ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹ: ಕಾರಣವೇನು?
ಬೆಂಗಳೂರು, ಫೆಬ್ರವರಿ 04: ಪ್ರಿಯಾಂಕ್ ಖರ್ಗೆಯವರ ಬಗ್ಗೆ ತೀಕ್ಷ್ಣವಾಗಿಯೇ ಮಾತಾಡಬೇಕಾಗುತ್ತದೆ. ಅವರು ಪ್ರಬುದ್ಧರೋ, ಅಪ್ರಬುದ್ಧರೋ ಅಂತ ನನಗೆ ಗೊತ್ತಿಲ್ಲ. ಹಿಂದೂ ಧರ್ಮದಲ್ಲಿ ಸಮಾನತೆ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಅಂತ ಹೇಳಿಕೆ ನೀಡಿದ್ರು. ನಾನು ಅವರನ್ನು ಪ್ರಶ್ನಿಸುತ್ತೇನೆ- ತಾವು ಯಾವ ಧರ್ಮದವರು ಅಂತ ರಾಜ್ಯದ ಜನತೆಗೆ ತಿಳಿಸಬೇಕು. ನಿಮ್ಮದು ಯಾವ ಧರ್ಮ, ಹಿಂದೂ ಧರ್ಮದವರಾ? ಬೇರೆಯಾ? ಹಿಂದು ಧರ್ಮದವರೇ ಆಗಿದ್ದರೆ ಧರ್ಮಪಾಲನೆ ಮಾಡುವುದು ಬಿಡೋದು ನಿಮಗೆ ಬಿಟ್ಟಿದ್ದು. ನೀವು ಸ್ವತಂತ್ರರಿದ್ದೀರಿ. ತಕ್ಷಣವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಪರಿಶಿಷ್ಟ ಜಾತಿಯ ಮೀಸಲಿರುವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೀರಿ? ಹಾಗಿದ್ದ ಮೇಲೆ ಒಂದು ಕ್ಷಣವೂ ಕೂಡ ಆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು ಬರಲು ಸಾಧ್ಯವಿಲ್ಲ. ತಕ್ಷಣವೇ ನಿಮ್ಮ ಸ್ಥಾನವನ್ನು ತೆರವು ಮಾಡುವುದು ಸೂಕ್ತ ಎಂದು ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡರು. ಇನ್ನೊಬ್ಬ ಹಿಂದೂವನ್ನು ನೀವು ಹೀಯಾಳಿಸುವುದು ಎಷ್ಟು ಸರಿ. ಆ ಅಧಿಕಾರವನ್ನು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ನಿಮಗೆ ಕೊಟ್ಟಿಲ್ಲ. ನ್ಯೂನತೆಗಳನ್ನು ಸರಿಪಡಿಸಬೇಕಾದರೆ ಆಗ್ರಹ ಮಾಡಿ, ಹೋರಾಟ ಮಾಡಿ. ಆದರೆ ನಿಂದಿಸುವ ಅಧಿಕಾರ ನಿಮಗಿಲ್ಲ.

ನೀವು ಹಿಂದು ಧರ್ಮ ಬಿಟ್ಟಿದ್ದರೆ, ನೀವು ಅದರಲ್ಲಿ ಇಲ್ಲ ಅಂತಾದರೆ, ನೀವು ಆಯ್ಕೆ ಮಾಡಿದ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ ಮತದಾರರಲ್ಲಿ ಹಿಂದೂಗಳಿಲ್ಲವೇ? ಅವರನ್ನು ನೀವು ಅವಮಾನಿಸುತ್ತಿದ್ದೀರಾ? ಮೀಸಲು ಕ್ಷೇತ್ರದಿಂದ ಹೇಗೆ ಸ್ಪರ್ಧೆ ಮಾಡಿದ್ದೀರಿ? ನಿಮ್ಮಲ್ಲಿರುವ ಸರ್ಟಿಫಿಕೇಟ್ ಯಾವುದು. ಮೀಸಲಿಗೆ ಒಳಪಡುವಂಥದ್ದು ಹೌದೋ ಅಲ್ಲವೋ ತಿಳಿಸಿ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಪದೇ ಪದೇ ಬಾಯಿ, ನಾಲಿಗೆಯನ್ನು ಹರಿಬಿಡುವದು ಸರಿಯಲ್ಲ. ನೀವು ಹುಟ್ಟಿದ್ದು ಹಿಂದೂವಾಗಿ. ನಾನು ಹಿಂದುವಾಗಿ ಹುಟ್ಟಿದ್ದೇನೆ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು. ಹುಟ್ಟು ನನ್ನ ಕೈಯ್ಯಲ್ಲಿಲ್ಲ. ಸಾಯುವಾಗ ನನ್ನ ತೀರ್ಮಾನ ತಗೊಳ್ಳಬಹುದು. ಹಿಂದೂ ಧರ್ಮದ ನ್ಯೂನತೆಗಳನ್ನು ಸರಿಪಡಿಸಲು ಹೋರಾಟ ಮಾಡಿದ್ರು. ಆ ಕಾಲದಲ್ಲಿ ಅದು ಆಗಲಿಲ್ಲ. ಹಾಗಾಗಿ ಕೊನೆಗೆ ಹಿಂದೂ ಧರ್ಮವನ್ನು ತೊರೆದರು. ಆದರೆ ಈಗಿನ ಕಾಲದಲ್ಲಿ ಆ ನ್ಯೂನತೆಗಳು ಹಿಂದೂ ಧರ್ಮದಲ್ಲಿಲ್ಲ.
ಹಿಂದೂ ಧರ್ಮದ ಮತ್ತೊಂದು ಭಾಗವಾದ ಬೌದ್ಧ ಧರ್ಮವನ್ನು ಸೇರಿದರು. ಇದನ್ನು ಜನ ಒಪ್ಪುತ್ತಾರೆ. ಅವರು ಯಾರನ್ನೂ ನಿಂದಿಸಲಿಲ್ಲ. ಈ ನಿಂದಿಸುವುದು ನಿಮಗೊಂದು ಚಟ. ಇದನ್ನು ಮುಂದುವರಿಸಿದರೆ ಜನ ನಿಮಗೆ ನಿಜಕ್ಕೂ ತಕ್ಕ ಪಾಠ ಕಲಿಸ್ತಾರೆ. ಚಿತಾಪುರದ ಜನ ಯಾಕೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಅವರು ನಿಮಗೆ ತಿರುಗಿ ಬೀಳುವ ಮೊದಲು ಅವರನ್ನು, ಹಿಂದೂ ಧರ್ಮವನ್ನು ಕ್ಷಮೆ ಕೇಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಎಲ್ಲೋ ಒಂದು ಕಡೆ ರೇಪ್ ಆಗಿದೆ ಎಂದರೆ ಬಿಜೆಪಿ ಕಾಲದಲ್ಲಿ ಆಗಿಲ್ವಾ ಅಂತ ಉದ್ಧಟತನದ ಮಾತಾಡುತ್ತಾರೆ ಸಿದ್ದರಾಮಯ್ಯ. ಬಿಜೆಪಿ ಕಾಲದಲ್ಲಿ ಆಗಿದೆ ಅಂದರೆ ನಿಮ್ಮ ಕಾಲದಲ್ಲೂ ಆಗಬೇಕು ಅಂತ ಏನಾದರೂ ಇದೆಯಾ? ನಿಮಗೆ ರಾಜ್ಯದ ಮೇಲೆ ಹತೋಟಿ ಇಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅದರಿಂದ ಈ ರೀತಿಯಾಗಿ ಮಾತನಾಡುತ್ತಿದ್ದೀರಿ. ನಿನ್ನೆ ತಾನೇ ಮಂಡ್ಯದಲ್ಲಿ ಗ್ಯಾಂಗ್ ರೇಪ್ ಆಗಿದೆ. ಇದಕ್ಕೆ ನಿಮ್ಮ ಉತ್ತರವೇನು ಮುಖ್ಯಮಂತ್ರಿಗಳೇ? ಈಗಲೂ ಬಿಜೆಪಿ ಕಾಲದಲ್ಲಿ ಆಗಿದೆ ಅಂತೀರಾ? ನಿಮ್ಮ ಭಂಡತನದ ಉತ್ತರ ಏನು? ದಾವಣಗೆರೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 33,621 ಬಾಲ್ಯ ವಿವಾಹಗಳು ಆಗಿವೆ. ಕೇವಲ ಬೆಂಗಳೂರಿನಲ್ಲಿ 4,324 ಪ್ರಕರಣಗಳು ದಾಖಲಾಗಿವೆ. ಏನು ಮಾಡ್ತಿದೆ ಈ ಸರಕಾರ? ಪ್ರಶ್ನೆ ಮಾಡಲೇಬೇಕಲ್ಲ.












Click it and Unblock the Notifications