ಟಿಕೆಟ್ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಮತ್ತು ಸಹಚರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಉದ್ಯಮಿಯೊಬ್ಬರಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಸ್ವಾಮೀಜಿ ಸೇರಿದಂತೆ 7 ಜನರ ವಿರುದ್ಧ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ತನಿಖೆ ಮುಕ್ತಾಯದ ನಂತರ, 3 ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಆರೋಪಪಟ್ಟಿ ಸಲ್ಲಿಸಲಾಗಿದೆ. 800 ಪುಟಗಳ ಸುದೀರ್ಘ ಆರೋಪಪಟ್ಟಿಯಲ್ಲಿ 75 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಅಪರಾಧ ವಿಭಾಗದ ಅಧಿಕಾರಿ ಹೇಳಿದ್ದಾರೆ.

ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರ ಮೇಲೆ ನಂಬಿಕೆಯ ಉಲ್ಲಂಘನೆ, ವಂಚನೆ, ಸಾರ್ವಜನಿಕ ಸೇವಕನಂತೆ ನಟಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 419, 420, 170, 506 ಮತ್ತು 120ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ.
ಭಾರಿ ಸದ್ದು ಮಾಡಿದ್ದ ಪ್ರಕರಣ
ಚೈತ್ರಾ ಕುಂದಾಪುರ, ವಿಜಯನಗರದ ಹಾಲಶ್ರೀ ಮಠದ ಪೀಠಾಧಿಪತಿ ಜಿ.ಎಂ.ಅಭಿನವ ಹಾಲವೀರಪ್ಪಜ್ಜ ಹಾಗೂ ಆಕೆಯ ಜತೆ ನಿಕಟ ಸಂಪರ್ಕ ಹೊಂದಿರುವ ಆರು ಮಂದಿ ಸೇರಿಕೊಂಡು ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಬಿಜೆಪಿ ಮತ್ತು ಆರ್ಎಸ್ಎಸ್ನಲ್ಲಿನ ಸಂಪರ್ಕ ಬಳಸಿಕೊಂಡು ಚುನಾವಣೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಐದು ಕೋಟಿ ರೂಪಾಯಿ ವಂಚಿಸಿದ್ದಾರೆ.
ಚುನಾವಣಾ ಟಿಕೆಟ್ ಸಿಗದ ಬಳಿಕ ಗೋವಿಂದಬಾಬು ಹಣ ವಾಪಸ್ ಮಾಡುವಂತೆ ಕೇಳಿದ್ದಾರೆ, ಆದರೆ ಇದಕ್ಕೆ ಚೈತ್ರಾ ಮತ್ತು ಟೀಂ ನಿರಾಕರಿಸಿದೆ. ಇದರಿಂದ ಬೇಸತ್ತ ಗೋವಿಂದಬಾಬು ಪೂಜಾರಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.
ಸೆಪ್ಟೆಂಬರ್ 13 ರಂದು ಚೈತ್ರಾ ಕುಂದಾಪುರಳನ್ನು ಬಂಧಿಸಿದ ನಂತರ, ಹಾಲಶ್ರೀಯನ್ನು ಬಂಧಿಸಿದಾಗ ವಂಚನೆಯಲ್ಲಿ ಭಾಗಿಯಾದ ದೊಡ್ಡ ನಾಯಕರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರು.
"ಇಡೀ ವಂಚನೆಯ ಸಂಚಿಕೆಯು ಬಲಪಂಥೀಯ ಹಿಂದುತ್ವವಾದಿ ಕಾರ್ಯಕರ್ತ ಮತ್ತು ಆಕೆಯ ಸಹಚರರ ಕೈವಾಡವಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉದ್ಯಮಿಯಿಂದ ವಂಚಿಸಿದ ಹಣದಲ್ಲಿ 1.8 ಕೋಟಿ ರೂ.ಗಳನ್ನು ಚೈತ್ರಾ ಕುಂದಾಪುರದ ಸಹಕಾರಿ ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿ ಖಾತೆಗೆ ಜಮಾ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ. ಆಕೆಯ ಬಳಿ 81 ಲಕ್ಷ ರೂಪಾಯಿ ನಗದು, 26 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮತ್ತು 20 ಲಕ್ಷ ರೂಪಾಯಿ ಮೌಲ್ಯದ ಕಾರು ಪತ್ತೆಯಾಗಿತ್ತು.












Click it and Unblock the Notifications