ಜೋರಾಗಿ ಸಾಗಿದೆ ಮೊಬೈಲ್ ಪ್ರಚಾರ, ಆಯೋಗಕ್ಕಿಲ್ಲ ಹಿಡಿತ
ಕರ್ನಾಟಕ ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾದ ಕೂಡಲೇ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಆನ್ಲೈನ್ ಮೊರೆ ಹೋಗಿದ್ದಾರೆ. ಅಭ್ಯರ್ಥಿಗಳು ವಾಟ್ಸ್ಆಫ್ ಫೇಸ್ಬುಕ್ ಮೂಲಕ ಮತದಾರರನ್ನು ಮತ ಯಾಚಿಸುತ್ತಿದ್ದಾರೆ.
ಅಭ್ಯರ್ಥಿಗಳೇ ಮತ ಯಾಚನೆಯ ವಿಡಿಯೋ ಮಾಡಿ ವಾಟ್ಸಾಫ್ ಗ್ರೂಪ್ಗಳಿಗೆ ಹರಿಬಿಡುತಿದ್ದಾರೆ. ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಪರ ಮತಯಾಚನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಮಾಡುತ್ತಿದ್ದಾರೆ.
ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಹಲವು ಅಭ್ಯರ್ಥಿಗಳು ಟೆಲಿ ಕಾಲಿಂಗ್ ಮೂಲಕ ಮುದ್ರಿತ ಧ್ವನಿಯ ಕರೆಗಳನ್ನು ಮಾಡಿ ಮತ ಕೇಳುತ್ತಿದ್ದಾರೆ.

ಆಯೋಗಕ್ಕೆ ಇಲ್ಲ ಹಿಡಿತ
ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮೊಬೈಲ್ ಮೂಲಕ ಮತ ಯಾಚನೆ ಕುರಿತು ಚುನಾವಣಾ ಆಯೋಗಕ್ಕೆ ಯಾವುದೇ ಹಿಡಿತವೂ ಇದ್ದಂತೆ ಕಾಣುತ್ತಿಲ್ಲ ಹಾಗಾಗಿ ಬಹಿರಂಗ ಪ್ರಚಾರ ಮುಗಿದ ನಂತರ ಅಭ್ಯರ್ಥಿಗಳ ಮತಯಾಚನೆ ಎಗ್ಗು ಸಿಗ್ಗಿಲ್ಲದೆ ಸಾಗುತ್ತಿದೆ.

ಆಯೋಗದ ಒಪ್ಪಿಗೆ ಕಡ್ಡಾಯ
ಆಯೋಗದ ನೀತಿ ಸಂಹಿತೆ ಪ್ರಕಾರ ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಸಾಮೂಹಿಕವಾಗಿ ಮತಯಾಚನೆ ಸಂದೇಶಗಳನ್ನು ಕಳುಹಿಸಬೇಕೆಂದರೆ ಚುನಾವಣಾ ಆಯೋಗದ ಒಪ್ಪಿಗೆ ಪಡೆದುಕೊಳ್ಳಬೇಕು ಆದರೆ ಯಾರೂ ಒಪ್ಪಿಗೆ ಪಡೆದುಕೊಂಡಂತೆ ಏನೂ ಕಾಣುತ್ತಿಲ್ಲ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಆಯೋಗಕ್ಕೂ ಹಿಡಿತ ಇದ್ದಂತಿಲ್ಲ.

48 ಗಂಟೆಗಳಲ್ಲಿ ವಿಡಿಯೋ ತೆಗೆಯಬೇಕು
ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹಾಕುವುದು, ಫೇಸ್ಬುಕ್ನಲ್ಲಿ ವಿರೋಧ ಪಕ್ಷಗಳ ವಿರುದ್ಧ ವಿಡಿಯೋ ಹಾಕುವುದು ಇವೆಲ್ಲ ಚುನಾವಣೆಗೆ 48 ಗಂಟೆಗಳಲ್ಲಿ ತೆಗೆಯಬೇಕು ಎಂಬ ನಿಯಮವಿದ್ದರೂ ಸಹ ಇದ್ಯಾವುದೂ ಜಾರಿಯಾಗಿಲ್ಲ. ಸಾಮಾಜಿಕ ಜಾಲತಾಣಗಳ ನಿಯಂತ್ರಣ ಸುಲಭವಲ್ಲ ಎಂದು ಆಯೋಗವೂ ಒಪ್ಪಿಕೊಂಡಿದೆ.

ದೂರು ಕೊಟ್ಟರೆ ಕ್ರಮ
ವೈಯಕ್ತಿಕ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಪ್ರಕಟವಾಗುವ ವಿಚಾರಗಳ ಮೇಲೆ ನಮಗೆ ನಿಯಂತ್ರಣವಿಲ್ಲ. ಈ ಕುರಿತಂತೆ ದೂರುಗಳು ಬಂದರಷ್ಟೇ ನಾವು ಕ್ರಮ ಕೈಗೊಳ್ಳಬಹುದು. ಕೋಟ್ಯಂತರ ಮಂದಿ ಸದಸ್ಯರಾಗಿರುವ ಈ ತಾಣಗಳನ್ನು ಪರಿಶೀಲಿಸುವುದಕ್ಕೆ ಬೇಕಿರುವಷ್ಟು ಸಾಮರ್ಥ್ಯವೂ ಚುನಾವಣಾ ಆಯೋಗದ ಬಳಿ ಇಲ್ಲ' ಎಂದು ಹೇಳಿದರು.' ಎಂದು ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.

ಆಮಿಷಕ್ಕೆ ಒಳಗಾಗಬೇಡಿ
ಒಟ್ಟಿನಲ್ಲಿ ಸುಲಭವಾಗಿ, ನೇರವಾಗಿ ಮತದಾರರನ್ನು ತಲುಪಬಹುದಾದ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಅಭ್ಯರ್ಥಿಗಳು ಮತಯಾಚನೆ ಮುಂದುವರೆಸಿದ್ದು ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದೆ, ಪೊಳ್ಳು ಮಾತುಗಳಿಗೆ ಮರುಳಾಗದೆ ವಿವೇಚನೆಯಿಂದ ಮತ ಚಲಾಯಿಸಬೇಕಷ್ಟೆ.












Click it and Unblock the Notifications