ಸಂತೇಮರಹಳ್ಳಿ ಬಳಿ ವಾಹನ ಡಿಕ್ಕಿಯಾಗಿ ಜಿಂಕೆ ಸಾವು
ಚಾಮರಾಜನಗರ, ಮೇ 19 : ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂತೇಮರಹಳ್ಳಿ ಬಳಿ ನಡೆದಿದೆ.
ಸಂತೇಮರಹಳ್ಳಿಯಿಂದ ಟಿ.ನರಸೀಪುರ ತೆರಳುವ ರಸ್ತೆಯಲ್ಲಿ ಜಿಂಕೆ ರಸ್ತೆದಾಟುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಡಿಕ್ಕಿ ಹೊಡೆದ ಬಳಿಕ ಚಾಲಕ ವೇಗವಾಗಿ ವಾಹನವನ್ನು ಓಡಿಸಿಕೊಂಡು ಪರಾರಿಯಾಗಿದ್ದಾನೆ. [ವೈಲ್ಡ್ ಲೈಫ್ ಭಾಷಣಾ ಮತ್ತು ವೈಲ್ಡ್ ವೈಫ್ ರಕ್ಷಣಾ!]

ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮಹಜರು ನಡೆಸಿದ್ದಾರೆ. ಡಿಕ್ಕಿ ಹೊಡೆದ ವಾಹನ ಯಾವುದು, ಯಾರಿಗೆ ಸೇರಿದ್ದು ಎಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಇಬ್ಬರು ಸಾವು
ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಟೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ನೀರು ಕುಡಿದ ಸುಮಾರು 20 ಮಂದಿಯನ್ನು ಮೈಸೂರಿನ ಕೆ.ಆರ್.ಆಸ್ಪತೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ ಕೆಂಚಶೆಟ್ಟಿ (60), ಅಂಗನವಾಡಿ ಸಹಾಯಕಿಯಾದ ಚಿಕ್ಕತಾಯಮ್ಮ (35) ಸಾವನ್ನಪ್ಪಿದ್ದಾರೆ. [ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!]

ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಟ್ಯಾಂಕ್ನ ಮೂಲಕ ಸರಬರಾಜು ಮಾಡುತ್ತಿದ್ದು, ಈ ಸಂದರ್ಭ ನೀರು ಕಲುಷಿತಗೊಂಡಿರಬೇಕೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಈ ನೀರನ್ನು ಸೇವಿಸಿದ್ದರಿಂದ ಹಲವರಲ್ಲಿ ವಾಂತಿ ಬೇಧಿ ಕಂಡು ಬಂದಿತ್ತು.
ಕಲುಷಿತ ನೀರು ಸೇವನೆಯಿಂದ ಇಬ್ಬರು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೊಳವೆ ಬಾವಿಗಳ ನೀರು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಗ್ರಾಮದಲ್ಲಿ ಕಂಡು ಬಂದಿರುವ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ಕ್ರಮವನ್ನು ವಹಿಸಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಂಡುವಿಜಯನ್ ತಿಳಿಸಿದ್ದಾರೆ.












Click it and Unblock the Notifications