ಬೊಂಬೆ ನಾಡಲ್ಲಿ ಯೋಗೇಶ್ವರ್ ಶಕ್ತಿಪ್ರದರ್ಶನಕ್ಕೆ ದಂಗಾಗಲಿದೆಯಾ ಕಾಂಗ್ರೆಸ್?!
Recommended Video
ರಾಮನಗರ, ಜನವರಿ 17: ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶಿಸಿ ಕಾಂಗ್ರೆಸ್ ಗೆ ತನ್ನ ತಾಕತ್ತೇನು ಎಂಬುದನ್ನು ತೋರಿಸಲು ಶಾಸಕ ಸಿ.ಪಿ.ಯೋಗೇಶ್ವರ್ ಮುಂದಾಗಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಸರ್ಕಾರದ ಸಾಧನಾ ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಸಿ.ಪಿ.ಯೋಗೇಶ್ವರ್ ಅವರನ್ನು ವಾಚಾಮಗೋಚರವಾಗಿ ತೆಗಳಿದ್ದರು. ಇದಕ್ಕೆ ಉತ್ತರ ಕೊಡಲು ತಯಾರಿ ನಡೆಸಿರುವ ಯೋಗೇಶ್ವರ್ , ಇಂದು (ಜ.17) ಚನ್ನಪಟ್ಟಣದಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಕೊಡಲು ಸಿದ್ಧತೆ ನಡೆಸಿದ್ದಾರೆ.
ಚನ್ನಪಟ್ಟಣ: ಯೋಗೇಶ್ವರ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ?
ರಾಜಕೀಯ ಪಕ್ಷಗಳ ಬ್ಯಾನರ್ನಡಿ ಮಾತ್ರವಲ್ಲದೆ, ಪಕ್ಷೇತರವಾಗಿ ಸ್ಪರ್ಧಿಸಿದರೂ ಗೆಲುವು ಪಡೆಯುವ ತಾಕತ್ತು ಹೊಂದಿರುವ ಯೋಗೇಶ್ವರ್ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಗೆಲುವು ಸಾಧಿಸಿದ್ದರು. ಆದರೆ ಕೆಲವು ಸಮಯಗಳ ಹಿಂದೆ ಕಾಂಗ್ರೆಸ್ ನೊಂದಿಗೆ ಸಂಬಂಧ ಕಡಿದುಕೊಂಡು ಬಿಜೆಪಿ ಸಖ್ಯ ಬೆಳೆಸಿರುವ ಅವರ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಆಕ್ರೋಶವಿತ್ತು. ಈ ಅಸಮಾಧಾನವನ್ನು ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇನ್ನಿತರ ನಾಯಕರು ಹೊರಹಾಕಿದ್ದರು.
ಟೀಕಾಕಾರರಿಗೆ ಸೆಡ್ಡು ಹೊಡೆಯಲು ಯೋಗೇಶ್ವರ್ ಸಜ್ಜು
ಈಗ ಅದಕ್ಕೆಲ್ಲ ಉತ್ತರ ಕೊಡುವ ಸಮಯ ಬಂದಿದ್ದು, ಇಂದು(ಜ.17) ಚನ್ನಪಟ್ಟಣದಲ್ಲಿ ನಡೆಯುವ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಟೀಕಾಕಾರರಿಗೆ ಉತ್ತರ ನೀಡಲು ಯೋಗೇಶ್ವರ್ ಅವರು ಬಳಸಿಕೊಂಡರೆ ಅಚ್ಚರಿಪಡಬೇಕಾಗಿಲ್ಲ. ಸಿ.ಪಿ.ಯೋಗೇಶ್ವರ್ ಎದುರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕರಿಗೆ ಇವತ್ತು ಸುಮಾರು 40 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲು ಯೋಗೇಶ್ವರ್ ಮುಂದಾಗಿದ್ದಾರೆ.
ಬೈಕ್ ಜಾಥಾ ಮೂಲಕ ಸ್ವಾಗತ
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜ.17ರಂದು ತಾಲೂಕಿಗೆ ಬಿಜೆಪಿ ಪರಿವರ್ತನಾ ಯಾತ್ರೆ ಆಗಮಿಸಲಿದ್ದು, ಸಮಾವೇಶದಲ್ಲಿ ತಾಲೂಕಿನ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ರಾಮನಗರದಿಂದ ಆಗಮಿಸುವ ಯಾತ್ರೆಯನ್ನು ಬೈಕ್ ಜಾಥಾ ಮೂಲಕ ಸ್ವಾಗತಿಸಲಾಗುವುದು ಎಂದು ಯೋಗೀಶ್ವರ್ ತಿಳಿಸಿದ್ದಾರೆ.
ಸ್ವಾಭಿಮಾನ ಕೆಣಕುವವರಿಗೆ ಸಮಾವೇಶದ ಮೂಲಕ ಉತ್ತರ
'ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ಈ ಸಮಾವೇಶ ನಾಂದಿಯಾಗಲಿದೆ, ಪಕ್ಷವನ್ನು ಬಲಪಡಿಸುವ ಕೆಲಸಕ್ಕೆ ಇಲ್ಲಿಂದಲೇ ಮುನ್ನುಡಿ ಬರೆಯುತ್ತೇವೆ. ತಾಲೂಕಿನ ಜನತೆಯ ಸ್ವಾಭಿಮಾನಗಳನ್ನು ಕೆಣಕುತ್ತಿರುವವರಿಗೆ ಸಮಾವೇಶದ ಮೂಲಕ ಹೊಸ ಸಂದೇಶ ನೀಡುವುದಾಗಿ' ಅವರು ಹೇಳಿದ್ದಾರೆ.
ಬಿಜೆಪಿಯತ್ತ ಮುಖ
ಸಮಾವೇಶದಲ್ಲಿ ತಾಲೂಕು ಪಂಚಾಯಿತಿಯ ಸದಸ್ಯರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ, ಅವರ ಜತೆಗೆ ವಿವಿಧ ಪಕ್ಷಗಳ ಹಲವು ಮುಖಂಡರು, ಕಾರ್ಯಕರ್ತರು ಸೇರ್ಪಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಚನ್ನಪಟ್ಟಣದಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ಭಾರೀ ಕುತೂಹಲ ಕೆರಳಿಸಿದ್ದು, ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.