ಜಾತಿಶ್ರೇಷ್ಠತೆ, ಫ್ಯೂಡಲ್ ರಾಜಕಾರಣ: ಸಿದ್ದರಾಮಯ್ಯನವರ ವಿಷಯದಲ್ಲೂ ಇದೇ ನಡೆಯುತ್ತಿರುವುದು
ನಮ್ಮ ಸುತ್ತ ಜಾತಿ ಶ್ರೇಷ್ಠತೆ ಮತ್ತು ಕೋಮುವಾದವು ಎಷ್ಟರ ಮಟ್ಟಿಗೆ ಬಲವಾಗಿ ನೆಲೆಯೂರಿದೆ ಎನ್ನುವುದನ್ನು ಕಣ್ಣಾರೆ ಗಮನಿಸುತ್ತಿದ್ದರೆ ನಮ್ಮ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಭವಿಷ್ಯವು ಅಪಾಯದ ಕಡೆಗೇ ಜಾರುವುದು ಅನಿಸುತ್ತಿದೆ.
ತಮ್ಮ ಶ್ರಮದಿಂದಲೇ ದೇಶವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಟ್ಟುತ್ತಿರುವ ಈ ದೇಶದ ಮೂಲ ನಿವಾಸಿಗಳು ಈಗಂತೂ ಕೋಮುವಾದಿಗಳ ವಿಷದ ಮುಷ್ಠಿಯಲ್ಲಿ ನಲುಗಿ ಹೋಗುತ್ತಿದ್ದಾರೆ. ತೈಲ ಬೆಲೆಯು 100 ರೂಪಾಯಿಗೆ ಏರಿ ಮೇಲ್ಜಾತಿ, ಕೆಳಜಾತಿ ಎನ್ನದೇ ಎಲ್ಲರೂ ಬೆಲೆ ಏರಿಕೆಯಿಂದ ಬಾಯಿ ಬಾಯಿ ಬಿಡುತ್ತಿದ್ದರೂ ಕೂಡಾ "ಇರಲಿ ಬಿಡು, ಸರ್ಕಾರ ನಡೆಸುತ್ತಿರುವುದು ನಮ್ಮ ಜಾತಿಯವರೇ ಅಲ್ಲವೇ ಎಂಬ ಅಘಾತಕಾರಿ ಎನಿಸುವ ನೆಮ್ಮದಿಯು, ಬಹಳಷ್ಟು ಜನರಲ್ಲಿ ಮನೆ ಮಾಡಿದೆ.
ಜನರ ಬದುಕಿಗೆ ಶೋಷಣೆಯ ಹೊರೆಯಂತಾಗಿರುವ GST ತೆರಿಗೆಯನ್ನು ಕಟ್ಟುವಾಗ ಮರೆಗೆ ಹೋಗಿ ಕಣ್ಣೀರು ಸುರಿಸುವ ಮಂದಿ, ಎದುರಿಗೆ ನಾವು ಹೆಮ್ಮೆಯ ತೆರಿಗೆದಾರರು, ಎಂದು ಬೀಗುತ್ತಿದ್ದು ಇಲ್ಲೆಲ್ಲಾ ಜಾತಿವಾದ ಮತ್ತು ಕೋಮುವಾದ ಪ್ರಬಲವಾಗಿ ರಾರಾಜಿಸುತ್ತಿದೆ.
ಇತ್ತೀಚೆಗಷ್ಟೇ ಸ್ವಿಸ್ ಬ್ಯಾಂಕಿನಲ್ಲಿ ಜಮಾವಣೆ ಆಗುತ್ತಿದ್ದ ಹಣದ ಪ್ರಮಾಣ ಹೆಚ್ಚಳಗೊಂಡಿದೆ, ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ, ದೇಶ ಪ್ರೇಮದ ಮುಖವಾಡ ಧರಿಸಿದ ಕೋಮುವಾದಿಗಳ ಪೈಕಿ ಒಬ್ಬನೂ ಉಸಿರು ಬಿಡಲಿಲ್ಲ.

ಸ್ವಿಸ್ ಬ್ಯಾಂಕಿನ ಕಪ್ಪು ಹಣವೂ ಅಲ್ಲ, ಕೆಂಪು ಹಣವೂ ಅಲ್ಲ
ಇದರ ಅರ್ಥ ಅವನಿಗೆ ಬೇಕಿರುವುದು ತನ್ನ ಮೇಲ್ಜಾತಿ ಜನರ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಅಘಾತಕಾರಿಯಾದ ನೆಮ್ಮದಿಯೇ ಹೊರತು, ಸ್ವಿಸ್ ಬ್ಯಾಂಕಿನ ಕಪ್ಪು ಹಣವೂ ಅಲ್ಲ, ಕೆಂಪು ಹಣವೂ ಅಲ್ಲ. ಇನ್ನು ಹೊಸ ಶಿಕ್ಷಣ ಎಂದು ಹೇಳಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನೀತಿಯೊಂದನ್ನು ಅಳವಡಿಸುವ ಪ್ರಯತ್ನ ಮಾಡುವಾಗಲೂ ಕೂಡಾ ಅಲ್ಲಿ ನಮಗೆ ಕೋಮುವಾದ ಮತ್ತು ಜಾತಿವಾದದ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ನೆಮ್ಮದಿಯೇ ಹೆಚ್ಚಾಗುವುದೇ ವಿನಃ ಬಹುತ್ವ ಭಾರತದ ತಿಳುವಳಿಕೆ ನಾಶವಾಗುವುದಲ್ಲಾ ಎಂಬ ಆತಂಕವಲ್ಲ.

ಜಾತಿ ಶ್ರೇಷ್ಠತೆಯ ಪ್ರಜ್ಞೆಯು ಪಕ್ಷಾತೀತವಾಗಿ ಕಾಡುತ್ತಿರುವ ಸವಾಲು
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಈ ಜಾತಿ ಶ್ರೇಷ್ಠತೆಯ ಪ್ರಜ್ಞೆಯು ಆ ಪಕ್ಷ ಈ ಪಕ್ಷ ಎನ್ನದೇ ಪಕ್ಷಾತೀತವಾಗಿ ಕಾಡುತ್ತಿರುವ ಸವಾಲಾಗಿದೆ. ಉದಾಹರಣೆಗೆ ಅತಿ ಹೆಚ್ಚು ಜನ ಸಂಖ್ಯೆಯಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ವರ್ಗದ ಜನ ಸಮುದಾಯಗಳು ತಮಗೆ ಬೇಕಾದ ರಾಜಕೀಯ ನಾಯಕತ್ವವನ್ನು ಬಯಸಿ ಮಾತನಾಡುವಂತಿಲ್ಲ. ಆದರೆ ಮೇಲ್ಜಾತಿಗಳ ಅದರಲ್ಲೂ ಫ್ಯೂಡಲ್ ಗಳ ವಿಷಯದಲ್ಲಿ ಹಾಗಲ್ಲ, ಅವರು ತಮ್ಮ ರಾಜಕೀಯ ನಾಯಕತ್ವವನ್ನೂ ನಿರ್ಭಿಡೆಯಿಂದ ಹೇಳಬಹುದು ಮತ್ತು ಅದು ತಮ್ಮ ಹಕ್ಕುದಾಯತ್ವ ಎಂದೂ ಅವರು ಭಾವಿಸುತ್ತಾರೆ.

ಅಹಿಂದ ವರ್ಗದ ಸಿದ್ದರಾಮಯ್ಯನವರ ವಿಷಯದಲ್ಲೂ ಕೂಡಾ ಇದೇ ನಡೆಯುತ್ತಿರುವುದು
ಇಲ್ಲಿ ಯಾವ ಪಕ್ಷದ ಚೌಕಟ್ಟಿನ ನಿಯಮಗಳೂ ಇವರಿಗೆ ಮುಖ್ಯವಾಗುತ್ತವೆ ಎಂದು ನನಗೆ ಅನಿಸುವುದಿಲ್ಲ. ಹಾಗೆ ಅನಿಸಿದ್ದರೆ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ನಾಯಕತ್ವದ ಬಗ್ಗೆ ಮಾತನಾಡಿದಾಗ ಉಂಟಾಗುವ ಪ್ರತಿರೋಧವು ಫ್ಯೂಡಲ್ ಗಳು ನಾಯಕತ್ವದ ಬಗ್ಗೆ ಮಾತನಾಡಿದಾಗ ಉಂಟಾಗುವುದಿಲ್ಲ. ಸಮರ್ಥ ಆಡಳಿತಗಾರ ಎನಿಸಿಕೊಂಡು, ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿರುವ ಅಹಿಂದ ವರ್ಗದ ಸಿದ್ದರಾಮಯ್ಯನವರ ವಿಷಯದಲ್ಲೂ ಕೂಡಾ ಇದೇ ನಡೆಯುತ್ತಿರುವುದು. ( ಅದೂ ಎಲ್ಲ ಜಾತಿ ವರ್ಗಗಳಿಗೂ ಅನುಕೂಲವಾಗುವಂತಹ ಆಡಳಿತ ನೀಡಿದ ಹೊರತಾಗಿಯೂ).

ಈ ಎಲ್ಲಾ ಸಂಗತಿಗಳನ್ನೇ ನಾನು ಒಟ್ಟಾರೆಯಾಗಿ ಜಾತಿ ಶ್ರೇಷ್ಠತೆ ಎಂದು ಅರ್ಥ ಮಾಡಿಕೊಂಡಿದ್ದು
ಈ ಎಲ್ಲಾ ಸಂಗತಿಗಳನ್ನೇ ನಾನು ಒಟ್ಟಾರೆಯಾಗಿ ಜಾತಿ ಶ್ರೇಷ್ಠತೆ ಎಂದು ಅರ್ಥ ಮಾಡಿಕೊಂಡಿದ್ದು ಅಷ್ಟರ ಮಟ್ಟಿಗೆ ಕೋಮುವಾದ ಮತ್ತು ಜಾತಿ ಶ್ರೇಷ್ಠತೆ ಮತ್ತು ಫ್ಯೂಡಲ್ ಮನೋಧೋರಣೆಯು ಜನಪರ ರಾಜಕಾರಣವನ್ನು ಮತ್ತು ಜನ ಸಾಮಾನ್ಯರ ಬದುಕನ್ನು ನಾಶ ಮಾಡುತ್ತಿದೆ. ಇವೆಲ್ಲಾ ಹೇಳಿ ಮುಗಿಸುವ ವೇಳೆಗೆ ನಮ್ಮ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಬಂಧುಗಳು "ಸಾರ್ ಆದಷ್ಟು ಬೇಗ, ಸಂಘಟಿಸಿ, ಸಂಘಟಿಸಿ,"! ಎನ್ನುತ್ತಾರೆ.

ಅಮೇರಿಕಾ ಭಾಷಾ ಶಾಸ್ತ್ರಜ್ಞ ನೋಮ್ ಚಾಮ್ಸ್ಕೀ ಹೇಳುವಂತೆ
ಆದರೆ ನನ್ನ ಪ್ರಕಾರ ಸಂಘಟಿಸುವುದು ಎಂದರೆ ಲಕ್ಷಾಂತರ ಜನರನ್ನು ಗುಂಪು ಸೇರಿಸಿ ಸಮಾವೇಶ ಮಾಡುವುದು ಮಾತ್ರವಲ್ಲ ಬದಲಿಗೆ ಅಮೇರಿಕಾ ಭಾಷಾ ಶಾಸ್ತ್ರಜ್ಞ ನೋಮ್ ಚಾಮ್ಸ್ಕೀ ಹೇಳುವಂತೆ ನಮ್ಮ ತಳವರ್ಗದಲ್ಲಿ ಇಂತಹದ್ದನ್ನೆಲ್ಲಾ ಅರ್ಥ ಮಾಡಿಕೊಳ್ಳುವಂತ ಮಾನಸಿಕ ಕ್ರಾಂತಿ ಆಗಬೇಕು. ಆಗಷ್ಟೇ ತಳ ವರ್ಗಗಳು ಸಂಘಟಿತರಾಗಬೇಕು ಎಂಬ ಮಾತಿಗೆ ನಿಜವಾದ ಅರ್ಥ ಬರುತ್ತದೆ ಮತ್ತು ಅವರೊಳಗೆ ಮಾನಸಿಕ ಕ್ರಾಂತಿಯ ಕಿಚ್ಚೂ ಸದಾ ಹಾಗೇ ಇರುತ್ತದೆ.












Click it and Unblock the Notifications