ಟಿವಿ ಜ್ಯೋತಿಷ್ಯ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 08 : 'ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ಚಿಂತನೆ ಇದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಟಿವಿ ವಾಹಿನಿಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. [ಟಿವಿ ಜ್ಯೋತಿಷ್ಯ ಕಾರ್ಯಕ್ರಮ ಬೇಕೆ?, ವೋಟ್ ಹಾಕಿ]
ಬೆಂಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿ ಸೋಮವಾರ ಆಯೋಜಿಸಿದ್ದ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. [ಟಿವಿ ವಾಹಿನಿಗಳ ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ?]

ಸಿದ್ದರಾಮಯ್ಯ ಹೇಳಿದ್ದೇನು? : ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, 'ಇವತ್ತು ಟಿವಿಗಳಲ್ಲಿ ಮೌಢ್ಯ ಬಿತ್ತುವಂತಹ ಜ್ಯೋತಿಷ್ಯ ಕಾರ್ಯಕ್ರಮಗಳು ಹೆಚ್ಚು ಪ್ರಸಾರವಾಗುತ್ತಿವೆ. ಈ ವ್ಯವಸ್ಥಿತ ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು' ಎಂದು ಹೇಳಿದರು. [ಕಾರ್ತಿಕ-ಮಾರ್ಗಶಿರ ಮಾಸದ ವಾರದ ಪಂಚಾಂಗ]
ಈ ನಡುವೆ ಸಭಿಕರೊಬ್ಬರು 'ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಿರ್ಬಂಧಿಸಿ' ಎಂದು ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, 'ಯೋಚನೆ ಇದೆ ನೋಡೋಣ' ಎಂದು ತಿಳಿಸಿದರು. [ಶಾಸ್ತ್ರೋಕ್ತವಾಗಿ ನಡೆದ ಶಾಸ್ತ್ರ ನಂಬದ ಮುಖ್ಯಮಂತ್ರಿ ಗೃಹಪ್ರವೇಶ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಮಾತು ಟಿಆರ್ಪಿಗಾಗಿ ಹೆಚ್ಚು ಹೊತ್ತು ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಟಿವಿ ವಾಹಿನಿಗಳಿಗೆ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ ಸರ್ಕಾರ ಜ್ಯೋತಿಷ್ಯದ ವಿಚಾರದಲ್ಲಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ 'ಕರ್ನಾಟಕ ಮೂಢನಂಬಿಕೆಗಳ ತಡೆ ಪ್ರತಿಬಂಧಕ ವಿಧೇಯಕ'ವನ್ನು ಸದನದಲ್ಲಿ ಮಂಡನೆ ಮಾಡಲು ಸಿದ್ಧತೆ ನಡೆಸಿತ್ತು. ಈ ವಿಧೇಯಕಕ್ಕೆ ರಾಜ್ಯದಲ್ಲಿ ಹಲವಾರು ಅಪಸ್ವರಗಳು ಕೇಳಿಬಂದಿತು.
ಸ್ವತಃ ಕಾಂಗ್ರೆಸ್ ಪಕ್ಷದವರೇ ಕಾಯ್ದೆ ವಿರುದ್ಧವಾಗಿ ಹೇಳಿಕೆ ನೀಡಿದರು. ವಿವಿಧ ಮಠಾಧೀಶರು, ಬುದ್ಧಿಜೀವಿಗಳು ಕಾಯ್ದೆ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣ ಇದನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. ನಂತರ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಿತು. ಈಗ ಜ್ಯೋತಿಷ್ಯ ಕಾರ್ಯಕ್ರಮದ ನಿಷೇಧದ ಬಗ್ಗೆ ಚರ್ಚೆ ಆರಂಭವಾಗಿದೆ.












Click it and Unblock the Notifications