ಚಿಕ್ಕಮಗಳೂರು: ದತ್ತ ಜಯಂತಿಗೆ ಶಾಂತಿಯುತ ತೆರೆ
ಚಿಕ್ಕಮಗಳೂರು, ಡಿ.16: ಹಲವಾರು ವರ್ಷಗಳಿಂದ ವಿವಾದದ ಕೇಂದ್ರಬಿಂದು ಎನಿಸಿರುವ ಜಿಲ್ಲೆಯ ಧಾರ್ಮಿಕ ಕೇಂದ್ರ ಚಂದ್ರದ್ರೋಣ ಪರ್ವತ ಶ್ರೇಣಿಯ ಬಾಬಾ ಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಮಾಲಾ ಅಭಿಯಾನ, ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಸೋಮವಾರ ನೆರವೇರಿದೆ.
ಸಂಘ ಪರಿವಾರದ ನೇತೃತ್ವದಲ್ಲಿ ನಡೆದ ದತ್ತ ಮಾಲಾ ಅಭಿಯಾನ ಮತ್ತು ಜಿಲ್ಲಾಡಳಿತ ವತಿಯಿಂದ ನಡೆದ ದತ್ತ ಜಯಂತಿ ಚಂದ್ರದ್ರೋಣ ಪರ್ವತ ಶ್ರೇಣಿಯ ಬಾಬಾ ಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಾತ್ರೇಯ ಪಾದುಕೆ ದರ್ಶನದ ಮೂಲಕ ಈ ವರ್ಷದ ದತ್ತ ಜಯಂತಿ ತೆರೆ ಕಂಡಿದೆ.
ಮಂಗಳೂರು, ಉಡುಪಿ, ಬೆಂಗಳೂರು, ಶಿವಮೊಗ್ಗ, ಹರಿಹರ, ದಾವಣಗೆರೆ ಜಿಲ್ಲೆಗಳಿಂದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು ದತ್ತ ಪೀಠಕ್ಕೆ ಆಗಮಿಸಿದ್ದರು. ದತ್ತ ಭಕ್ತರು ಪೀಠದ ಸಮೀಪದ ಹೊನ್ನಮ್ಮನಹಳ್ಳದಲ್ಲಿ ಮಿಂದು ಅಲ್ಲಿಂದ ಕಾಲ್ನಡಿಗೆಯಲ್ಲಿ ದತ್ತ ಪೀಠಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತು ಗುಹೆ ಪ್ರವೇಶಿಸಿ ಪಾದುಕೆ ದರ್ಶನ ಪಡೆದರು.

ಕಳೆದ ಬಾರಿಗಿಂತ ಈ ಬಾರಿ ದತ್ತ ಭಕ್ತರ ಸಂಖ್ಯೆ ಕ್ಷೀಣಿಸಿದೆ. ದತ್ತ ಗುಹೆಯ ಹೊರಭಾಗದಲ್ಲಿ ಜಿಲ್ಲಾಡಳಿತ ನಿರ್ಮಿಸಿದ ತಾತ್ಕಾಲಿಕ ಶೆಡ್ ನಲ್ಲಿ ದತ್ತಾತ್ರೆಯ ಭಾವಚಿತ್ರವಿಟ್ಟು ಗಣಹೋಮ ಮತ್ತು ದತ್ತ ಹೋಮ ನೆರವೇರಿಸಿ ಇರುಮುಡಿ ಸಮರ್ಪಿಸಿದರು.
ಪೀಠಕ್ಕೆ ಬಂದ ದತ್ತ ಭಕ್ತರಿಗೆ ಜಿಲ್ಲಾಡಳಿತ ಅಗತ್ಯ ಸೌಲಭ್ಯ ಕಲ್ಪಿಸಿತ್ತು. ಶಂಕರ ದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಬಸವ ಮಂದಿರದ ಬಸವಾನಂದ ಸ್ವಾಮೀಜಿ ಗಂಗಾವತಿಯ ಮಧಾವನಂದ ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು.
ಭಜರಂಗದಳದ ರಾಜ್ಯ ಸಂಚಾಲಕ ಸೂರ್ಯ ನಾರಾಯಣ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಉತ್ತಮ ಆಡಳಿತ ನೀಡುತ್ತಾರೆ ಎಂಬ ಭಾವನೆ ರಾಜ್ಯದ ಜನತೆಯಲ್ಲಿತ್ತು. ಆದರೆ, ಅದು ಹುಸಿಯಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮನ ಹೆಸರು ಸೇರಿದೆ. ಅವರಿಗೆ ಮುಸ್ಲಿಂ ಮತ ಬೇಕು ಅಂದ್ರೆ ಅವರ ಹೆಸರನ್ನು ಸಿದ್ದಿಕ್ ರೆಹಮಾನ್ ಎಂದು ಬದಲಾಯಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.
ದತ್ತ ಪೀಠ ಹಿಂದೂಗಳ ಪವಿತ್ರ ಕ್ಷೇತ್ರ ಇದನ್ನು ಸರ್ಕಾರಿ ದಾಖಲೆಗಳೇ ಹೇಳುತ್ತವೆ. ಜಾತ್ಯಾತೀಯತೆ ಪ್ರತಿಪಾದಿಸಲು ಹೊರಟವರು. ದತ್ತ ಪೀಠವನ್ನು ಸೌಹಾರ್ದಯುತ ಕೇಂದ್ರವಾಗಿ ಮಾಡಲು ಹೊರಟಿದ್ದರು. ಕೆಳ ನ್ಯಾಯಾಲಯದಲ್ಲಿ ಅವರಿಗೆ ತಕ್ಕ ಶಾಸ್ತಿ ಯಾಗಿದೆ. ಈಗ ಸುಪ್ರೀಂ ಕೋರ್ಟ್ ನಲ್ಲಿ ವಿವಾದವಿದ್ದು, ಅಲ್ಲಿಯೂ ತೀರ್ಪು ನಮ್ಮ ಪರವಾಗಲಿದೆ ಎಂದರು.
ಬಿಗಿ ಬಂದೋ ಬಸ್ತ್ : ಸೋಮವಾರ ಬೆಳಗ್ಗೆ 7.30 ರಿಂದ ದತ್ತ ಪೀಠ ದರ್ಶನಕ್ಕೆ ಅವಕಾಶ ಕಲ್ಪಿಸಿ ಸಂಜೆ ಮುಕ್ತಾಯವಾಗಲಿದೆ. ಪ್ರಮುಖ ಧಾರ್ಮಿಕ ಆಚರಣೆಗಳು ಈಗಾಗಲೇ ಮುಕ್ತಾಯ ಕಂಡಿದೆ. ಪೀಠಕ್ಕೆ ತೆರಳುವ ಮಾರ್ಗ ಮಧ್ಯದ ಕೈ ಮರದ ಬಳಿ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದರು.
ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಾಲ್ ಸ್ಥಳದಲ್ಲೇ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡಿದರು. ಶಾಸಕರಾದ ಸುನೀಲ್ ಕುಮಾರ್, ಸಿ.ಟಿ.ರವಿ, ಜೀವರಾಜ್, ಜಿಪಂ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಸೇರಿದಂತೆ ಮತ್ತಿತರರು ದತ್ತ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications