ಮೋದಿ ಅಫಿಡವಿಟ್: ಸಿದ್ದರಾಮಯ್ಯಗೆ ಕಾಡುತ್ತಿರುವ ಪ್ರಶ್ನೆ ಏನು?
ಬೆಂಗಳೂರು, ಏ 10: ಗುಜರಾತಿನ ವಡೋದರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರದ ಜೊತೆ ನರೇಂದ್ರ ಮೋದಿ ಸಲ್ಲಿಸಿರುವ ಅಫಿಡವಿಟ್ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಹೋದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲದ ಪತ್ನಿಯ ಹೆಸರು ಈಗಿನ ಚುನಾವಣೆಯಲ್ಲಿ ಹೇಗೆ ಬಂತು, ಇದರಿಂದಲೇ ತಿಳಿಯುತ್ತದೆ ನರೇಂದ್ರ ಮೋದಿ ಎಂತಹಾ ಮಹಾನ್ ಸುಳ್ಳುಗಾರ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಕಳೆದ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಮೋದಿ ಬ್ರಹ್ಮಚಾರಿ ಎಂದು ಅಫಿಡವಿಟ್ ಸಲ್ಲಿಸಿದ್ದರು. ಈಗ ಜಶೋದಾಬೆನ್ ನನ್ನ ಪತ್ನಿ ಎಂದು ಅಫಿಡವಿಟ್ ನಲ್ಲಿ ನಮೂದಿಸುತ್ತಾರೆ. ಹೋದ ಚುನಾವಣೆಯಲ್ಲಿ ಇಲ್ಲದ ಪತ್ನಿ ಈಗ ಎಲ್ಲಿಂದ ಬಂದರು ಎನ್ನುವುದೇ ನನ್ನ ಪ್ರಶ್ನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. (ಜಶೋದಾಬೆನ್ ನನ್ನ ಹೆಂಡ್ತಿ: ನರೇಂದ್ರ ಮೋದಿ)

ಅವರ ಬಳಿ ಇರುವ ಆಸ್ತಿಯ ಬಗ್ಗೆ ನನಗೆ ತಿಳಿದಿಲ್ಲ ಎಂದು ನಮೂದಿಸುತ್ತಾರೆ. ಸುಳ್ಳನ್ನು ಸತ್ಯ ಮಾಡುವ ಕಲೆಯನ್ನು ನರೇಂದ್ರ ಮೋದಿ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಗುರುವಾರ (ಏ 10) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಗುಜರಾತಿನಲ್ಲಿ ಅಭಿವೃದ್ದಿ ಮಾಡಿದ್ದೇನೆಂದು ಹೋದಲೆಲ್ಲಾ ಡಂಗುರ ಸಾರಿಕೊಂಡು ಬರುತ್ತಿದ್ದಾರೆ. ಅಭಿವೃದ್ದಿ ವಿಚಾರವನ್ನು ಮುಂದಿಟ್ಟು ಕೊಂಡು ರಾಜ್ಯದ ಜನತೆಗೆ ಮಂಕುಬೂದಿ ಎರಚಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಾನು ಮೋದಿಯವರನ್ನು ನರಹಂತಕ ಎಂದಿಲ್ಲ. ಮೋದಿ ಸರಕಾರ ನರಹಂತಕ ಸರಕಾರ ಎಂದಿದ್ದೇನೆ. ಮಾಧ್ಯಮದವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವರದಿಮಾಡಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಲಿದ್ದಾರೆ. ಇಪ್ಪತ್ತು ಸೀಟು ಗೆಲ್ಲುತ್ತೇವೆ ಎನ್ನುವ ಹಗಲುಕನಸು ಕಾಣುವುದನ್ನು ಬಿಜೆಪಿಯವರು ಬಿಡಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.












Click it and Unblock the Notifications