ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಎಲ್ಲಾ Cash & Carry!
ಬೆಂಗಳೂರು, ಆಗಸ್ಟ್ 07; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ನೌಕರರ ವರ್ಗಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡುತ್ತಿವೆ.
ಸೋಮವಾರ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರ್ಗಾವಣೆ ವಿಚಾರ ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.

ಯತ್ನಾಳ್ ತಮ್ಮ ಟ್ವೀಟ್ನಲ್ಲಿ, 'ಸಿದ್ದರಾಮಯ್ಯನವರ 80% ಸರ್ಕಾರದಲ್ಲಿ ಎಲ್ಲಾ Cash & Carry. ಅಧಿಕಾರಿಗಳಿಗೆ ಹಣಕ್ಕಾಗಿ ಎಷ್ಟು ಕಾಡಿರಬೇಕು ಇವರು?. ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ದ ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಸಹಾಯಕ ಕೃಷಿ ನಿರ್ದೇಶಕರು" ಎಂದು ಹೇಳಿದ್ದಾರೆ.
"ಒಬ್ಬಬ್ಬರಿಗೂ 6-8 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆ, ನಾವು ಆತ್ಮಹತ್ಯೆ ಮಾಡಿಕೊಳ್ಳದೆ ದಾರಿಯಿಲ್ಲವೆಂದಿರುವ ಅಧಿಕಾರಿಗಳು. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೊರತುಪಡಿಸಿ ಇನೇನು ನಡೆಯುತ್ತಿಲ್ಲ' ಎಂದು ಯತ್ನಾಳ್ ಗಂಭೀರ ಆರೋಪವನ್ನು ಮಾಡಿದ್ದಾರೆ.
ಯತ್ನಾಳ್ ಮತ್ತೊಂದು ಟ್ವೀಟ್ನಲ್ಲಿ ಪತ್ರವೊಂದರ ಫೋಟೋ ಅಪ್ಲೋಡ್ ಮಾಡಿದ್ದಾರೆ. 'ಸಿದ್ದರಾಮಯ್ಯನವರ ಸರ್ಕಾರದಲ್ಲಿ ವರ್ಗಾವಣೆಗಳು ಬಹಳ ಸುಲಭವಾಗಿದೆ Cash & Carry, ಈಗ ಪೊಲೀಸ್ ಇಲಾಖೆಯಲ್ಲಂತೂ ವರ್ಗಾವಣೆಯ ಸುಗ್ಗಿ ನಡೆಯುತ್ತಿದೆ!' ಎಂದು ಹೇಳಿದ್ದಾರೆ.
'ಸರ್ವರಿಗೂ ಸಮಪಾಲು ಪಾಲಿಸಿರುವ ಮಾನ್ಯ ಮುಖ್ಯಮಂತ್ರಿಗಳು 1. ಪೊಲೀಸ್ ಇನ್ಸ್ಪೆಕ್ಟರ್ ವರೆಗೂ ಶಾಸಕರ ಶಿಫಾರಸ್ಸುಗಳು ಮಾತ್ರ ಪರಿಗಣಿಸುವುದು!, 2. ಡಿ.ವೈ.ಸ್.ಪಿ ವರ್ಗಾವಣೆಗಳು ಮಾನ್ಯ ಗೃಹ ಮಂತ್ರಿಗಳು ಹಾಗು ಮುಖ್ಯಮಂತ್ರಿಗಳದ್ದೇ ಮೇಲುಗೈ!' ಎಂದು ದೂರಿದ್ದಾರೆ.
'ಕೆ.ಎಸ್.ಆರ್.ಪಿ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯಷ್ಟೇ ಪವರ್ಫುಲ್ ವ್ಯಕ್ತಿಯೊಬ್ಬರಿದ್ದರಂತೆ! ಬೆಂಗಳೂರಿನ ಕೆಲವು ಎಸಿಪಿ ವರ್ಗಾವಣೆಯಲ್ಲಿ ಅವರದ್ದೇ ಮೇಲುಗೈ! Police Establishment Board ಈಗ PSY ಬೋರ್ಡ್ ಆಗಿದೆ!' ಎಂದು ಟೀಕಿಸಿದ್ದಾರೆ.
'ವರ್ಗಾವಣೆಗಳಲ್ಲಿ 2 ವಿಧ ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಿಂದ ಬರುವ ಟಿಪ್ಪಣಿಯಲ್ಲಿ ವರ್ಗಾಯಿಸಲು ಕೋರಿದೆ ಎಂದು ಬರೆದಿದ್ದರೆ ಅದು ಬೋರ್ಡ್ನಲ್ಲಿ ಪಾಸ್ ಆಗುವುದಿಲ್ಲ, ವರ್ಗಾಯಿಸಲು ಸೂಚಿಸಲಾಗಿದೆ ಎಂದು ಬರೆದಿದ್ದರೆ ಅದು ಮಾಜಿ ಶಾಸಕರೊಬ್ಬರು ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಅನುಮೋದನೆ ನೀಡಿದ್ದಾರೆ ಎಂದು ಅರ್ಥ' ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಗೃಹ ಇಲಾಖೆಯ ವರ್ಗಾವಣೆಯ ಬಗ್ಗೆ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. 'ಡಿಜಿಪಿಯವರೇ ಎಷ್ಟು ಬಾರಿ ವರ್ಗಾವಣೆ ಮಾಡುತ್ತೀರಿ, ಎಷ್ಟು ಬಾರಿ ರದ್ದು ಮಾಡುತ್ತೀರಿ?. Police Establishment Boardನ ಅಧ್ಯಕ್ಷತೆ ನೀವೇ ವಹಿಸುತ್ತೀರಾ ಅಲ್ಲವೇ?. PEB ಮೀಟಿಂಗ್ ಆಗಿ, ವರ್ಗಾವಣೆ ಪಟ್ಟಿ ಬಂದಮೇಲೆ ರದ್ದು ಮಾಡುವುದು ಯಾರ ಸೂಚನೆಯ ಮೇರೆಗೆ?' ಎಂದು ಪ್ರಶ್ನೆ ಮಾಡಿದ್ದಾರೆ.
'KSRP ಗೆಸ್ಟ್ ಹೌಸ್ನಲ್ಲಿ PEB ಬದಲಾಗಿ ನಡೆದಿದ್ದ "PSY" ಬೋರ್ಡ್ ಸದಸ್ಯರಿಗಾಗಿಯೇ? ಹೊಸ ಸದಸ್ಯರು "ಮಾಜಿ ಶಾಸಕರು" ಪಟ್ಟು ಹಿಡಿದು ಕೆಲವು DYSP ವರ್ಗಾವಣೆ ಮಾಡಿಸಿರುವುದು ಸಿದ್ದರಾಮಯ್ಯನವರ ಆಪ್ತ ಬಳಗಕ್ಕೆ ಬೇಜಾರಿದೆ!. ತಮಗೆ ಈ ಪಟ್ಟಿ ರದ್ದು ಮಾಡಲು ಹೇಳಿದವರಿಗೆ ಇನ್ನು "ಪ್ರಸಾದ" ತಲುಪಿಲ್ಲವಾ? ಅಥವಾ KSRP ಗೆಸ್ಟ್ ಹೌಸ್ನಲ್ಲಿ ಮಾಡಿಕೊಂಡಂತಹ ಒಪ್ಪಂದಗಳಂತೆ ನಡೆದುಕೊಂಡಿಲ್ಲವಾ?' ಎಂದು ಕೇಳಿದ್ದಾರೆ.
ಬಿಜೆಪಿ ಟ್ವೀಟ್; ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸಹ ವರ್ಗಾವಣೆ, ಭ್ರಷ್ಟಚಾರದ ಕುರಿತು ಟ್ವೀಟ್ ಮಾಡಿದ್ದು, 'ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರಾದ @siddaramaiah ರವರೆ, ನಿಮ್ಮದೇ ಸಂಪುಟದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ಶಾಸಕರ ಪತ್ರ ನಕಲು ಎಂದಿದ್ದ ನೀವು, ಈಗ ನಿಮ್ಮ ಸಚಿವರ ಕರ್ಮಕಾಂಡ ಬಯಲು ಮಾಡುವ ಪತ್ರವೂ ನಕಲು ಎನ್ನುತ್ತಿರೋ ಹೇಗೆ..? ನೀವು ಈ ಕೂಡಲೇ ಭ್ರಷ್ಟ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು..!' ಎಂದು ಹೇಳಿದೆ.
'ಕಪೋಲಕಲ್ಪಿತ ಸುಳ್ಳು ಆರೋಪಗಳ ಪುಂಗಿ ಊದಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ. ಸಚಿವರಾದ ಮೊದಲ ದಿನದಿಂದಲೇ ವಸೂಲಿ, ವರ್ಗಾವಣೆ, ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆದ ಚೆಲುವರಾಯಸ್ವಾಮಿ, 6 ರಿಂದ 8 ಲಕ್ಷ ರೂಪಾಯಿ ಕಮಿಷನ್ಗಾಗಿ ತನ್ನ ಇಲಾಖೆಯ ಮೇಲಾಧಿಕಾರಿಗಳನ್ನು ಕಲೆಕ್ಷನ್ ಏಜೆಂಟ್ಗಳನ್ನಾಗಿ ಮಾಡಿಕೊಂಡಿದ್ದಾರಂತೆ ನೋಡಿ.
ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರ ಒಂದೇ ಗ್ಯಾರಂಟಿ. ಮಾನ್ಯ @siddaramaiah ರವರೇ, ಇದರಲ್ಲಿ ಯಾರ್ಯಾರ ಪಾಲೆಷ್ಟು..?' ಎಂದು ಬಿಜೆಪಿ ಕೇಳಿದೆ.












Click it and Unblock the Notifications