7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ವಂತಿಗೆ ಸುತ್ತೋಲೆ
ಬೆಂಗಳೂರು, ಅಕ್ಟೋಬರ್ 03: ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಸರ್ಕಾರ ವರದಿಯನ್ನು ಜಾರಿಗೊಳಿಸಿದೆ. 558 ಪುಟಗಳ ಸಂಪುಟ-1ರ ವರದಿಯಲ್ಲಿ ಸಾಮೂಹಿಕ ವಿಮಾ ಯೋಜನೆ (ಇಜಿಐಎಸ್) ಕುರಿತು ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಆಯೋಗ ಮಾಡಿದೆ. ಈಗ ಸರ್ಕಾರ ಸಾಮೂಹಿಕ ವಿಮಾ ಯೋಜನೆ ವಂತಿಗೆ ಮೊತ್ತವನ್ನು ಪರಿಷ್ಕರಣೆ ಮಾಡುವ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ.
ಈ ಕುರಿತು ನಿರ್ದೇಶಕರು ವಿಮಾ ಇಲಾಖೆ ಎಲ್ಲಾ ಜಿಲ್ಲಾ ವಿಮಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ 7ನೇ ವೇತನ ಆಯೋಗದ ಶಿಫಾರಸು ಪ್ರಕಾರ ಸಾಮೂಹಿಕ ವಿಮಾ ಯೋಜನೆ (EGIS) ವಂತಿಗೆ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಯೋಜನಾ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2, ಆರ್ಥಿಕ ಇಲಾಖೆ, ಇವರ ಪತ್ರವನ್ನು ಉಲ್ಲೇಖಿಸಲಾಗಿದೆ.

ಸುತ್ತೋಲೆಯ ವಿವರ: ಸುತ್ತೋಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ನೌಕರರ ಸಾಮೂಹಿಕ ವಿಮಾ ವಂತಿಗೆ ಪರಿಷ್ಕರಣೆಯ ಸಂಬಂಧ ಸರ್ಕಾರದಿಂದ ಅದೇಶವು ಹೊರಡಿಸದೆಯೇ, ವೇತನ ಬಟವಾಡೆ ಅಧಿಕಾರಿಗಳು 08/2024ರ ಮಾಹೆಯ ವೇತನದಲ್ಲಿ ಹೊಸ EGIS ವಂತಿಗೆ (ಹೆಚ್ಚಿನ) ಕಟಾಯಿಸಿದ್ದು, ಸರ್ಕಾರದಿಂದ ಆದೇಶವು ಹೊರಡಿಸಿದ ನಂತರ ಕಾಟಾಯಿಸಬೇಕಾಗಿರುತ್ತದೆ.
ಈ ಹೆಚ್ಚಿನ ವಂತಿಗೆಯನ್ನು ಮುಂದಿನ ತಿಂಗಳ ವಂತಿಕೆಗೆ ಹೊಂದಾಣಿಕೆ ಮಾಡಲು ಹಾಗೂ ಯಾವ ನೌಕರರ ಹೆಚ್ಚಿನ ವಂತಿಗೆ ಹಿಡಿಯಲಾಗಿದೆಯೋ ಅವರುಗಳ ಪಟ್ಟಿಯನ್ನು ಪಡೆದು, ಕ್ರಮ ತೆಗೆದುಕೊಳ್ಳುವ ಸಂಬಂಧ ಪತ್ರದಲ್ಲಿ ಸೂಕ್ತ ನಿರ್ದೇಶನ ನೀಡಿರುತ್ತಾರೆ. ಸದರಿ ಮಾಹಿತಿ ಪತ್ರದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ, ಅದರಂತೆ ಕ್ರಮ ವಹಿಸಲು ಸೂಚಿಸಿದೆ ಎಂದು ಹೇಳಿದ್ದಾರೆ.
ಆಯೋಗ ಮಾಡಿರುವ ಶಿಫಾರಸುಗಳು: ಆಯೋಗ ತನ್ನ ಶಿಫಾರಸಿನಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ್ಕಾರವು, ತನ್ನ ನೌಕರರಿಗೆ ಸಾಮೂಹಿಕ ವಿಮಾ ಯೋಜನೆಯನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ಉಳಿತಾಯಗಳು ಮತ್ತು ವಿಮಾ ಸೌಲಭ್ಯಗಳೆರಡನ್ನೂ ಹೊಂದಿದ್ದು, ಗ್ರೂಪ್-ಡಿ, ಗ್ರೂಪ್-ಸಿ ಮತ್ತು ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರು ಪ್ರತಿ ತಿಂಗಳು ಕ್ರಮವಾಗಿ ರೂ. 120, ರೂ. 240, ರೂ. 360 ಮತ್ತು ರೂ. 480 ಗಳ ವಂತಿಗೆ ನೀಡುವ ಅಗತ್ಯವಿದೆ ಎಂದು ಹೇಳಿದೆ.
ವಿಮಾ ರಕ್ಷಣೆಯ ಅಡಿಯಲ್ಲಿ ವಂತಿಗೆಯ ಒಂದು ಭಾಗವನ್ನು (ಪ್ರಸ್ತುತ ಶೇ. 25 ರಷ್ಟು) 'ವಿಮಾ ನಿಧಿಯಾಗಿ' ತೆಗೆದುಕೊಳ್ಳಲಾಗುತ್ತದೆ. ಸೇವೆ ಸಲ್ಲಿಸುತ್ತಿರುವ ನೌಕರನು ನಿಧನ ಹೊಂದಿದ ಪಕ್ಷದಲ್ಲಿ ರೂ. 1,20,000, ರೂ. 2,40,000, ರೂ. 3,60,000 ಮತ್ತು ರೂ. 4,80,000 ಗಳ ಮೊತ್ತವನ್ನು ಕ್ರಮವಾಗಿ ಗ್ರೂಪ್-ಡಿ, ಗ್ರೂಪ್-ಸಿ, ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರ ನಾಮ ನಿರ್ದೇಶಿತರಿಗೆ ಸಂದಾಯ ಮಾಡಲಾಗುತ್ತದೆ. ಉಳಿದ ವಂತಿಗೆಯನ್ನು (ಶೇ.75 ರಷ್ಟು) ಕಾಲ ಕಾಲಕ್ಕೆ ವಿಧಿಸಲಾಗುವ ಬಡ್ಡಿಯನ್ನು ಗಳಿಸುವ "ಉಳಿತಾಯ ನಿಧಿ" ಯಾಗಿ ಪರಿಗಣಿಸಲಾಗುತ್ತದೆ. ಸಂಗ್ರಹವಾದ ಈ "ಉಳಿತಾಯ ನಿಧಿ" ಯ ಜೊತೆಗೆ ಬಡ್ತಿಯನ್ನು ಸೇರಿಸಿ ನೌಕರನು ಸೇವೆಯಲ್ಲಿದ್ದಾಗ ನಿಧನ ಹೊಂದಿದಲ್ಲಿ ಅಥವಾ ನಿವೃತ್ತಿ ಸಂದರ್ಭದಲ್ಲಿ ಇದನ್ನು ಆತ ಅಥವಾ ಆಕೆಗೆ ಸಂದಾಯ ಮಾಡಲಾಗುತ್ತದೆ.
ಕೆಎಸ್ಜಿಇಎ, ನೌಕರರ ವಂತಿಗೆಯಲ್ಲಿ ಹತ್ತು ಪಟ್ಟು ಪರಿಷ್ಕರಣೆಯನ್ನು (ಪ್ರಸ್ತುತ ವಂತಿಗೆಯ 10 ರಷ್ಟು) ಕೋರಿದ್ದು, ಇದರ ಪರಿಣಾಮವಾಗಿ ಸೇವೆಯಲ್ಲಿರುವಾಗ ನಿಧನ ಹೊಂದಿದ ಸಂದರ್ಭದಲ್ಲಿ ಪಾವತಿಸಬಹುದಾದ ವಿಮೆ ಹಣವು ಹತ್ತು ಪಟ್ಟು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ನೌಕರರ ಉಳಿತಾಯ ನಿಧಿಗಳ ಮೇಲೆ ಪ್ರಸ್ತುತ ವಾರ್ಷಿಕ ಶೇ. 7.10 ರಷ್ಟು ಬಡ್ಡಿಯನ್ನು ಗಳಿಸಲಾಗುತ್ತಿದೆ ಎಂದು ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಈ ಯೋಜನೆಯು ಸರ್ಕಾರಿ ನೌಕರರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವುದಲ್ಲದೆ, ಸೇವೆಯನ್ನು ಸಲ್ಲಿಸುವ ನೌಕರರ ಜೀವಕ್ಕೆ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಹಾಗೆಯೇ, ಇದು ವಂತಿಗೆ ಆಧಾರಿತ ಯೋಜನೆಯಾಗಿರುವುದರಿಂದ ರಾಜ್ಯ ಸರ್ಕಾರವು ಅದರ ಬಡ್ಡಿ ಬಾಧ್ಯತೆಯನ್ನು ನೀಗಿಸಲು ಗಮನಾರ್ಹ ಆಯವ್ಯತ ಅವಕಾಶ ಕಲ್ಪಿಸುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದೆ.












Click it and Unblock the Notifications