Government Employee; ನಿವೃತ್ತ ಸರ್ಕಾರಿ ನೌಕರರ ಗಮನಕ್ಕೆ
ಬೆಂಗಳೂರು, ಡಿಸೆಂಬರ್ 29; ಕರ್ನಾಟಕ ಸರ್ಕಾರ ನಿವೃತ್ತ ಸರ್ಕಾರಿ ನೌಕರರ ವಿರುದ್ಧ ನ್ಯಾಯಾಂಗ ವ್ಯವಹರಣೆಯನ್ನು ಹೂಡುವಲ್ಲಿ ಕಾಲಮಿತಿ ಅನ್ವಯವಾಗುವ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ. ನಿವೃತ್ತ ಸರ್ಕಾರಿ ನೌಕರರಿಗಾಗಿ ವಿವರಗಳು ಇಲ್ಲಿವೆ.
ಅಜಯ್ ಎಸ್. ಕೊರಡೆ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-1) ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿ ಹಲವಾರು ಅಂಶಗಳನ್ನು ಪ್ರಸ್ತಾಪಿಸಲಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳಿಗೆ ಕಳಿಸಿ ಕೊಡಲಾಗಿದೆ.

ಸುತ್ತೋಲೆಯ ವಿವರಗಳು; ಈ ಸುತ್ತೋಲೆ ನಿವೃತ್ತ ಸರ್ಕಾರಿ ನೌಕರರ ವಿರುದ್ಧ ನ್ಯಾಯಾಂಗ ವ್ಯವಹರಣೆಯನ್ನು ಹೂಡುವಲ್ಲಿ ಕಾಲಮಿತಿ ಅನ್ವಯವಾಗುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಅಥವಾ ಮರುನೇಮಕಾತಿಯ ಅವಧಿಯಲ್ಲಿ ಘೋರ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆ ಎಸಗಿರುವುದು ಅಥವಾ ಅವರು ಸರ್ಕಾರಕ್ಕೆ ಅರ್ಥಿಕ ನಷ್ಟವನ್ನುಂಟು ಮಾಡಿದ ಆರೋಪವು ಇಲಾಖಾ ಅಥವಾ ನ್ಯಾಯಾಂಗ ವ್ಯವಹರಣೆಯಲ್ಲಿ ಸಾಬೀತಾದರೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 214ರಲ್ಲಿ ಅವರ ಪಿಂಚಣಿಯನ್ನು ತಡೆಹಿಡಿಯುವ ಅಥವಾ ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿರುತ್ತದೆ ಎಂದು ಹೇಳಿದೆ.
ಈ ನಿಯಮದ ಉಪನಿಯಮ (2)(b)(ii) ಮತ್ತು ಉಪನಿಯಮ (3) ರಲ್ಲಿ ಈ ನಿಯಮದಲ್ಲಿ ಉದ್ದೇಶಿತ ಇಲಾಖಾ ಅಥವಾ ನ್ಯಾಯಾಂಗ ವ್ಯವಹರಣೆಯನ್ನು ಸರ್ಕಾರಿ ನೌಕರನು ನಿವೃತ್ತನಾಗುವುದಕ್ಕೂ ಮುಂಚೆ ಹೂಡಿರದಿದ್ದರೆ, ಯಾವ ಘಟನೆ ಅಂತಹ ವ್ಯವಹರಣೆ ಹೂಡುವುದಕ್ಕೆ ಮುಂಚಿನ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ನಡೆದಿದೆಯೋ ಅಂತಹ ಘಟನೆಯ ಸಂಬಂಧದಲ್ಲಿ ಹೂಡತಕ್ಕದ್ದಲ್ಲವೆಂದು ತಿಳಿಸಲಾಗಿದೆ.
ಈ ಕಾಲಮಿತಿಯ ಉದ್ದೇಶವು ಸರ್ಕಾರಿ ನೌಕರರು ನಿವೃತ್ತರಾದ ಬಹುಕಾಲದ ನಂತರ ಅವರ ಮೇಲೆ ಇಲಾಖಾ ವಿಚಾರಣೆ ಅಥವಾ ನ್ಯಾಯಾಂಗ ವ್ಯವಹರಣೆಯನ್ನು ಹೂಡುವುದು ನೈಸರ್ಗಿಕ ನ್ಯಾಯದ ತತ್ವಕ್ಕೆ ವ್ಯತಿರಿಕ್ತವಾಗುವುದಲ್ಲದೆ ಇದರಿಂದ ಅವರು ಎದುರಿಸಬೇಕಾಗುವ ಮಾನಸಿಕ ಮತ್ತು ಆರ್ಥಿಕ ತೊಂದರೆಗಳಿಂದ ಅವರನ್ನು ರಕ್ಷಿಸುವುದಾಗಿದೆ.
ಆದಾಗ್ಯೂ, ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ತಪ್ಪಿತಸ್ಥರಿಂದ ಭರಿಸಿಕೊಳ್ಳುವ ತನ್ನ ಅಧಿಕಾರವನ್ನು ಅಥವಾ ತಪ್ಪಿತಸ್ಥ ಸರ್ಕಾರಿ ನೌಕರರು ನಿವೃತ್ತಿ ಹೊಂದಿರುವ ಕಾರಣಕ್ಕೆ ಮಾತ್ರ ಅವರು ಸೇವೆಯಲ್ಲಿದ್ದಾಗ ಎಸಗಿದ್ದ ಘೋರ ದುರ್ನಡತೆಗೆ ಅವರ ವಿರುದ್ಧ ಕಾನೂನಿನ ರೀತ್ಯಾ ಶಿಕ್ಷೆಯನ್ನು ವಿಧಿಸಲು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ನಡೆಸುವ ಸರ್ಕಾರದ ಜವಾಬ್ದಾರಿಯನ್ನು ಈ ಕಾಲಮಿತಿಯಿಂದಾಗಿ ಸರ್ಕಾರವು ಕೈಬಿಟ್ಟಿದೆಯೆಂದು ಭಾವಿಸತಕ್ಕದ್ದಲ್ಲ.
ಮೇಲೆ ತಿಳಿಸಿದ ನಿಯಮ 214 ರಲ್ಲಿನ ಅವಕಾಶಗಳು ಮೂಲತಃ ನಿವೃತ್ತ ಸರ್ಕಾರಿ ನೌಕರನ ಪಿಂಚಣಿಯನ್ನು ಹಿಂಪಡೆಯಲು ಅಥವಾ ತಡೆಹಿಡಿಯಲು ಸರ್ಕಾರ ಹೊಂದಿರುವ ವಿವೇಚನಾತ್ಮಕ ಅಧಿಕಾರಕ್ಕೆ ಸಂಬಂಧಿಸಿರುವುದು ಗಮನಾರ್ಹವಾಗಿರುತ್ತದೆ.
ನಿಯಮ 214ರ ಉಪನಿಯಮ (3) ರಲ್ಲಿ ವಿಧಿಸಲಾದ ನಾಲ್ಕು ವರ್ಷಗಳ ಕಾಲಮಿತಿ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಹೂಡಿದ ಇಲಾಖಾ ವಿಚಾರಣೆ ಅಥವಾ ನ್ಯಾಯಾಂಗ ವ್ಯವಹರಣೆಗಳು ಮತ್ತು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅದೇ ನಿಯಮದಡಿಯಲ್ಲಿ ಮುಂದುವರೆದಿದೆ ಎನ್ನಲಾದ ಅಂತಹ ವ್ಯವಹರಣೆಯಲ್ಲಿ ಆತನು ದೋಷಿಯೆಂದು ಸಾಬೀತಾದಲ್ಲಿ ಅತನ ಪಿಂಚಣಿಯನ್ನು ಹಿಂಪಡೆಯುವ ಅಥವಾ ತಡೆಹಿಡಿಯುವ ಕ್ರಮದ ಮೇಲೆ ಪರಿಣಾಮ ಬೀರುತ್ತದೆ.
ಅಂತಹ ವ್ಯವಹರಣೆಯ ಫಲಿತಾಂಶವಾಗಿ ಅವನು ಸರ್ಕಾರಕ್ಕೆ ಉಂಟುಮಾಡಿದ ನಷ್ಟವನ್ನು ಆತನ ಪಿಂಚಣಿಯೇತರ ಆಸ್ತಿಗಳಿಂದ ಸಿವಿಲ್ ಮೊಕದ್ದಮೆಯನ್ನು ಹೂಡುವ ಮೂಲಕ ವಸೂಲು ಮಾಡುವ ಕ್ರಮದ ಮೇಲಾಗಲೀ ಅಥವಾ ಸೇವೆಯಲ್ಲಿದ್ದಾಗ ಅಥವಾ ಮರುನೇಮಕಾತಿ ಅವಧಿಯಲ್ಲಿ ಆತನು ಎಸಗಿದ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆಯ ಅಪರಾಧಕ್ಕಾಗಿ ಭಾರತೀಯ ದಂಡ ಸಂಹಿತೆಯನ್ವಯ ಆತನ ಮೇಲೆ ಕ್ರಿಮಿನಲ್ ವ್ಯವಹರಣೆಯಲ್ಲಿ ಶಿಕ್ಷೆಯನ್ನು ವಿಧಿಸುವ ಕ್ರಮದ ಮೇಲೆ ಈ ಕಾಲಮಿತಿಯು ಪರಿಣಾಮ ಬೀರುವುದಿಲ್ಲ.
ಆದುದರಿಂದ, ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಅಥವಾ ಮರುನೇಮಕಾತಿ ಅವಧಿಯಲ್ಲಿ ಎಸಗಿದ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆಯ ಅಪರಾಧಕ್ಕಾಗಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ನಡೆಸುವಲ್ಲಿ ಅಥವಾ ಅವರು ಸರ್ಕಾರಕ್ಕೆ ಉಂಟುಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲು ಮಾಡಲು ಅಂತಹ ನೌಕರರ ಮೇಲೆ ಸಿವಿಲ್ ವ್ಯವಹರಣೆಯನ್ನು ಹೂಡುವಲ್ಲಿ ನಿಯಮ 214(3) ರಲ್ಲಿ ತಿಳಿಸಿದ ಕಾಲಮಿತಿಯ ನಿರ್ಬಂಧ ಅನ್ವಯಿಸುವುದಿಲ್ಲ. ಅಂತಹ ವ್ಯವಹರಣೆಗಳನ್ನು ಹೂಡುವಲ್ಲಿ ತತ್ಸಂಬಂಧ ಕಾಯ್ದೆಗಳಲ್ಲಿ ತಿಳಿಸಿರುವ ಕಾಲಮಿತಿ ಅನ್ವಯವಾಗುತ್ತದೆ.
ಈ ಮೇಲಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಆಡಳಿತ ಇಲಾಖೆಗಳು ಸೇವೆಯಿಂದ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವ ಪ್ರಸ್ತಾವನೆಗಳನ್ನು ಅಥವಾ ಅವರು ಸರ್ಕಾರಕ್ಕೆ ಉಂಟುಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲು ಮಾಡಲು ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡುವ ಪ್ರಸ್ತಾವನೆಗಳನ್ನು ಇತ್ಯರ್ಥಪಡಿಸತಕ್ಕದ್ದು. ಈಗಾಗಲೇ ಕಾಲಮಿತಿಯಿಂದ ಬಾಧಿತವಾಗಿರುತ್ತವೆ ಎಂದು ಪರಿಗಣಿಸಿದ ಪ್ರಸ್ತಾವನೆಗಳನ್ನು ಈ ಮೇಲಿನಂತೆ ಪುನರ್ಪರಿಶೀಲಿಸತಕ್ಕದ್ದು ಎಂದು ಸುತ್ತೋಲೆ ಹೇಳಿದೆ.












Click it and Unblock the Notifications