ಕೋವಿಡ್ ಪರಿಸ್ಥಿತಿ; ಮಕ್ಕಳಲ್ಲಿ ಅಪೌಷ್ಟಿಕತೆಯ ಆತಂಕ
ಬೆಂಗಳೂರು, ಡಿಸೆಂಬರ್ 02: ಕೋವಿಡ್ ಕಾರಣದಿಂದಾಗಿ ಶಾಲೆಗಳು ಮುಚ್ಚಿವೆ. ಕಳೆದ 8 ತಿಂಗಳಿನಿಂದ ಮಕ್ಕಳು ಮನೆಯಲ್ಲಿದ್ದಾರೆ. ಮುಂದಿನ ಕೆಲವು ತಿಂಗಳಿನಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ಪರಿಣಾಮ ಮಕ್ಕಳ ಮನೆಗಳಿಗೆ ಪೌಷ್ಠಿಕ ಆಹಾರಗಳನ್ನು ಪೂರೈಸುವ ಸರ್ಕಾರದ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆದಿಲ್ಲ. ಇದರಿಂದಾಗಿ ಅರ್ಥಿಕವಾಗಿ ಹಿಂದುಳಿದ ವರ್ಗಗಳ ಮನೆಗಳಿಗೆ ಸೇರಿದ ಮಕ್ಕಳಿಗೆ ಅಪೌಷ್ಟಿಕತೆ ಕಾಡುವ ನಿರೀಕ್ಷೆ ಇದೆ.
ಶಾಲೆಗಳು ಮುಚ್ಚಿರುವುದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತವಾಗಿದೆ. ಕರ್ನಾಟಕ ಸರ್ಕಾರ ನವೆಂಬರ್ನಲ್ಲಿ ರೇಷನ್ ಕಿಟ್ಗಳನ್ನು ಮಕ್ಕಳ ಮನೆಗೆ ತಲುಪಿಸಿ ಎಂದು ಆದೇಶ ನೀಡಿತ್ತು. ಜೂನ್ನಿಂದ ನವೆಂಬರ್ ತನಕ ರೇಷನ್ ಕಿಟ್ ಮಕ್ಕಳಿಗೆ ತಲುಪಿಲ್ಲ.

ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತವಾಯಿತು. ಕ್ಷೀರಭಾಗ್ಯ ಯೋಜನೆಯಡಿ ನೀಡುತ್ತಿದ್ದ ಹಾಲಿನ ಪೂರೈಕೆಯೂ ಸ್ಥಗಿತವಾಯಿತು. ಸರ್ಕಾರದಿಂದ ನೀಡಿದ್ದ ಹಾಲಿನ ಪುಡಿಗಳು ಸರ್ಕಾರಿ ಗೋಡಾನ್ಗಳಲ್ಲಿಯೇ ಉಳಿದಿವೆ.
ಬೆಂಗಳೂರು ನಗರದ ಲಿಂಗರಾಜಪುರಂನಲ್ಲಿ ನೆಂಬರ್ನಲ್ಲಿ ಆರೋಗ್ಯ ಕ್ಯಾಂಪ್ ನಡೆಸುವಾಗ 9 ವರ್ಷದ ಹುಡುಗಿಗೆ ಚರ್ಮ ರೋಗದ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಇದು ಮಿಟಮಿನ್ 'ಎ' ಕೊರತೆಯಿಂದ ಕಂಡುಬರುವ ರೋಗವಾಗಿದೆ.
ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಆರೋಗ್ಯ ತಜ್ಞರು ಮೊದಲ ಬಾರಿ ಲಾಕ್ ಡೌನ್ ಘೋಷಣೆಯಾದಾಗಲೇ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಸಮಾಜದಲ್ಲಿ ಕೆಳಹಂತದಲ್ಲಿರುವ ವರ್ಗದ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.
ಮಕ್ಕಳು ಶಾಲೆಗೆ ಹೋಗುವಾಗ ಹಾಲು, ಬಿಸಿಯೂಟದ ಮೂಲಕ ಅಗತ್ಯ ಪೌಷ್ಟಿಕಾಂಶ ಸಿಗುತ್ತಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ಮಿಟಮಿನ್ 'ಎ' ಕೊರತೆ ನೀಗಿಸಲು ಲಸಿಕೆ ನೀಡಲಾಗುತ್ತಿತ್ತು. ಆದರೆ, ಲಾಕ್ ಡೌನ್ ಬಳಿಕ ಇಂತಹ ಕಾರ್ಯಕ್ರಮಗಳು ರದ್ದಾಗಿವೆ.
ಆರ್ಥಿಕವಾಗಿ ಹಿಂದುಳಿದ ವರ್ಗದವರ ಮನೆಗಳಲ್ಲಿ ಮಕ್ಕಳಿಗೆ ಅನ್ನ, ಉಪ್ಪಿನಕಾಯಿ ಮುಂತಾದ ಆಹಾರಗಳು ಮಾತ್ರ ಸಿಗುತ್ತಿವೆ. ಇದರಿಂದಾಗಿ ಸೂಕ್ತ ಪೌಷ್ಟಿಕಾಂಶಗಳು ಸಿಗದ ಕಾರಣ ಅವರು ಮುಂದಿನ ದಿನಗಳಲ್ಲಿ ಅಪೌಷ್ಟಿಕತೆಗೆ ಒಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಬೆಂಗಳೂರು ಮೂಲಕ ಸಂಶೋಧಕ ಮತ್ತು ಆಹಾರ ನಮ್ಮ ಹಕ್ಕು ಸಂಸ್ಥೆಯ ಸದಸ್ಯರಾದ ಸಿದ್ದಾರ್ಥ ಜೋಶಿ ಆರ್ಟಿಐ ಮೂಲಕ ಅರ್ಜಿ ಹಾಕಿದ್ದರು. ಮಕ್ಕಳಿಗೆ ಒಣ ರೇಷನ್ ಕಿಟ್, ಮಧ್ಯಾಹ್ನದ ಬಿಸಿಯೂಟವನ್ನು ನೀಡಿಲ್ಲ ಎಂಬ ಮಾಹಿತಿ ಇದರಲ್ಲಿ ಸಿಕ್ಕಿದೆ. ಮಕ್ಕಳ ಅಪೌಷ್ಠಿಕತೆ ಬಗ್ಗೆ ಸರ್ಕಾರ ಸಮೀಕ್ಷೆಯನ್ನು ಸಹ ಮಾಡಿಸಿಲ್ಲ.
ಅಂಗನವಾಡಿ; ಶಾಲೆಗಳು ಮಾತ್ರವಲ್ಲ ಕೋವಿಡ್ ಸಂದರ್ಭದಲ್ಲಿ ಅಂಗನಾಡಿಗಳ ಕಾರ್ಯ ನಿರ್ವಹಣೆಗಳ ಮೇಲೆಯೂ ಪರಿಣಾಮ ಉಂಟಾಗಿದೆ. ಅಂಗನವಾಡಿಗೆ ಬರುವ ಪ್ರತಿ ಮಕ್ಕಳ ತೂಕವನ್ನು ಪ್ರತಿ ತಿಂಗಳು ಪರಿಶೀಲನೆ ಮಾಡಲಾಗುತ್ತಿತ್ತು. ಅಗತ್ಯ ಚಿಕಿತ್ಸೆ ಬೇಕಿರುವ ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಈ ಪ್ರಕ್ರಿಯೆ ಕೋವಿಡ್ನ ಹಲವಾರು ಕಾರ್ಯಗಳನ್ನು ನೀಡಿರುವುದರಿಂದ ಸ್ಥಗಿತಗೊಂಡಿದೆ.
6 ರಿಂದ 12 ವರ್ಷದ ಮಕ್ಕಳ ಬೆಳವಣಿಗೆಯ ಮಾಹಿತಿ ದಾಖಲಿಸಲು ವೆಬ್ ಸೈಟ್ ಇದೆ. ಆದರೆ, ಅದು ಅಪ್ ಡೇಟ್ ಆಗಿಲ್ಲ. ಅಂಗನವಾಡಿಯಲ್ಲಿ ಮಕ್ಕಳ ಬೆಳವಣಿಗೆ ದಾಖಲಿಸುವ ರೆಕಾರ್ಡ್ಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ನವೆಂಬರ್ 11ರಿಂದಲೇ ಅಂಗನಾಡಿಗಳನ್ನು ಆರಂಭಿಸುವಂತೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇನ್ನೂ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications