ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದು ಬೇಡ!
ಬೆಂಗಳೂರು, ಸೆಪ್ಟೆಂಬರ್ 21 : "ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು. ಈ ಬಿಕ್ಕಟ್ಟನ್ನು ಬಗೆಹರಿಸಲು ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಬೇಕು ಮತ್ತು ಕೂಡಲೆ ಒಂದು ದಿನದ ವಿಶೇಷ ಅಧಿವೇಶನ ಕರೆಯಬೇಕು" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಅರ್ಧಗಂಟೆ ಮಾತನಾಡಿದ ಅವರು, ಕಾವೇರಿ ಬಿಕ್ಕಟ್ಟು ಬಗೆಹರಿಯಲು ಪ್ರಧಾನಿ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ ಎಂಬ ಮಾತು ಒಪ್ಪುವುದಿಲ್ಲ. ಅವರು ಮಧ್ಯಸ್ಥಿಕೆ ವಹಿಸಬೇಕು. ಮತ್ತು ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದರೂ ಎದುರಿಸಲು ಸಿದ್ಧರಾಗಬೇಕು ಎಂದು ಅವರು ತಿಳಿಸಿದರು. ಸಭೆಯಲ್ಲಿ ಭಾಗವಹಿಸದ ಬಿಜೆಪಿ ಪಕ್ಷದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. [ಕೊನೆಗೂ ಸಿದ್ದರಾಮಯ್ಯ ಸರಕಾರದ ದಿಟ್ಟ ನಿರ್ಧಾರ]
ಸಂಪುಟ ಸಭೆಯ ಮೇಲೆ ಕಣ್ಣು : ಸರ್ವಪಕ್ಷ ಸಭೆಯಲ್ಲಿ ಬಿಜೆಪಿಯವರನ್ನು ಹೊರತುಪಡಿಸಿ ಎಲ್ಲ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಕಾಂಗ್ರೆಸ್ ಸಂಪುಟ ಸಭೆ ನಡೆಯಲಿದ್ದು, ಅದು ಮುಗಿದ ಬಳಿಕ ತೀರ್ಮಾನ ಪ್ರಕಟಿಸುವುದಾಗಿ ಸಿದ್ದರಾಮಯ್ಯ ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಹಿಂದಿನ ಸುದ್ದಿ : ಕಾವೇರಿ ನೀರು ಹಂಚಿಕೆಯ ಸಂಕಷ್ಟವನ್ನು ಬಗೆಹರಿಸುವ ಉದ್ದೇಶದಿಂದ ವಿಧಾನಸಭೆ ಸಭಾಂಗಣದಲ್ಲಿ ಬುಧವಾರ ಸಂಜೆ ಮಹತ್ವದ ಸರ್ವಪಕ್ಷ ಸಭೆ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಸಂಸದರು ಮತ್ತು ಶಾಸಕರು ಈ ಸರ್ವಪಕ್ಷ ಸಭೆಗೆ ಬಹಿಷ್ಕಾರ ಹಾಕಿದ್ದರಿಂದ ಯಾರೂ ಭಾಗವಹಿಸುತ್ತಿಲ್ಲ.
ಕರ್ನಾಟಕದ ನಾಲ್ಕೂ ಅಣೆಕಟ್ಟುಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲೇಬೇಕೆಂಬ ಸಂಕಷ್ಟದಲ್ಲಿ ಸಿಲುಕಿರುವುದರಿಂದ ಈ ಸರ್ವಪಕ್ಷ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ನೀರು ಬಿಡಬೇಕೋ ಅಥವಾ ಸುಪ್ರೀಂಕೋರ್ಟ್ ಅಣತಿಯನ್ನು ಧಿಕ್ಕರಿಸಿ ನೀರು ಬಿಡುವುದನ್ನು ನಿರಾಕರಿಸಬೇಕೋ ಎಂಬ ಬಗ್ಗೆ ಈ ಸಭೆಯ ನಂತರ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. [ತಮಿಳುನಾಡಿಗೆ ಕಾವೇರಿ ನೀರು ಹರಿಸದಿರಲು ಕರ್ನಾಟಕ ನಿರ್ಧಾರ?]
ಸಭೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಜೆ, ಆಸ್ಕರ್ ಫರ್ನಾಂಡಿಸ್, ವೈಎಸ್ ವಿ ದತ್ತ, , ವೀರಪ್ಪ ಮೊಯ್ಲಿ, ಪುಟ್ಟರಾಜು, ಬಸವರಾಜ ಹೊರಟ್ಟಿ ಮುಂತಾದವರು ಭಾಗವಹಿಸುತ್ತಿದ್ದಾರೆ. [ಕೆಆರ್ ಎಸ್ ಖಾಲಿ ಖಾಲಿ: ಎಲ್ಲಿಂದ ನೀರು ಬಿಡೋಣ ಹೇಳಿ?]
ಕಳೆದ ಬಾರಿ ನಡೆದ ಸರ್ವಪಕ್ಷ ಸಭೆಯಲ್ಲಿ, ನೀರು ಬಿಡುವುದನ್ನು ನಿರಾಕರಿಸಬೇಕು ಎಂದು ಆಗ್ರಹಿಸಿದ್ದರೂ ಕಾವೇರಿ ನೀರನ್ನು ಬಿಟ್ಟಿದ್ದರಿಂದ ಆಕ್ರೋಶಗೊಂಡಿದ್ದ ಬಿಜೆಪಿ ಸಂಸದರು ಮತ್ತು ಶಾಸಕರು ಈಬಾರಿ ಬಹಿಷ್ಕರಿಸಿದ್ದಾರೆ. ಆದರೆ, ಇಂಥ ಮಹತ್ವದ ಸಭೆಯಲ್ಲಿ ಬಿಜೆಪಿ ಮುಖಂಡರು ಭಾಗವಹಿಸಬೇಕಾಗಿತ್ತು ಎಂಬ ಮಾತುಗಳು ಕೂಡ ಕೇಳಿಬಂದಿದೆ. [ಸರ್ವಪಕ್ಷ ಸಭೆಗೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ!]
Breaking : ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಆರಂಭ. ಸಭೆಗೆ ಬಿಜೆಪಿ ಸಂಸದರು, ಶಾಸಕರು ಗೈರು #CauveryIssue #Cauveryverdict @CMofKarnataka
— Oneindia Kannada (@OneindiaKannada) September 21, 2016
ಸರ್ವಪಕ್ಷ ಸಭೆಗೂ ಮೊದಲು ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಹಿಂದಿನ ಮಾತುಕತೆಯಲ್ಲಿ ನೀರು ಬಿಡಬೇಕೆಂದು ಹೇಳಿದ್ದ ಗೌಡರು ಈ ಬಾರಿ ತಮಿಳು ನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದೆಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ. [ಕಾವೇರಿ ನೀರು ಬಿಡುವ ಅಗತ್ಯವಿಲ್ಲ: ಸಿದ್ದುಗೆ ಎಚ್ಡಿಡಿ ಸಲಹೆ]