ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಿಐಡಿ ತನಿಖೆ
ಬೆಂಗಳೂರು, ಮಾರ್ಚ್ 23 : ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಿಐಡಿ ತನಿಖೆ ನಡೆಯಲಿದೆ. ಮಾರ್ಚ್ 29ರಂದು ವಿಷಯದ ಮರುಪರೀಕ್ಷೆ ನಡೆಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ವಿಧಾನಪರಿಷತ್ತಿನಲ್ಲಿ ಹೇಳಿಕೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು, 'ರಸಾಯನ ಶಾಸ್ತ್ರ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ. ಇಲಾಖಾ ತನಿಖೆಯಿಂದ ಪ್ರಕರಣದ ಪೂರ್ಣ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸ ಇಲ್ಲ' ಎಂದು ತಿಳಿಸಿದ್ದಾರೆ. [ರಸಾಯನಶಾಸ್ತ್ರ ಮರು ಪರೀಕ್ಷೆ ದಿನಾಂಕ ಪ್ರಕಟ]

2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು : 'ಮಾರ್ಚ್ 21ರ ಸೋಮವಾರ 2.19 ಲಕ್ಷ ವಿದ್ಯಾರ್ಥಿಗಳು ರಸಾಯನ ಶಾಸ್ತ್ರ ಪರೀಕ್ಷೆ ಬರೆದಿದ್ದರು. ಬಳ್ಳಾರಿ, ಮಾಲೂರು ಸೇರಿದಂತೆ ರಾಜ್ಯದ 4 ಕಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ನಮಗೆ ಸಿಕ್ಕಿದ ಪ್ರಶ್ನೆಪತ್ರಿಕೆ ಕೈಬರಹದ ರೂಪದಲ್ಲಿತ್ತು' ಎಂದು ಸಚಿವರು ಪರಿಷತ್ತಿಗೆ ವಿವರಣೆ ನೀಡಿದರು. [ಪ್ರಶ್ನೆ ಪತ್ರಿಕೆ ಸೋರಿಕೆ : ರಸಾಯನಶಾಸ್ತ್ರ ಪರೀಕ್ಷೆ ರದ್ದು]
'ಪಶ್ನೆ ಪತ್ರಿಕೆ ಸೋರಿಕೆಯಾದ ಕುರಿತು ಮೊದಲ ದೂರು ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಬಂತು. ಸೋರಿಕೆಯಾದ ಪತ್ರಿಕೆಯಲ್ಲಿದ್ದ 36 ಪ್ರಶ್ನೆಗಳು ಮೂಲ ಪ್ರಶ್ನೆಪತ್ರಿಕೆಯಲ್ಲೂ ಇದ್ದವು. ಇವು ವಾಟ್ಸ್ಪ್ ಮೂಲಕ ಸಾವಿರಾರು ಜನರಿಗೆ ತಲುಪಿರುವ ಸಾಧ್ಯತೆ ಇತ್ತು. ಆದ್ದರಿಂದ ಮರುಪರೀಕ್ಷೆಗೆ ಆದೇಶ ನೀಡಲಾಗಿದೆ' ಎಂದು ಸಚಿವರು ಹೇಳಿದರು. [ಪಿಯುಸಿ ಪರೀಕ್ಷೆ ವೇಳಾಪಟ್ಟಿ]
ಮಾರ್ಚ್ 28ರಂದು ಕನ್ನಡ ಪರೀಕ್ಷೆ ಇದೆ. ಮರುದಿನ ರಸಾಯನ ಶಾಸ್ತ್ರ ಪರೀಕ್ಷೆ ಎದುರಿಸುವುದು ಕಷ್ಟ. ಆದ್ದರಿಂದ, ಮರು ಪರೀಕ್ಷೆಯ ದಿನಾಂಕ ಬದಲಾವಣೆ ಮಾಡಬೇಕು ಎಂಬ ಆಗ್ರಹವನ್ನು ಸಚಿವರು ತಳ್ಳಿ ಹಾಕಿದ್ದಾರೆ. ಮಾರ್ಚ್ 30ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗುತ್ತದೆ. ಆದ್ದರಿಂದ, ಮಾ.29ರಂದೇ ಮರು ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications