Cauvery; ತಮಿಳುನಾಡು ಸಿಎಂ ಕರ್ನಾಟಕದ ಸಚಿವರಿಗೆ ಕೊಟ್ಟ ಜವಾಬ್ದಾರಿಗಳು
ಬೆಂಗಳೂರು, ಆಗಸ್ಟ್ 24; ನೈಋತ್ಯ ಮುಂಗಾರು ಮಳೆಯ ಕೊರತೆಯ ಕಾರಣ ಕರ್ನಾಟಕದ ಡ್ಯಾಂಗಳು ತುಂಬಿಲ್ಲ. ಆದರೆ ರಾಜ್ಯ ಸರ್ಕಾರ ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿದೆ. ಈ ವಿಚಾರ ಈಗ ಕರ್ನಾಟಕದಲ್ಲಿ ರಾಜಕೀಯ ತಿರುವು ಪಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕಾವೇರಿ ವಿಚಾರದ ಕುರಿತು ಚರ್ಚೆ ನಡೆಸಲು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು. ಕಾವೇರಿ ಹಾಗೂ ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸರ್ವಪಕ್ಷಗಳ ಮುಖಂಡರು ಹಾಗೂ ಸಂಸತ್ ಸದಸ್ಯರ ಸಭೆ ನಡೆಯಿತು. ನಮ್ಮ ರೈತರ ಹಿತರಕ್ಷಣೆಗಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಟ್ವೀಟ್ ಒಂದನ್ನು ಮಾಡಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 'ತಮಿಳುನಾಡಿನ ಸಿಎಂ ಎಂ. ಕೆ. ಸ್ಟಾಲಿನ್, ಕರ್ನಾಟಕದ ತಮ್ಮ ಸ್ವಾರ್ಥದ ಮೈತ್ರಿಕೂಟದ ಸಚಿವ ಮಿತ್ರರಿಗೆ ಕಾವೇರಿ ನದಿ ನೀರು ವಿಚಾರದಲ್ಲಿ ನೀಡಿರುವ ಹೊಸ ಜವಾಬ್ದಾರಿಗಳು' ಎಂದು ಪಟ್ಟಿಯೊಂದನ್ನು ನೀಡಿದೆ.
ಬಿಜೆಪಿ ಹೇಳಿರುವ ಜವಾಬ್ದಾರಿಗಳು
* ಸಿದ್ದರಾಮಯ್ಯ: ಕಾವೇರಿ ವಿವಾದ ಬಗೆಹರಿಯುವ ತನಕ ಮೌನಕ್ಕೆ ಶರಣಾಗುವುದು.
* ಡಿ. ಕೆ. ಶಿವಕುಮಾರ್: ಕೆಆರ್ಎಸ್ನಿಂದ ಬಿಡುವ ನೀರು ತಮಿಳುನಾಡು ತಲುಪುವ ತನಕ, ಕೊಂಚವೂ ತೊಂದರೆ ಬಾರದಂತೆ ನೋಡಿಕೊಳ್ಳುವುದು.
* ಚೆಲುವರಾಯಸ್ವಾಮಿ: ಕಾವೇರಿ ಕೊಳ್ಳದಲ್ಲಿ ಕರ್ನಾಟಕದ ರೈತರು ಹೊಸದಾಗಿ ಬಿತ್ತನೆ ಮಾಡದಂತೆ ತಡೆಯುವುದು.
* ಪ್ರಿಯಾಂಕ್ ಖರ್ಗೆ: ತಮಿಳುನಾಡಿಗೆ ನೀರು ಹರಿಬಿಟ್ಟ ಕರ್ನಾಟಕ ಸರ್ಕಾರದ ನೀತಿಯನ್ನು ವಿರೋಧಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರ ವಿರುದ್ಧ ಎಫ್ಐಆರ್ ಹಾಕಿಸುವುದು.
'ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿಗಿಂತಲೂ, ತಮ್ಮ ಸ್ವಾರ್ಥ ಮೈತ್ರಿಕೂಟದ ಸ್ನೇಹಿತರ ಹಿತಾಸಕ್ತಿಯನ್ನು ಕಾಪಾಡುವುದೇ ಮುಖ್ಯವಾಗಿದೆ' ಎಂದು ಬಿಜೆಪಿ ಟ್ವೀಟ್ ಮಾಡಿ ಆರೋಪ ಮಾಡಿದೆ.
ಸಿದ್ದರಾಮಯ್ಯ ಪ್ರತಿಕ್ರಿಯೆ; ಬುಧವಾರ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕಾವೇರಿ, ಮೇಕೆದಾಟು, ಮಹದಾಯಿ, ಕೃಷ್ಣಾ ಸಮಸ್ಯೆಗಳ ಕುರಿತು ಪ್ರಧಾನಿಗಳ ಬಳಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ. ಅದಕ್ಕೆ ಸಹಕಾರ ನೀಡಲು ಎಲ್ಲಾ ಪಕ್ಷಗಳ ಮುಖಂಡರು ಒಪ್ಪಿದ್ದಾರೆ" ಎಂದು ಹೇಳಿದ್ದರು.
ಕಾವೇರಿ ಜಲವಿವಾದದ ಬಗ್ಗೆ ಮಾತನಾಡಿದ್ದ ಅವರು, "ಐದಾರು ವರ್ಷಗಳಿಗೊಮ್ಮೆ ಮಳೆ ಕೊರತೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ. ಸಾಮಾನ್ಯ ಜಲವರ್ಷದಲ್ಲಿ ನೀರು ಹಂಚಿಕೆಯ ತೀರ್ಮಾನ ಆಗಿದೆಯೇ ಹೊರತು ಸಂಕಷ್ಟ ಸೂತ್ರ ನಿರ್ದಿಷ್ಟಪಡಿಸಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ರಾಜ್ಯದ ವಕೀಲರಿಗೆ ಸಲಹೆ ನೀಡಲಾಗಿದೆ" ಎಂದು ತಿಳಿಸಿದ್ದರು.
ಕಾವೇರಿ ಜಲವಿವಾದದ ಅಂತಿಮ ತೀರ್ಪಿನ ಅನ್ವಯ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ತಮಿಳುನಾಡಿಗೆ 86.38 ಟಿಎಂಸಿ ಅಡಿ ನೀರು ಬಿಡಬೇಕಿತ್ತು. ಆದರೆ ಆಗಸ್ಟ್ 20ರ ತನಕ 24 ಟಿಎಂಸಿ ಅಡಿ ನೀರು ಬಿಡಲಾಗಿದೆ. ರಾಜ್ಯ ಸರ್ಕಾರ ಏಕೆ ನೀರು ಬಿಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೇಳಿದೆ.
ದೆಹಲಿಯಲ್ಲಿ ಕಳೆದ ವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ 15 ಸಾವಿರ ಕ್ಯುಸೆಕ್ ನೀರು ಕೊಡಲಾಗದು ಎಂದು ಕರ್ನಾಟಕದ ಅಧಿಕಾರಿಗಳು ವಾದ ಮಂಡಿಸುತ್ತಿದ್ದಾಗ ತಮಿಳುನಾಡಿನ ಅಧಿಕಾರಿಗಳು ಸಭಾತ್ಯಾಗ ಮಾಡಿದ್ದರು. ಕರ್ನಾಟಕ ಸರ್ಕಾರ ಈ ಕುರಿತು ಸುಪ್ರೀಂಕೋರ್ಟ್ಗೆ ಸಹ ಅರ್ಜಿ ಸಲ್ಲಿಕೆ ಮಾಡಿದೆ. ಆಗಸ್ಟ್ 25ರಂದು ಅರ್ಜಿಯ ವಿಚಾರಣೆ ನಡೆಯಲಿದೆ.












Click it and Unblock the Notifications