ಕಾವೇರಿ ತೀರ್ಪು: ರಾಜ್ಯ ಸರ್ಕಾರ ರೈತರ ಕ್ಷಮೆ ಕೇಳಲಿ
ಬೆಂಗಳೂರು, ಸೆಪ್ಟೆಂಬರ್, 05: ರೈತರು ಹಾಗೂ ಕಾವೇರಿ ಕೊಳ್ಳದ ಪ್ರದೇಶದಲ್ಲಿನ ಕುಡಿಯುವ ನೀರಿನ ಸಂಕಷ್ಟ ಬಗೆಹರಿಸುವಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ರಾಜ್ಯ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ರಾಜ್ಯ ಸರ್ಕಾರ ಇನ್ನಾದರೂ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕದ ಜನತೆಗೆ ಸುಪ್ರೀಂ ಕೋರ್ಟ್ ನೀಡುರುವ ತೀರ್ಪು ಆಘಾತವನ್ನುಂಟು ಮಾಡಿದೆ. ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಈಗಾಗಲೇ ರಾಜ್ಯದಲ್ಲಿ 1300ಕ್ಕೂ ಹೆಚ್ಚು ರೈತರು ಬೆಳೆ ವಿಫಲ, ಮಳೆ ಆಭಾವದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಇಂಥ ಸ್ಥಿತಿಯಲ್ಲಿ ಆದೇಶ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಆಮ್ ಆದ್ಮಿ ಪಾರ್ಟಿ ಪ್ರಕಟಣೆಯಲ್ಲಿ ಹೇಳಿದೆ.[ಭುಗಿಲೆದ್ದ ಕಾವೇರಿ ವಿವಾದ: ಮಂಡ್ಯ ಜಿಲ್ಲಾ ಬಂದ್ ಗೆ ಕರೆ]
ಮುಂದಿನ ಬೇಸಿಗೆವರೆಗೂ ಕುಡಿಯಲು ನೀರಿಲ್ಲದೆ ಹಪಹಪಿಸುವ ಪರಿಸ್ಥಿತಿಯಲ್ಲಿದ್ದ ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಜನರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಸುಪ್ರೀಂ ಕೋರ್ಟ್ ಲ್ಲಿ ಸರಿಯಾಗಿ ವಾದ ಮಂಡಿಸಲಾಗದೆ, ರಾಜ್ಯದ ಜಲಾಶಯಗಳ ನೀರಿನ ಪ್ರಮಾಣದ ಸರಿಯಾದ ಪರಿಸ್ಥಿತಿಯನ್ನು ಮನವರಿಕೆ ಮಾಡಿಸಲಾಗದೆ ಬೇಜವಾಬ್ದಾರಿ ತೋರಿಸಿದೆ ಎಂದು ಆರೋಪಿಸಿದೆ.[ಗಾಯದ ಮೇಲೆ ಬರೆ: ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ]
ರಾಜ್ಯ ಸರ್ಕಾರ ರೈತ ಪರವಾದ ನಿಲುವನ್ನು ತೆಗೆದುಕೊಳ್ಳಬೇಕು. ಕಠಿಣ ನಿರ್ಧಾರ ತೆಗೆದುಕೊಂಡು ರೈತರ ಹಿತ ಕಾಪಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ-ಸಂಚಾಲಕರು ಹಾಗೂ ಮಾಧ್ಯಮ ಉಸ್ತುವಾರಿ ಶಿವಕುಮಾರ್ ಚೆಂಗಲರಾಯ ಆಗ್ರಹಿಸಿದ್ದಾರೆ.