ಶುಕ್ರವಾರದ ಸಚಿವ ಸಂಪುಟ ಸಭೆ ನಿರ್ಣಯಗಳು
ಬೆಂಗಳೂರು, ಜ.10 : ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವುದು, ಶಿಕ್ಷಕರಿಗೆ ವೇತನ ಸಹಿತ ಒಂದು ವರ್ಷದ ರಜೆ, ಸರ್ಕಾರಿ ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿಯರಿಗೆ 2 ರೂ ಪ್ರೋತ್ಸಾಹ ಧನ, ಬೆಂಗಳೂರಿನಲ್ಲಿ ಪಶು ಭವನ ಸ್ಥಾಪನೆಗೆ 33 ಕೋಟಿ ಅನುದಾನ ಮುಂತಾದ ನಿರ್ಣಯಗಳನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ನಂತರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಮಾಧ್ಯಮಗಳಿಗೆ ನೀಡಿದರು. ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಡಾ.ವೆಂಕಟೇಶ್ ಹಾಗೂ ರಾಜಶೇಖರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಇನ್ನುಮುಂದೆ ಲೋಕಾಯುಕ್ತ ದಾಳಿಗೊಳಗಾದವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಸಂಪುಟ ಸಭೆಯ ಇತರ ನಿರ್ಣಯಗಳು

ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ
ಸರ್ಕಾರಿ ಶಾಲೆಯ ಒಂದನೇ ತರಗತಿಯ ಹೆಣ್ಣು ಮಕ್ಕಳಿಗೆ ಈ ವರ್ಷದ ಜನವರಿಂದ ಜಾರಿಯಾಗುವಂತೆ ಪ್ರತಿದಿನ 2 ರೂ. ಹಾಜರಾತಿ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೆಣ್ಣು ಮಕ್ಕಳ ಶಾಲಾ ಶಿಕ್ಷಣವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಿಂದಾಗ ಸರ್ಕಾರಕ್ಕೆ ವಾರ್ಷಿಕವಾಗಿ 4.49 ಕೋಟಿ ಹೊರೆ ಬೀಳಲಿದೆ.

ಅಧ್ಯಾಪಕರಿಗೆ ಬಿ.ಎಡ್ ಮಾಡಲು ರಜೆ
ಪಿಯುಸಿ ಅಧ್ಯಾಪಕರು ಬಿ.ಎಡ್ ಮಾಡಲು ಅನುಕೂಲವಾಗುವಂತೆ ಒಂದು ವರ್ಷದ ಕಾಲದ ವೇತನ ಸಹಿತ ರಜೆ ಮತ್ತು ಅವಕಾಶ ಮಾಡಿಕೊಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕಾಗಿ 9 ಕೋಟಿ 44 ಲಕ್ಷ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಈ ರಜೆ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರಲಿದೆ.

ಪಶುಭವನ ನಿರ್ಮಾಣ
ಬೆಂಗಳೂರಿನ ಹೆಬ್ಬಾಳದ ಪಶು ಆಸ್ಪತ್ರೆ ಆವರಣದಲ್ಲಿನ 4 ಎಕರೆ ಪ್ರದೇಶದಲ್ಲಿ ಪಶು ಭವನ ನಿರ್ಮಾಣ ಮಾಡಲು 33 ಕೋಟಿ ರೂ. ವೆಚ್ಚ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. 6 ಕೋಟಿ ರೂ. ಹಣವನ್ನು ಮೀಸಲಿಡಲಾಗಿದ್ದು, 20 ಕೋಟಿ ರೂ.ಗಳ ಟೆಂಡರ್ ಕಾಮಗಾರಿಗೆ ಅನುಮೋದನೆ ದೊರಕಿದೆ.

ಸಮುದ್ರ ಕೊರೆತಕ್ಕೆ ತಡೆಗೋಡೆ
ದಕ್ಷಿಣ ಕನ್ನಡ ಜಿಲ್ಲೆಯ ಕುಂದೂರು ಬಳಿ ಎರಡು ಸಮುದ್ರ ತಡೆಗೋಡೆ ನಿರ್ಮಾಣ ಮಾಡಲು 33 ಕೋಟಿ ಅನುದಾನ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಾಗೆಯೇ ಹಾಸನದ ಕೃಷಿ ಕಾಲೇಜಿನಲ್ಲಿ ಮೂಲ ಸೌಲಭ್ಯ ಒದಗಿಸಲು 6.74 ಕೋಟಿ ರೂ.ಗಳನ್ನು ನೀಡಲು ಒಪ್ಪಿಗೆ ಪಡೆಯಲಾಗಿದೆ.

ಗೋಧಿ ಪ್ರಮಾಣ ಹೆಚ್ಚಳ
ಉತ್ತರ ಕರ್ನಾಟಕ ಭಾಗದಲ್ಲಿ ಪಡಿತರ ಚೀಟಿದಾರರಿಗೆ ನೀಡುವ ಗೋಧಿ ಪ್ರಮಾಣವನ್ನು 4, 6, 10 ಕೆಜಿಗೆ ಪರಿಷ್ಕರಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡದಲ್ಲಿ 2,4,6 ಕೆಜಿಗೆ ಹೆಚ್ಚಳ ಮಾಡಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ರಾಗಿ, ಜೋಳ ದೊರೆಯುದ ಕಾರಣ ಗೋಧಿಯ ವಿತರಣಾ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಅಲ್ಲದೆ ಪಡಿತರ ಧಾನ್ಯ ಹಮಾಲಿಗಳ ಕೂಲಿಯನ್ನು 20 ರಿಂದ 30 ರೂ.ಗೆ ಹೆಚ್ಚಳ ಮಾಡಲಾಗಿದೆ.











Click it and Unblock the Notifications