196 ಕೋಟಿ ಲ್ಯಾಬ್ ಟೆಂಡರ್ ಅಕ್ರಮದ ಬಗ್ಗೆ ಸಿಐಡಿ ತನಿಖೆ
ಬೆಂಗಳೂರು, ಮೇ 09 : 'ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಮತ್ತು ಉಪಕರಣಗಳ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಸಲಾಗುತ್ತದೆ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. 'ಟೆಂಡರ್ ವಿಚಾರದಲ್ಲಿ ಸಜ್ಜನ ಪಕ್ಷಪಾತ ಮಾಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ರಾಜ್ಯದ 146 ತಾಲೂಕುಗಳಲ್ಲಿ ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಮತ್ತು ಉಪಕರಣಗಳ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸಿಐಡಿ ತನಿಖೆ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. [ಮಾಧ್ಯಮದ ಮೇಲೆ ಗೂಬೆ ಕೂರಿಸಿ ಮಾತು ಬದಲಿಸಿದ ಪಾಟೀಲರು]

'ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತಪ್ಪೆಸಗಿರುವುದು ಸಾಬೀತಾಗಿದೆ. ಈ ಕುರಿತು ಸಿಐಡಿ ತನಿಖೆ ನಡೆಸಲಾಗುತ್ತದೆ. ಪ್ರಯೋಗಾಲಯ ಸ್ಥಾಪಿಸುವ ಸಲುವಾಗಿ ಮೂರನೇ ಹಂತದಲ್ಲಿ ಕರೆದಿದ್ದ ಟೆಂಡರ್ಗಳಿಗೆ ಇಲಾಖೆಯ ಮುಖ್ಯ ಎಂಜಿನಿಯರ್ ಸಹಿ ಹಾಕಿಲ್ಲ. ಇವುಗಳನ್ನು ರದ್ದುಪಡಿಸಲಾಗುವುದು' ಎಂದು ಸಚಿವರು ತಿಳಿಸಿದರು. [ಪಾಟೀಲರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?]
'ಮೊದಲನೇ ಹಂತದಲ್ಲಿ 80 ತಾಲೂಕುಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲು ಪ್ರಸಾದ್ ರಾಯಪಾಟಿ ಎಂಬ ವ್ಯಕ್ತಿಗೆ ಸೇರಿದ ಕಂಪೆನಿಗೆ ಟೆಂಡರ್ ನೀಡಲು ನಿಯಮ ತಿದ್ದುಪಡಿ ಮಾಡಿರುವುದು ನನ್ನ ಗಮನಕ್ಕೆ ಬಂದೇ ಇಲ್ಲ. ಈ ಟೆಂಡರ್ಗಳಿಗೆ ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆದಿಲ್ಲ. ನಾನು ಸಜ್ಜನ ಪಕ್ಷಪಾತ ನಡೆಸಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದರು.
ಶೆಟ್ಟರ್ ಏನು ಹೇಳಿದ್ದರು? : 'ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಮತ್ತು ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. 196 ಕೋಟಿ ಹಗರಣದಲ್ಲಿ ಸಚಿವ ಎಚ್.ಕೆ.ಪಾಟೀಲ ನೇರವಾಗಿ ಭಾಗಿಯಾಗಿದ್ದಾರೆ. ಟೆಂಡರ್ ರದ್ದು ಪಡಿಸಿ, ಉನ್ನತ ಮಟ್ಟದ ಸಮಿತಿಯಿಂದ ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಶೆಟ್ಟರ್ ಒತ್ತಾಯಿಸಿದ್ದರು.












Click it and Unblock the Notifications