ವಿಶ್ವಾಸ ಮತ ಗೆದ್ದ ಕುಮಾರಸ್ವಾಮಿ, ಸದ್ಯಕ್ಕೆ ಸಿಎಂ ಕುರ್ಚಿ ಭದ್ರ
ಬೆಂಗಳೂರು, ಮೇ 25: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ಈ ಮೂಲಕ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಭವಿಷ್ಯ ಸದ್ಯಕ್ಕೆ ನಿರಾತಂಕವಾಗಿದೆ.
ಇಂದು ಮಧ್ಯಾಹ್ನ 12.15ಕ್ಕೆ ವಿಧಾನಸಭೆಯ ಅಧಿವೇಶನ ಆರಂಭವಾಯಿತು. ಮೊದಲಿಗೆ ಸ್ಪೀಕರ್ ಚುನಾವಣೆಯಲ್ಲಿ ಕೆ.ಆರ್. ರಮೇಶ್ ಕುಮಾರ್ ಅವಿರೋಧವಾಗಿ ಮುಂದಿನ ಸ್ಪೀಕರ್ ಆಗಿ ಆಯ್ಕೆಯಾದರು.
ನಂತರ ನಾಯಕರುಗಳು ನೂತನವಾಗಿ ಆಯ್ಕೆಯಾದ ಸ್ಪೀಕರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದಾದ ಬಳಿಕ ಕಳೆದ ಮೇ 23ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿದರು.

ನಂತರ ಮಾತನಾಡಿದ ಕುಮಾರಸ್ವಾಮಿ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ಟೀಕಿಸಿದರು.
ನಂತರ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪನವರು ಕೂಡ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಅವರು ಸದನವನ್ನು ಬಹಿಷ್ಕರಿಸಿದರು.

ಇದಾದ ಬಳಿಕ ಸ್ಪೀಕರ್ ರಮೇಶ್ ಕುಮಾರ ವಿಶ್ವಾಸ ಮತ ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಈ ಸಂದರ್ಭದಲ್ಲಿ ಪ್ರಸ್ತಾಪದ ಪರ ಇರುವವರು ಹೌದು ಎಂದು ಹೇಳಲು ಕೇಳಿಕೊಂಡರು. ಎಲ್ಲರೂ ಹೌದು ಎಂದರು. ಇಲ್ಲ ಎಂದೂ ಯಾರೂ ಹೇಳದೇ ಇದ್ದ ಕಾರಣ ಪ್ರಸ್ತಾಪವು ಹೌದು ಎನ್ನುವವರ ಪರವಾಗಿದೆ ಎಂದರು. ಮತ್ತು ಪ್ರಸ್ತಾಪ ಅಂಗೀಕರಿಸಲ್ಪಟ್ಟಿದೆ ಎಂದು ಘೋಷಿಸಿದರು.
ಈ ಮೂಲಕ ಎಚ್.ಡಿ. ಕುಮಾರಸ್ವಾಮಿಯವರ ಸರಕಾರ ಸದನದಲ್ಲಿ ವಿಶ್ವಾಸ ಮತವನ್ನು ಗೆದ್ದುಕೊಂಡಿದೆ.












Click it and Unblock the Notifications