ಆರ್ಯಗೌಡ ಅವರಿಗೂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಬಹು ಚರ್ಚೆಗೆ ನಾಂದಿ ಹಾಡಿದ್ದ ಕೋರ್ಟ್ ಆವರಣದ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ವಕೀಲ ನಾರಾಯಣಸ್ವಾಮಿ ನೀಡಿದ್ದ ದೂರಿನ ಪ್ರಕರಣದಲ್ಲಿ ಜಾಮೀನು ಸಿಕ್ಕಿದಂತಾಗಿತ್ತು.
Recommended Video