ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?
ಬೆಂಗಳೂರು, ಸೆಪ್ಟೆಂಬರ್ 20 : ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ನ್ಯಾಯ ಸಿಗುತ್ತಾ? ಅಪನಂಬಿಕೆಯಿಂದಲೇ ಈ ಪ್ರಶ್ನೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಕೇಳಿಕೊಳ್ಳುತ್ತಿದ್ದಾನೆ, ಕನಿಷ್ಠ ಈ ಬಾರಿಯಾದರೂ ನ್ಯಾಯ ಸಿಗಲೆಂದು ಕಾವೇರಿ ಮಾತೆಗೆ, ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತಿದ್ದಾನೆ.
ಕಾವೇರಿ ವಿವಾದ ಗರಿಗೆದರಿ ದಶಕಗಳೇ ಕಳೆದಿದ್ದರೂ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಮಳೆಯಿಲ್ಲದೆ ಅಣೆಕಟ್ಟೆಗಳು ಬರಿದಾಗಿ, ಕುಡಿಯಲು ಕೂಡ ನೀರಿಲ್ಲದಿದ್ದರೂ ನೀರು ಬಿಡಬೇಕೆಂದು ಕಾವೇರಿ ನ್ಯಾಯಾಧೀಕರಣ, ಮೇಲುಸ್ತುವಾರಿ ಸಮಿತಿ, ಸುಪ್ರೀಂ ಕೋರ್ಟುಗಳು ಆದೇಶಿಸುತ್ತಿರುವುದರಿಂದ ಕನ್ನಡಿಗರು ಕಣ್ಣೀರಲ್ಲೇ ಕೈತೊಳೆಯುವಂತಾಗಿದೆ. [ಬೆಂಗಳೂರಿನ ನೀರಿನ ಸಮಸ್ಯೆಗೆ ರಮ್ಯಾ 'ದಿವ್ಯ' ಉಪಾಯ]

ಕರ್ನಾಟಕದ ವಕೀಲರ ಗುಂಪು ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದಿಸುತ್ತಿಲ್ಲ ಎಂಬುದು ಒಂದು ವಾದವಾದರೆ, ಅರ್ಧ ಶತಮಾನದ ಹಿಂದೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮಾಡಿಕೊಂಡಿದ್ದ ಒಪ್ಪಂದ ವಕೀಲರ ಕೈಕಟ್ಟಿಹಾಕಿದೆ, ಮಾಡುವುದಾದರೂ ಏನು ಎಂಬುದು ಮತ್ತೊಂದು ವಾದ.
ಈ ನಡುವೆ, ಈ ಅಧಿಕಾರಿಗಳೇ ಪಕ್ಷಪಾತ ಮಾಡುತ್ತಿದ್ದಾರಾ ಎಂಬ ಸಂಶಯವೂ ಕನ್ನಡಿಗರನ್ನು ಕಾಡುತ್ತಿರುವುದು ಸುಳ್ಳಲ್ಲ. ಈಗ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷತೆ ವಹಿಸಿರುವ ಶಿಶಿಶೇಖರ್ ಅವರು ತಮಿಳುನಾಡನ್ನು ಪ್ರತಿನಿಧಿಸುತ್ತಿರುವ ಐಎಎಸ್ ಅಧಿಕಾರಿ. ಅವರೇ, ಸೆಪ್ಟೆಂಬರ್ 19ರಂದು ನಡೆದ ಕಾರ್ಯದರ್ಶಿಗಳ ಸಭೆಯಲ್ಲಿ 3000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶಿಸಿದ್ದು. [ಕಾವೇರಿ ಕುದಿ : ಬೆಂಗಳೂರಿನಾದ್ಯಂತ ಅಭೂತಪೂರ್ವ ಬಂದೋಬಸ್ತ್]

ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ನದಿ ಅಭಿವೃದ್ಧಿ ಮತ್ತು ಕಾವೇರಿ ಪುನಪುರುಜ್ಜೀವನ ಯೋಜನೆಯ ವಿಶೇಷ ಕಾರ್ಯದರ್ಶಿ ಆಗಿರುವ ಶಿಶಿಶೇಖರ್ ಅವರಿಂದ ನ್ಯಾಯ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಕನ್ನಡಿಗರು ಕೇಳುತ್ತಿದ್ದಾರೆ. ಇವರ ಬದಲು ನಿಷ್ಪಕ್ಷಪಾತವಾಗಿ ನ್ಯಾಯ ದೊರಕಿಸುವಂಥ ಬೇರೆ ರಾಜ್ಯದ ಅಧಿಕಾರಿಯನ್ನು ನೇಮಿಸಿದ್ದರೆ ನ್ಯಾಯ ನಿರೀಕ್ಷಿಸಬಹುದಿತ್ತು ಎಂಬ ಆಶಯವೂ ಕನ್ನಡಿಗರದು. [ಸೆ.21ರಿಂದ 30ರವರೆಗೆ ಕಾವೇರಿ ನೀರು ಬಿಡಿ: ಶಶಿಶೇಖರ್]
ಅಲ್ಲದೆ, ಈಗ ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ನೀರು ಹಂಚಿಕೆಯ ವಿಚಾರಣೆಯನ್ನು ಆಲಿಸಲಿರುವ ವಿಭಾಗೀಯ ಪೀಠದಲ್ಲಿರುವ ನ್ಯಾಯಮೂರ್ತಿ ಉದಯ್ ಯು. ಲಲಿತ್ ಅವರಿಂದಲೂ ನಮಗೆ ನ್ಯಾಯ ಸಿಗಲಾರದು ಎಂಬುದು ಕರ್ನಾಟಕದ ಜನತೆಯ ಹೆದರಿಕೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗುವ ಮೊದಲು ಅವರು 15 ವರ್ಷಗಳ ಕಾಲ ಜಯಲಲಿತಾ ಅವರ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಈ ವ್ಯಾಜ್ಯ ಕೋರ್ಟಿನಲ್ಲಿ, ನ್ಯಾಯಾಧೀಕರಣದಲ್ಲಿ ಬಗೆಹರಿಯುವ ಸಂಗತಿಯಲ್ಲವಾದ್ದರಿಂದ ಪ್ರಧಾನಿ ನರೇಂದ್ರ ಮೋದಿಯೇ ಮಧ್ಯಸ್ಥಿಕೆ ವಹಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ, ನಮ್ಮ ಸಂಸದರಿಂದ ಬರೀ ಮಾತುಗಳು ಬರುತ್ತಿವೆಯೇ ಹೊರತು, ಅಂತಹ ಪ್ರಯತ್ನ ನಡೆಯುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ. [ಕಾವೇರಿ: ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ ಇದು!]
ಇದೆಲ್ಲದರ ಜೊತೆಗೆ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ತಮಿಳುನಾಡಿನ ನಿರ್ಮಲಾ ಸೀತಾರಾಮನ್ ಅವರು ವಾಣಿಜ್ಯ ಮತ್ತು ಉದ್ಯಮ ಖಾತೆಯ ರಾಜ್ಯ ಸಚಿವೆಯಾಗಿ ತಮ್ಮ ಕೆಲಸದಲ್ಲಿ ಎಷ್ಟು ಮುಳುಗಿದ್ದಾರೆಂದರೆ, ಕಾವೇರಿಗಾಗಿ ಕರ್ನಾಟಕದ ಪರ ಒಂದೇ ಒಂದು ದನಿ ಎತ್ತಲೂ ಅವರಿಗೆ ಪುರುಸೊತ್ತಿಲ್ಲ. ಇಂಥವರು ಕರ್ನಾಟಕಕ್ಕೆ ಯಾಕೆ ಬೇಕು? [ನಿಮಗೆ ಆತ್ಮಸಾಕ್ಷಿ ಇದ್ರೆ, ಮಾನ ಮರ್ಯಾದೆ ಇದ್ದರೆ...]












Click it and Unblock the Notifications