Cabinet Expansion: ದೆಹಲಿಯಲ್ಲೇ ಉಳಿದ ಸಿಎಂ ಸಿದ್ದು; ದಿಢೀರನೆ ಬೆಂಗಳೂರಿಗೆ ಬಂದ ಡಿಕೆಶಿ; ಕಾರಣವೇನು?
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 13ರಂದೇ ಪ್ರಕಟವಾಗಿದೆ. 135 ಸ್ಥಾನಗಳೊಂದಿಗೆ ಬಹುಮತ ಕಾಂಗ್ರೆಸ್, ಸಿಎಂ ಆಯ್ಕೆ ಮಾಡಲು ಒಂದು ವಾರ ತೆಗೆದುಕೊಂಡರು. ಆ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಜೊತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸರ್ಕಾರ ರಚಿಸಿ ಮತ್ತೆ ಒಂದು ವಾರ ಕಳೆದರೂ ಸಚಿವ ಸಂಪುಟ ವಿಸ್ತರಣೆ ಜಟಾಪಟಿ ಮಾತ್ರ ಇನ್ನೂ ಮುಂದುವರೆದಿದೆ. ಇದಕ್ಕಾಗಿ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಶುರುವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ತಮ್ಮದೇ ಆದ ಪಟ್ಟಿಗಳನ್ನು ತಯಾರಿಸಿಕೊಂಡು ದೆಹಲಿಗೆ ಹೋಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬುಧವಾರವೇ ದೆಹಲಿಗೆ ತೆರಳಿದ್ದರು. ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಕಾಂಗ್ರೆಸ್ ಹೈಕಮಾಂಡ್ ಬಳಿ ತೀವ್ರ ಲಾಬಿ ನಡೆಸಲಾಗುತ್ತಿದೆ. ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ದಿಢೀರನೆ ಗುರುವಾರ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, "ನಮ್ಮ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಇರುವ ಕಾರಣ ದೆಹಲಿಯಿಂದ ಬಂದಿದ್ದೇನೆ. ಮತ್ತೆ ಶುಕ್ರವಾರ ದೆಹಲಿಗೆ ಹೋಗುತ್ತೇನೆಮ," ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆಗಾಗಿಯೇ ದೆಹಲಿಗೆ ಹೋಗಿದ್ದು, ಶುಕ್ರವಾರ ಒಂದು ದಿನ ಮಾತ್ರ ಬಾಕಿ ಇದೆ. ಎಲ್ಲವನ್ನೂ ನಾಳೆ ಸಂಜೆಯೇ ತಿಳಿಸುತ್ತೇವೆ ಎಂದರು.
ಇನ್ನು ಕಾಂಗ್ರೆಸ್ನ 60ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಹಾಗೂ ವರಿಷ್ಠರ ಬಳಿ ಲಾಭಿ ನಡೆಸುತ್ತಿದ್ದಾರೆ. ಈಗಾಗಲೇ 24 ನೂತನ ಸಚಿವ ಪಟ್ಟಿಯನ್ನು ಹೈಕಮಾಂಡ್ ತಯಾರು ಮಾಡಿಕೊಂಡಿದೆ. ಅನುಭವಿ ಹಾಗೂ ಯುವ ಶಾಸಕರನ್ನೊಳಗೊಂಡ ಪಟ್ಟಿಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದಕ್ಕೆ ಶುಕ್ರವಾರ ಸಂಜೆ ತೆರೆ ಬೀಳಲಿದೆ.
ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿಕಾರಿದ್ದ ಸಂಸದ ಪ್ರತಾಪ್ ಸಿಂಹ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, "ಜೂನ್ ನಂತರ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಜೂನ್ ಯಾಕೆ ನಾಳೆಯಿಂದಲೇ ನಮ್ಮ ಮನೆ ಹತ್ರ ಬಂದು ಮಲ್ಕೊಳ್ಳೋಕೆ ಹೇಳಿ," ಎಂದು ತಿರುಗೇಟು ನೀಡಿದರು.
ನಿನ್ನೆ (ಗುರುವಾರ) ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, "ಕಾಂಗ್ರೆಸ್ ಮುಖ ನೋಡಿ ಯಾರೂ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ ನೋಡಿ ಮತ ನೀಡಿದ್ದಾರೆ, ಅದು ನೆನಪಿರಲಿ. ಕೊಟ್ಟ ಭರವಸೆಯನ್ನು ಕೂಡಲೇ ಈಡೇರಿಸಿ, ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕಿದರೆ ಜೂನ್ 1ರಿಂದ ಹೋರಾಟ ಮಾಡುತ್ತೇವೆ," ಎಂದು ಎಚ್ಚರಿಕೆ ನೀಡಿದ್ದರು.
ಇನ್ನು ಶನಿವಾರ 11:45ಕ್ಕೆ ನೂತನ 24 ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಮನವಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸ್ಪಂದಿಸಿದ್ದು, ಪ್ರಮಾಣವಚನ ಬೋಧಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ ತಮ್ಮ ಆಪ್ತರ ಶಾಸಕರ ಪರ ಲಾಬಿ ನಡೆಸಿದ್ದಾರೆ. ಇದೇ ವೇಳೆ ಮೂರ್ನಾಲ್ಕು ಬಾರಿ ಮಂತ್ರಿ ಆದವರಿಗೆ ಮತ್ತೆ ಸಚಿವ ಸ್ಥಾನ ನೀಡದಿರಲು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡೋಣವೆಂದು ಸಿಎಂ ಸಿದ್ದರಾಮಯ್ಯ ಅವರ ಲಿಸ್ಟ್ನಲ್ಲಿದ್ದ, ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ಶಾಸಕ ವೆಂಕಟೇಶ್, ಮಧುಗಿರಿಯ ಕೆ.ಎನ್. ರಾಜಣ್ಣ, ಹಳಿಯಾಳದ ಆರ್.ವಿ. ದೇಶಪಾಂಡೆ ಹಾಗೂ ಯಲಬುರ್ಗಾದ ಬಸವರಾಜ ರಾಯರೆಡ್ಡಿಗೆ ಸಚಿವ ಸ್ಥಾನ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications