Channapattana By Election Result: ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮುನ್ನಡೆ- ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ
ರಾಮನಗರ ನವೆಂಬರ್ 23: ಚನ್ನಪಟ್ಟಣ ಮತ ಎಣಿಕೆ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಬೆಳಿಗ್ಗೆಯಿಂದಲೂ ಹಾವು ಏಣಿ ಆಟದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ತೀವ್ರಗೊಂಡಿದೆ. ಆದರೆ ಬೆಳಿಗ್ಗೆ 10 ಗಂಟೆ 8ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇದರಿಂದಾಗಿ ಚನ್ನಪಟ್ಟಣದಲ್ಲಿ ಕೈ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಸಿಪಿ ಯೋಗೇಶ್ವರ್ ಭರ್ಜರಿ ಮುನ್ನಡೆ
ಹೌದು.. ಬೆಳಿಗ್ಗೆ 10ಗಂಟೆ 8ನೇ ಸುತ್ತಿನ ಮತ ಎಣಿಕೆಯಲ್ಲಿ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬರೋಬ್ಬರಿ 11,178 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ. ಇದು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ಕೊಟ್ಟಿದೆ.

ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ ಹಾವು ಏಣಿ ಆಟ ಜೋರಾಗಿತ್ತು. ಇದೀಗ ಸಿಪಿ ಯೋಗೇಶ್ವರ್ ಭರ್ಜರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು ಚನ್ನಪಟ್ಟಣ ಅಖಾಡ ಭಾರೀ ಕುತೂಹಲ ಮೂಡಿಸಿದೆ. ಕಾಂಗ್ರೆಸ್-45982 ಮತಗಳನ್ನು ಪಡೆದಿದ್ದು ಜೆಡಿಎಸ್ - 34808 ಮತಗಳನ್ನು ಗಳಿಸಿದೆ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ
ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ಇಂದು ಬಹಿರಂಗವಾಗಲಿದ್ದು ಮತ ಎಣಿಕೆ ಮುಂದುವರೆದಿದೆ. ಸಿಪಿ ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದು ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಹೀಗಾಗಿ ಸಿಪಿ ಯೋಗೇಶ್ವರ್, ಜಮೀರ್ ಅಹ್ಮದ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಪರ ಜೈಕಾರ ಕೂಗಿದ್ದಾರೆ. ಜೊತೆಗೆ ಸಿಪಿ ಯೋಗೇಶ್ವರ್ ಅವರ ಭಾವಚಿತ್ರಗಳನ್ನು ಹಿಡಿದು ಒಂದೆಡೆ ಸೇರಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ಒಂಬತ್ತನೇ ಸುತ್ತಿನಲ್ಲೂ ಸಿಪಿವೈ ಮುನ್ನಡೆ
ಬೆಳಿಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು ಸದ್ಯ (ಬೆಳಗ್ಗೆ 10.34) ಒಂಬತ್ತನೇ ಸುತ್ತಿನ ಮತ ಎಣಿಕೆ ನಡೆಯುತ್ತಿದೆ. ಒಂಬತ್ತನೇ ಸುತ್ತಿನ ಮತ ಎಣಿಕೆಯಲ್ಲಿ 18,000 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚನ್ನಪಟ್ಟಣದಲ್ಲಿ ಒಟ್ಟು 20ನೇ ಸುತ್ತಿನ ಮತ ಎಣಿಕೆ ನಡೆಯಲಿದೆ.
ಯೋಗೇಶ್ವರ್ ಅವರ ಪತ್ನಿ ಟೆಂಪಲ್ ರನ್
ಸಿಪಿ ಯೋಗೇಶ್ವರ್ ಅವರ ಪತ್ನಿ ಇಂದು ಬೆಳಗ್ಗೆ ಪತಿಯ ಗೆಲುವಿಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಪತಿಯ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದು ಅವರ ಪ್ರಾರ್ಥನೆ ಫಲ ಸಿಕ್ಕಂತೆ ಕಾಣಿಸುತ್ತಿದೆ.
ನಿಖಿಲ್ಗೆ ಬಿಗ್ ಶಾಕ್
ಇನ್ನೂ ಸಿಪಿ ಯೋಗೇಶ್ವರ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ನಿಖಿಲ್ಗೆ ಬಿಗ್ ಶಾಕ್ ಆಗಿದೆ. ನಿಖಿಲ್ ಕುಮಾರಸ್ವಾಮಿ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗಲೂ ಹೇಳಿಕೊಂಡಿದ್ದರು. ಆದರೀಗ ಚನ್ನಪಟ್ಟಣ ಜನರ ಒಲವು ಸಿಪಿ ಯೋಗೇಶ್ವರ ಕಡೆಗೆ ಇದ್ದಂತೆ ಕಾಣಿಸುತ್ತಿದೆ. ಇದರಿದಾಗಿ ಹೆಚ್ಚು ಮತಗಳ ಅಂತರದಲ್ಲಿ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ. ಇನ್ನೂ ಮತ ಎಣಿಕೆ ಮುಂದುವರೆದಿದ್ದು, ಸಂಜೆ ವೇಳೆಗೆ ಸೋಲು ಗೆಲುವಿನ ಬಗ್ಗೆ ಸ್ಪಷ್ಟತೆ ಸಿಗಲಿದೆ.












Click it and Unblock the Notifications