ಸಂಪುಟ ವಿಸ್ತರಣೆ: ಎಚ್ಡಿಕೆ ಮಾಸ್ಟರ್ ಪ್ಲಾನಿಗೆ ದೇವೇಗೌಡ್ರು ಬೆರಗಾಗಿ ಹೋದರೇ?
Recommended Video

ಡಿಸೆಂಬರ್ 22ಕ್ಕೆ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ದಿನ ನಿಗದಿಯಾಗಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿ ಮಹೂರ್ತ ನಿಗದಿಯಾಗುವುದು ಹೊಸದೇನಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಈ ಬಾರಿ ಶುಭ ಸುದ್ದಿ ಹೊರಬೀಳಲಿದೆ ಎನ್ನುವ ಮಾಹಿತಿಯಿದೆ.
ಸರಕಾರ ಅಧಿಕಾರಕ್ಕೆ ಬಂದ ನಂತರ, ಸದಾ ಒಂದಲ್ಲೊಂದು ವಿಚಾರವನ್ನು ಇಟ್ಟುಕೊಂಡು ಮುನಿಸಿಕೊಂಡು ಬರುತ್ತಲೇ ಇರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಈ ಹೊತ್ತಿನಲ್ಲಿ, ಸರಕಾರದ ಭವಿಷ್ಯ ಏನಾಗಲಿದೆಯೋ ಎನ್ನುವ ಭಯ ಎಲ್ಲರಲ್ಲೂ ಕಾಡುತ್ತಿದೆ.
ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ತಪ್ಪೇನು ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ, ಸರಕಾರದ ಬುಡವನ್ನು ಅಲ್ಲಾಡಿಸುತ್ತದಾ ಎನ್ನುವುದಿಲ್ಲಿ ಕುತೂಹಲದ ಅಂಶ. ಈ ನಡುವೆ, ಪ್ಲಾನ್ 'ಎ' ವರ್ಕ್ ಆಗದೇ ಇದ್ದರೆ, ಪ್ಲಾನ್ 'ಬಿ' ರಣತಂತ್ರವನ್ನು ಮುಖ್ಯಮಂತ್ರಿ ಹಣೆದಿಟ್ಟಿದ್ದಾರೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.
ಕೆಲವು ಹಾಲೀ ಸಚಿವರಿಗೆ ಕೊಕ್ ಕೊಟ್ಟು, ಮತ್ತೊಬ್ಬರಿಗೆ ಚಾನ್ಸ್ ನೀಡುವ ಸಾಧ್ಯತೆಯಿರುವುದರಿಂದ, ಸಂಪುಟದಿಂದ ಕೈಬಿಟ್ಟವರು ಅಸಮಾಧಾನಗೊಳ್ಳುವುದು ಸಹಜ, ಆದರೆ, ಇದನ್ನು ಸಮ್ಮಿಶ್ರ ಸರಕಾರದ ಹಿರಿಯ ಮುಖಂಡರು, ದೇವೇಗೌಡ್ರು ಮತ್ತು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ನಿಭಾಯಿಸಲಿದೆ ಎನ್ನುವುದಿಲ್ಲಿ ಪ್ರಶ್ನೆ.
ಕೆಲವೊಂದು ಮೂಲಗಳ ಪ್ರಕಾರ, ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದರೆ, ಸಚಿವ ಸಂಪುಟ ವಿಸ್ತರಣೆಯ ನಂತರ ಅಸಮಾಧಾನದ ಹೊಗೆ ಹೆಚ್ಚಾಗಬಹುದು. ಇದರ ಮುನ್ಸೂಚನೆಯನ್ನು ಅರಿತಿರುವ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ದೇವೇಗೌಡ್ರು ಹೊರಡಿಸಿದ್ದ ಫರ್ಮಾನ್ ಅನ್ನು ಸದ್ಯಕ್ಕೆ ಪಕ್ಕಕ್ಕಿಟ್ಟುಕೊಂಡಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಸಮಸ್ಯೆ
ಕಾಂಗ್ರೆಸ್ ನಲ್ಲಿರುವಂತೆ, ಸಚಿವ ಸ್ಥಾನದ ಆಕಾಂಕ್ಷಿಗಳ ಸಮಸ್ಯೆ ಜೆಡಿಎಸ್ ಪಕ್ಷಕ್ಕಿಲ್ಲ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡುವುದೂ ಒಂದೇ, ಜೆಡಿಎಸ್ ನಲ್ಲಿ ಒಡಕು ಮೂಡುವುದೂ ಒಂದೇ. ಯಾಕೆಂದರೆ, ಯಾವ ಪಕ್ಷದಲ್ಲಿ ಸಮಸ್ಯೆಯಾದರೂ ಅದು ಮುಳುವಾಗುವುದು ಸಮ್ಮಿಶ್ರ ಸರಕಾರದ ಭವಿಷ್ಯಕ್ಕೆ. ಆದ್ದರಿಂದ, ಎರಡೂ ಪಕ್ಷದ ಮುಖಂಡರು, ಸರಿಯಾದ ರಾಜಕೀಯ ದಾಳ ಉರುಳಿಸಬೇಕಾಗಿದೆ.

ಗೌಡ್ರು, ಇಬ್ಬರ ಹೆಸರನ್ನು ಮುಖ್ಯಮಂತ್ರಿಗೆ ಸೂಚಿಸಿದ್ದಾರೆ
ಜೆಡಿಎಸ್ ಪಕ್ಷದಲ್ಲಿರುವ ಎರಡು ಸ್ಥಾನಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ್ರು, ಇಬ್ಬರ ಹೆಸರನ್ನು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸೂಚಿಸಿದ್ದಾರೆ. ಈ ಆಯ್ಕೆಯ ಬಗ್ಗೆ ಕುಮಾರಸ್ವಾಮಿಗೆ ತಕರಾರು ಇಲ್ಲದಿದ್ದರೂ, ಕಾದು ನೋಡುವ ತಂತ್ರಕ್ಕೆ ಸಿಎಂ ಮುಂದಾಗಿದ್ದಾರೆ. ಸಂಪುಟ ವಿಸ್ತರಣೆಯ ನಂತರ, ಸರಕಾರಕ್ಕೆ ತೊಂದರೆಯಾದರೆ, ಈ ಆಯ್ಕೆಯನ್ನು ಪ್ರಯೋಗಿಸಲು ಸಿಎಂ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಖಾಲಿ ಎರಡು ಸ್ಥಾನ ಭರ್ತಿ ಮಾಡಲು ಕುಮಾರಸ್ವಾಮಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಗೌಡ್ರು, ಖಾಲಿ ಎರಡು ಸ್ಥಾನವನ್ನು ಭರ್ತಿ ಮಾಡಲು ಕುಮಾರಸ್ವಾಮಿಗೆ ಸೂಚಿಸಿದ್ದಾರೆ. ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿ ಮತ್ತು ಮಂಗಳೂರಿನ ಶ್ರೀಮಂತ ಉದ್ಯಮಿ, ಶಾಸಕ ಬಿ ಎಂ ಫಾರೂಖ್ ಅವರ ಹೆಸರನ್ನು ಸೂಚಿಸಿದ್ದಾರೆ. ಇದಕ್ಕೆ ಎಚ್ದಿಕೆ ಒಪ್ಪಿಗೆ ಕೂಡಾ ಇದೆ ಎನ್ನುವ ಮಾಹಿತಿಯಿದೆ.

ಬಿಜೆಪಿಯ 2ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ ಪ್ಲಾನ್
ಆದರೆ, ರಮೇಶ್ ಜಾರಕಿಹೊಳಿ ಮತ್ತು ಹಾಲೀ ಸಚಿವರನ್ನು ಕೈಬಿಟ್ಟ ನಂತರ, ಸರಕಾರದ ಅಳಿವು ಉಳಿವೆಗೇನಾದರೂ ತೊಂದರೆ ಬಂದದ್ದೇ ಆದಲ್ಲಿ, ಬಿಜೆಪಿಯ ಇಬ್ಬರು ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಿಜೆಪಿಯಿಂದ ಬರುವ ಇಬ್ಬರಿಗೆ ನೇರವಾಗಿ ಸಚಿವ ಸ್ಥಾನದ ಆಫರ್ ನೀಡುವ ತಂತ್ರವನ್ನು ಹಣೆದಿದ್ದಾರೆ, ಇದನ್ನು ಗೌಡ್ರಿಗೂ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಯಾವ ಶಾಸಕರಿಗೆ ಗಾಳ ಹಾಕಲಾಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ
ಆದರೆ, ಬಿಜೆಪಿಯ ಯಾವ ಶಾಸಕರಿಗೆ ಗಾಳ ಹಾಕಲಾಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಒಂದು ವೇಳೆ, ಸಚಿವ ಸಂಪುಟ ವಿಸ್ತರಣೆಯ ನಂತರ ಎಲ್ಲವೂ ನಿರಾಂತಕವಾದರೆ, ಮಾತ್ರ ಎಚ್ ಕೆ ಕುಮಾರಸ್ವಾಮಿ ಮತ್ತು ಫಾರೂಖ್ ಅವರಿಗೆ ಸಚಿವ ಸ್ಥಾನವನ್ನು ನೀಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.












Click it and Unblock the Notifications