ನಂದನ್ vs ಅನಂತ್ ಫೈಟ್ ನಾಡಿ ಮಿಡಿತ ಹೇಗಿದೆ
ಬೆಂಗಳೂರು, ಸೆ.19: ನರೇಂದ್ರ ಮೋದಿ ಅವರನ್ನು ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಮೇಲೆ ಕರ್ನಾಟಕ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿದೆ. ಪ್ರಮುಖ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈಗಲೇ ಚಿಂತನೆ ಆರಂಭಗೊಂಡಿದೆ.
ಇದೇ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡಾ ಕಾರ್ಯಗತವಾಗಿದ್ದು ಲೇಟೆಸ್ಟ್ ಆಗಿ ನಂದನ್ ನಿಲೇಕಣಿ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸುವ ಸುದ್ದಿ ಬಹಿರಂಗವಾಗಿದೆ. ಚುನಾವಣೆಗೆ ತಯಾರಿ ನಡೆಸುವಲ್ಲಿ ಬಿಜೆಪಿಗಿಂತ ಕೊಂಚ ಹಿಂದೆ ಉಳಿದಿದೆ ಆದರೆ, ಸದ್ಯದ ಜನಮತ ಹವೆ ನೋಡಿದರೆ ಕಾಂಗ್ರೆಸ್ ತನ್ನ ಪ್ರಭುತ್ವ ಸ್ಥಾಪಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
2009ರ ಲೋಕಸಭೆ ಚುನಾವಣೆ ಹಿನ್ನೋಟದೊಡನೆ ಇತ್ತೀಚಿನ ಅಸೆಂಬ್ಲಿ ಚುನಾವಣೆ ನಂತರದ ಜನರ ನಾಡಿಮಿಡಿತ, ಅಂಕಿ ಅಂಶ ನೋಡಿದರೆ ಅನಂತ್ ಕುಮಾರ್ ಜನಪ್ರಿಯತೆ ಕಡಿಮೆಯಾಗಿದೆ ಎನಿಸುತ್ತದೆ. ಐದು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಅನಂತ್ ಅವರು ಈ ಬಾರಿ ಟೆಕ್ಕಿಗಳ ವೋಟ್ ಬ್ಯಾಂಕ್ ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ. ಅನಂತ್ vs ನಂದನ್ ಸಂಭಾವ್ಯ ಕದನದತ್ತ ಪಕ್ಷಿ ನೋಟ ಇಲ್ಲಿದೆ ನೋಡಿ..

2009ರ ಫ್ಲಾಶ್ ಬ್ಯಾಕ್
2009ರಲ್ಲಿ ಅನಂತ್ ಕುಮಾರ್ ಅವರು ಪಡೆದಿದ್ದು 57,394 ಮತಗಳು, ಮತಗಳ ಶೇಕಡವಾರು ಗಳಿಕೆ ಶೇ 49.7ರಷ್ಟು ಮಾತ್ರ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕೃಷ್ಣಭೈರೇಗೌಡ 48,350 ಮತ ಪಡೆದರೂ ಶೇ 41.8 ಶೇಕಡಾವರು ಮತ ಸಿಕ್ಕಿತ್ತು ಎಂಬುದು ಗಮನಾರ್ಹ.
ಉಳಿದಂತೆ, ಚುನಾವಣಾ ಕಣದಲ್ಲಿ ವೈವಿಧ್ಯಮಯ ಸ್ಪರ್ಧಿಗಳನ್ನು ಜನರು ಕಂಡಿದ್ದರು. ಜೆಡಿಎಸ್ ನಿಂದ ಪ್ರೊ ರಾಧಾಕೃಷ್ಣ, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ , ಕ್ಯಾ ಜಿ.ಆರ್ ಗೋಪಿನಾಥ್ ಪ್ರಮುಖವಾಗಿ ಹೆಸರಿಸಬಹುದು.
ಅಖಿಲ ಭಾರತ ಹಿಂದೂ ಮಹಾಸಭಾ (ಬಿಎಂ ಗೋವಿಂದರಾಜ ನಾಯಕ್), ಅಖಿಲ ಇಂಡಿಯಾ ಜನನಾಯಕ ಮಕ್ಕಳ್ ಕಚ್ಚಿ (ಪಿ ಜಾನ್ ಬಾಸ್ಕೋ), ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದ(ಬಿ ಶಿವರಾಮಪ್ಪ) ಹೀಗೆ ಪ್ರಮುಖ ಪಕ್ಷಗಳ ಜತೆಗೆ ಹೊಸ ಪಕ್ಷಗಳು ಕಾಣಿಸಿಕೊಂಡಿತ್ತು.

ಅನಂತ್ ಜನಪ್ರಿಯತೆ
ಅನಂತಕುಮಾರ್ ಅವರು ಎಂದಿಗೂ ಚುನಾವಣೆ ಚುಕ್ಕಾಣಿ ಹಿಡಿದು ಏಕ ನಾಯಕತ್ವ ಮೆರೆದಿಲ್ಲ. ಕಳೆದ ಬಾರಿ ಮೋದಿ ಬೆಂಗಳೂರಿಗೆ ಬಂದಾಗ(ಏ.28, 2013) ನಡೆದ ಪ್ರಸಂಗ ಇನ್ನೂ ಜನ ಮಾನಸದಿಂದ ಮರೆಯಾಗಿಲ್ಲ.
ಮೋದಿ ಭಾಷಣಕ್ಕೂ ಮುನ್ನ ಮೈಕ್ ಹಿಡಿದ ಅನಂತ್ ಅವರಿಗೆ ಒಂದು ವಾಕ್ಯ ಪೂರೈಸಲು ಅವರ ಕ್ಷೇತ್ರದ ಜನರೇ ಬಿಡಲಿಲ್ಲ. ಜನತೆ ಮುಂದೆ ಮುಜುಗರ ಅನುಭವಿಸಿದ ಅನಂತ್ ಅವರ ನೆರವಿಗೆ ಮೋದಿ ಬಂದು, ನಾನು ಇಲ್ಲೇ ಇದ್ದೇನೆ.. ಅನಂತಕುಮಾರ್ ಹಾಗೂ ಸಿಎಂ ಜಗದೀಶ್ ಶೆಟ್ಟರ್ ಅವರ ಮಾತು ಕೇಳಿ ಎಂದು ಮನವಿ ಮಾಡಿಕೊಂಡರು. [ ಮುಜುಗರ ಸನ್ನಿವೇಶದ ವಿಡಿಯೋ ನೋಡಿ]

ಜನ ಯಾರ ಪರ
ಸುಶಿಕ್ಷಿತರ ಕ್ಷೇತ್ರವಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪಳಗಿದ ಹುಲಿಯಾದರೂ ಜನರಿಗೆ ಬೇಕಾದರೆ ಸೌಕರ್ಯ ನೀಡುವಲ್ಲಿ ಕಳೆದೆರಡು ವರ್ಷಗಳಲ್ಲಿ ಅನಂತ್ ವಿಫಲರಾಗಿದ್ದಾರೆ. ಹೀಗಾಗಿ ಜನರು ಉತ್ತಮ ಉದ್ಯಮಿಯಾಗಿರುವ ನಂದನ್ ಕಡೆಗೆ ತಿರುಗುವ ಸಾಧ್ಯತೆ ಹೆಚ್ಚಿದೆ.
ಅಲ್ಲದೆ ನಂದನ್ ಅವರ ಪತ್ನಿ ರೋಹಿಣಿ ಅವರು ದಾನ ಧರ್ಮದಲ್ಲಿ ಎತ್ತಿದ ಕೈ, ಹಲವಾರು ಎನ್ ಜಿಒಗಳಿಗೆ ದಾನ ಮಾಡಿದ್ದಾರಲ್ಲದೆ ಸಕ್ರಿಯವಾಗಿ ಜನಾಂದೋಲನಗಳನ್ನು ಪಾಲ್ಗೊಂಡು ಜನಮನ್ನಣೆ ಗಳಿಸಿದ್ದಾರೆ. ಇದು ಇನ್ನೊಂದಿಷ್ಟು ವರ್ಗ ನಂದನ್ ಪರ ವಾಲುವಂತೆ ಮಾಡುತ್ತದೆ.
ಅನಂತ್ ಅವರ ಪತ್ನಿ ತೇಜಸ್ವಿನಿ ಅವರ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೈ ಹಿಡಿಯಬಹುದು ಅಷ್ಟೇ.

ಅಂಕಿ ಅಂಶ ಏನು ಹೇಳುತ್ತದೆ
ಇಂಡಿಯಾ ವೋಟ್ಸ್ ವರದಿ ಪ್ರಕಾರ ಕಾಂಗ್ರೆಸ್ ಸದ್ಯದ ಪರಿಸ್ಥಿತಿಯಲ್ಲಿ 56,627 ಮತಗಳಿಂದ ಬಿಜೆಪಿಗಿಂತ ಮುಂದಿದೆ. ಲೀಡ್ ಮಾರ್ಜಿನ್ ಶೇ 5.7ರಷ್ಟಿದೆ. ಕಳೆದ ಬಾರಿ ಅನಂತ್ ಗೆದ್ದಿದ್ದು ಶೇ 7 ರಷ್ಟು ಮಾರ್ಜಿನ್ ನಿಂದ ಮಾತ್ರ ಎಂಬುದನ್ನು ಗಮಿಸಬೇಕು.
ಕ್ಷೇತ್ರಗಳು- ಕಾಂಗ್ರೆಸ್ -ಬಿಜೆಪಿಗೋವಿಂದರಾಜನಗರ : 72,654- -30,194
ವಿಜಯನಗರ : 39,358-- 44,249
ಚಿಕ್ಕಪೇಟೆ : 44,714-- 31,655
ಬಸವನಗುಡಿ : 21,588-- 43,883
ಪದ್ಮನಾಭನಗರ : 33,557-- 53,680
ಬಿಟಿಎಂ ಲೇಔಟ್: 69,712-- 20,664
ಜಯನಗರ: 31,678-- 43,990
ಬೊಮ್ಮನಹಳ್ಳಿ: 60,700-- 86,552

ಒನ್ ಇಂಡಿಯಾ ಸಮೀಕ್ಷೆ
ನಂದನ್ ನಿಲೇಕಣಿ ವಿರುದ್ಧ ಯಾರು ನಿಲ್ಲಬೇಕು ಎಂದು ಪ್ರಶ್ನೆ ಹಾಕಿ ಅನಿಲ್ ಕುಂಭ್ಳೆ ಹಾಗೂ ಅನಂತ್ ಕುಮಾರ್ ಹೆಸರು ನೀಡಲಾಗಿತ್ತು. ಒನ್ ಇಂಡಿಯಾ ಓದುಗರ ಅಭಿಮತ ಕೂಡಾ ಅನಿಲ್ ಕುಂಬ್ಳೆ ಪರ ಇದೆ.
ಇಲ್ಲಿವರೆಗೂ 4170 ಮತ ಬಿದ್ದಿದ್ದು 1092 ಮತಗಳು ಅನಂತ್ ಕುಮಾರ್ ಗೆ ಬಂದಿದ್ದರೆ, ಅನಿಲ್ ಕುಂಬ್ಳೆಗೆ 2193 ವೋಟ್ ಬಿದ್ದಿದೆ. ಇಬ್ಬರು ಬೇಡ ಎಂದು ಶೇ 21 ರಷ್ಟು ಜನ ಹೇಳಿರುವುದು ವಿಶೇಷ











Click it and Unblock the Notifications