ಡಿಕೆಶಿಯನ್ನು ಖೆಡ್ಡಾಗೆ ತಳ್ಳಿದವರಾರು: ಬೆಳಗಾವಿಯಿಂದ ಸೋರಿಕೆ ಆಯ್ತಾ ಸಿಬಿಐಗೆ ಮೇಘ ಸಂದೇಶ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತ ರಾಮನಗರದ ಇಕ್ಬಾಲ್ ಹುಸೇನ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗಲೇ, ಡಿಕೆಶಿಗೆ ಮುಂದೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಗ್ರಹಿಸಲಾಗಿತ್ತು.
ನಿರೀಕ್ಷೆಯೆಂತೆಯೇ ಡಿಕೆಶಿ ಅವರ ಮನೆಗೆ, ಅವರ ಸಹೋದರ ಡಿ.ಕೆ.ಸುರೇಶ್, ತಾಯಿ ಗೌರಮ್ಮನ ಮನೆ ಸೇರಿದಂತೆ ಹದಿನಾಲ್ಕು ಕಡೆ ಸಿಬಿಐ ಅಧಿಕಾರಿಗಳು, ಅಕ್ಟೋಬರ್ ಐದರಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಸಿಬಿಐ ಅಧಿಕಾರಿ ಥಾಮ್ಸನ್ ಜೋಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಪಕ್ಕಾ ಪೂರ್ವನಿಯೋಜಿತ ಪ್ಲ್ಯಾನ್ ನಂತೆ, ಮೊದಲೇ ಸರ್ಚ್ ವಾರಂಟ್ ಪಡೆದುಕೊಂಡಿದ್ದ ಸಿಬಿಐ ಅಧಿಕಾರಿಗಳು, ಎಫ್ ಐಆರ್ ಅನ್ನೂ ದಾಖಲಿಸಿದ್ದರು. ಡಿಕೆಶಿಯ ಮುಂಬೈ ಮತ್ತು ದೆಹಲಿಯ ನಿವಾಸದ ಮೇಲೂ ದಾಳಿ ನಡೆದಿದೆ. ಉಪಚುನಾವಣೆಯ ಈ ಸಂದರ್ಭದಲ್ಲಿ ಡಿಕೆಶಿ ಮೇಲೆ ಈ ನಡೆದ ಸಿಬಿಐ ದಾಳಿ, ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ಸಿನವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದು ಸ್ವಾಭಾವಿಕ ಕೂಡಾ..
ಸಿಬಿಐ ದಾಳಿಯ ವೇಳೆ ಅಪಾರ ಪ್ರಮಾಣದ ಲಿಕ್ವಿಡ್ ಕ್ಯಾಶ್ ಸಿಕ್ಕಿದೆ ಎನ್ನುವ ಖಚಿತವಲ್ಲದ ಸುದ್ದಿಗಳು ಹೊರಬೀಳುತ್ತಿವೆ. ಅದರಲ್ಲಿ, ಡಿಕೆಶಿ ಸದಾಶಿವ ನಗರದ ಮನೆಯಲ್ಲಿ ಸಿಕ್ಕಿದೆ ಎಂದು ಸುದ್ದಿಯಾಗುತ್ತಿರುವ ಐವತ್ತು ಲಕ್ಷ ದುಡ್ಡು. ಇದು ಹೌದಾದಲ್ಲಿ, ಸಿಬಿಐಗೆ ಈ ಮಾಹಿತಿಯನ್ನು ಸೋರಿಕೆ ಮಾಡಿದವರು ಯಾರು?

ಡಿಕೆಶಿ, ಬೆಳಗಾವಿ ಪ್ರವಾಸದಲ್ಲಿ ಇದ್ದರು
ಕೆಲವೊಂದು ಮೂಲಗಳ ಪ್ರಕಾರ, ಕಳೆದ ಶುಕ್ರವಾರವೇ, ಸಿಬಿಐ ಈ ದಾಳಿಯನ್ನು ನಡೆಸಬೇಕಾಗಿತ್ತು. ಆದರೆ, ಡಿಕೆಶಿ, ಬೆಳಗಾವಿ ಪ್ರವಾಸದಲ್ಲಿ ಇದ್ದಿದ್ದರಿಂದ, ಇಂದು ರೇಡ್ ನಡೆಸಲಾಗಿದೆ. ಸಿಬಿಐ ಅಧಿಕಾರಿಗಳು ನಡೆಸುವ ವಿಚಾರಣೆಯ ವೇಳೆ, ಅವರಿಗೆ ತೃಪ್ತಿದಾಯಕ ಉತ್ತರ ಸಿಗದೇ ಇದ್ದ ಪಕ್ಷದಲ್ಲಿ, ಸಿಬಿಐ ಡಿಕೆಶಿಯವರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಡಿಕೆಶಿಯ ಬೆಂಗಳೂರಿನ ಸದಾಶಿವ ನಗರದ ಮನೆ
ಡಿಕೆಶಿಯ ಬೆಂಗಳೂರಿನ ಸದಾಶಿವ ನಗರದ ಮನೆಯಲ್ಲಿ ದಾಳಿ ವೇಳೆ ಐವತ್ತು ಲಕ್ಷ ರೂಪಾಯಿ ಹಣ ಸಿಕ್ಕಿದೆ. ಜೊತೆಗೆ, ಮುಂಬೈನ ಫ್ಲ್ಯಾಟ್ ನಲ್ಲೂ ಮೂರು ಕೋಟಿ ಹಣ ಸಿಕ್ಕಿದೆ ಎಂದು ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಆದರೆ, ಇದು ಅನಧಿಕೃತ ಮಾಹಿತಿ. ಡಿಕೆಶಿ ಮನೆಯಲ್ಲಿದ್ದ ಐವತ್ತು ಲಕ್ಷ ರೂಪಾಯಿ, ಬೆಳಗಾವಿಯಿಂದ ಬಂದಿತ್ತಾ ಎನ್ನುವ ಚರ್ಚೆ ಸದ್ಯ ಚಾಲ್ತಿಯಲ್ಲಿದೆ.

ಡಿಕೆಶಿ ಮತ್ತು ಅವರ ಸಹೋದರ ಸುರೇಶ್
ಉಪಚುನಾವಣೆ ಖರ್ಚಿಗಾಗಿ ಈ ಹಣ ಬಂದಿದ್ದು, ಈ ಖಚಿತ ಮಾಹಿತಿಯನ್ನು ಆಧರಿಸಿಯೇ ಸಿಬಿಐ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಡಿಕೆಶಿ ಮತ್ತು ಅವರ ಸಹೋದರ ಸುರೇಶ್, ತಮ್ಮ ಮನೆಯಲ್ಲಿ ಇಂದು, ಉಪಚುನಾವಣೆ ಸಂಬಂಧ, ಬೆಂಗಳೂರು ಕಾರ್ಪೋರೇಟರ್ ಗಳ ಮೀಟಿಂಗ್ ಅನ್ನು ಕರೆದಿದ್ದರು. ಇವೆಲ್ಲಾ ಮಾಹಿತಿಯನ್ನು ಸಂಗ್ರಹಿಸಿ, ಸಿಬಿಐ ದಾಳಿ ನಡೆದಿದೆ.
Recommended Video

ಬೆಳಗಾವಿಯಿಂದ ರವಾನೆ ಆಯ್ತಾ ಸಿಬಿಐಗೆ ಮೇಘ ಸಂದೇಶ?
ಒಂದು ವೇಳೆ, ಬೆಳಗಾವಿಯಿಂದ ಐವತ್ತು ಲಕ್ಷ ರೂಪಾಯಿ ಹಣ, ಚುನಾವಣಾ ಖರ್ಚಿಗಾಗಿ ಬಂದಿದ್ದೇ ಹೌದಾದಲ್ಲಿ, ಈ ಮಾಹಿತಿಯನ್ನು ಸಿಬಿಐಗೆ ಸೋರಿಕೆ ಮಾಡಿದವರು ಯಾರು ಎನ್ನುವುದಿಲ್ಲಿ ಪ್ರಶ್ನೆ. ಯಾಕೆಂದರೆ, ಈ ವಿಚಾರ ಕೆಲವೇ ಕೆಲವು ಕಾಂಗ್ರೆಸ್ ನಾಯಕರಿಗೆ ತಿಳಿದಿರುವುದರಿಂದ, ಆ ಮೂಲದಿಂದಲೇ ಮಾಹಿತಿ ಸೋರಿಕೆಯಾಗಿರಬಹುದಾ? ಒಟ್ಟಿನಲ್ಲಿ, ಇಂದಿನ ಬೆಳವಣಿಗೆ ಡಿಕೆಶಿಗೆ ಮತ್ತೊಂದು ಹಿನ್ನಡೆಯೆಂದು ವ್ಯಾಖ್ಯಾನಿಸಬಹುದು.












Click it and Unblock the Notifications