ಮತ್ತೆ ಜೈಲು ಸೇರಿದ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ
ಬೆಂಗಳೂರು, ಜೂ. 04 : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಶಾಸಕ ನಾಗೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ. ನಾಗೇಂದ್ರ ಸೇರಿದಂತೆ 7 ಜನರನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದು, ಎಲ್ಲರನ್ನು ಜೂ.8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಕ್ರಮ ಗಣಿಗಾರಿಕೆ ಸುಳಿಯಲ್ಲಿ ಸಿಲುಕಿರುವ ಪಕ್ಷೇತರ ಶಾಸಕ ಬಿ.ನಾಗೇಂದ್ರ ಅವರು ಜಾಮೀನಿನ ಮೇಲೆ ಹೊರಬಂದ ಕೆಲವೇ ತಿಂಗಳಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಬೇಲೆಕೇರಿ ಬಂದರಿನಿಂದ ಐಎಲ್ಸಿ ಇಂಡಸ್ಟ್ರೀಸ್ ಕಂಪನಿಯು ಅಕ್ರಮವಾಗಿ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. [ಬೇಲೇಕೇರಿ ಪ್ರಕರಣ, ಆನಂದ್ ಸಿಂಗ್ ಗೆ ಜಾಮೀನು]

ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ, ಕೆ. ನಾಗರಾಜ್, ಫರ್ಹಾನ್ ಶೇಖ್, ಅಜಯ್ ಖರ್ಬಂಡ, ರಾಣಿ ಸಮ್ಯುಕ್ತ, ನಂದಿನಿ ಮತ್ತು ಎರ್ರಿಬಾಬಾ ಎಂಬುವರು ಬಂಧಿತರಾಗಿದ್ದಾರೆ. ಎಲ್ಲರನ್ನು ಬುಧವಾರ ಸಂಜೆಯೇ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. [ರೆಡ್ಡಿ ಆಪ್ತ ಶಾಸಕ ನಾಗೇಂದ್ರ ಮೇಲೆ ಸಿಬಿಐ ದಾಳಿ]
ಆರೋಪಗಳೇನು? : ಐಎಲ್ಸಿ ಇಂಡಸ್ಟ್ರೀಸ್ ಕಂಪನಿಗೆ ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಎಫ್ಕೆ ಅಸೋಸಿಯೇಟ್ಸ್, ಗ್ರೀನ್ಟೆಕ್ ಮೈನಿಂಗ್, ನಾಗೇಂದ್ರ ಅವರ ಪಾಲುದಾರಿಕೆ ಹೊಂದಿರುವ ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್ ಕಂಪೆನಿಗಳೂ ಅದಿರು ಪೂರೈಸಿವೆ ಎಂಬ ಆರೋಪವಿದೆ.
2006ರಿಂದ 2010ರವರೆಗೆ 1,300 ಕೋಟಿ ರೂ. ಮೌಲ್ಯದ 11.61 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂಬುದು ಆರೋಪ. ಅಕ್ರಮ ಅದಿರು ಸಾಗಣೆಯಲ್ಲಿ ಬಂಧಿತರು ಭಾಗಿಯಾಗಿರುವುದು ವಿಚಾರಣೆ ವೇಳೆ ಖಚಿತವಾಗಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
3ನೇ ಬಾರಿ ಶಾಸಕರ ಬಂಧನ : ಅಕ್ರಮ ಗಣಿಗಾರಿಕೆ ಮತ್ತು ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಅವರನ್ನು 3ನೇ ಬಾರಿಗೆ ಬಂಧಿಸಲಾಗಿದೆ. ಮೊದಲು ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ದಳ ಬಂಧಿಸಿತ್ತು. ಮತ್ತೆ ಜಾಮೀನಿನ ಮೇಲೆ ಹೊರಬಂದಿದ್ದ ಅವರನ್ನು ಸಿಬಿಐ ಅಧಿಕಾರಿಗಳು 2ನೇ ಬಾರಿಗೆ ಬಂಧಿಸಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಬಿ.ನಾಗೇಂದ್ರ ಅವರು 71,477 ಮತಗಳನ್ನು ಪಡೆದು ಜಯಗಳಿಸಿದ್ದಾರೆ.











Click it and Unblock the Notifications