ಸಚಿವ ಸ್ಥಾನದ 'ಅರ್ಹ' ಮತ್ತು 'ಅನರ್ಹ' ಆಕಾಂಕ್ಷಿಗಳ ನಡುವೆಯೇ ಮಾತಿನ ಸಮರ
ಬೆಂಗಳೂರು, ಜನವರಿ 31: ಸಮ್ಮಿಶ್ರ ಸರ್ಕಾರ ಪತನ ಹಾಗೂ ಮತ್ತು ಚುನಾವಣೆ ವೇಳೆ ನಾವೆಲ್ಲಾ ಒಂದು ಎಂದು ಒಗ್ಗಟ್ಟು ಪ್ರದರ್ಶಿಸಿದ್ದ ಬಂಡಾಯ ಶಾಸಕರ ನಡುವೆಯೇ ಈಗ ಜಟಾಪಟಿ ಶುರುವಾಗಿದೆ. ಇದು ಚುನಾವಣೆಯಲ್ಲಿ ಗೆದ್ದು 'ಅರ್ಹ'ರಾದ ಮತ್ತು ಸೋತು 'ಅನರ್ಹ'ರಾದವರ ನಡುವಿನ ಕಿತ್ತಾಟ.
ಸಮ್ಮಿಶ್ರ ಸರ್ಕಾರ ಪತನಗೊಳಿಸಲು ರಾಜೀನಾಮೆ ನೀಡಿದ್ದ ಎಲ್ಲ 17 ಶಾಸಕರೂ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಎಲ್ಲರಿಗೂ ಮಂತ್ರಿಗಿರಿ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಕೂಡ ರಾಗ ಬದಲಿಸಿದೆ. ಹೀಗಾಗಿ ಚುನಾವಣೆಯಲ್ಲಿ ಸೋತವರು ಕಂಗಾಲಾಗಿದ್ದರೆ, ಗೆದ್ದ ಶಾಸಕರಲ್ಲಿಯೂ ತಳಮಳ ಉಂಟಾಗಿದೆ.
ಸಂಪುಟ ವಿಸ್ತರಣೆಯ ಶುಭ ಸುದ್ದಿಗಾಗಿ ತುದಿಗಾಲಲ್ಲಿ ನಿಂತಿರುವ ಗೆದ್ದ ಶಾಸಕರು, ಸೋತ ಶಾಸಕರಿಗೆ ತಾಳ್ಮೆಯ ಪಾಠ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರು ಸ್ವಲ್ಪ ತಾಳ್ಮೆ ವಹಿಸಬೇಕು ಎಂದು ಶಾಸಕ ಎಸ್ಟಿ ಸೋಮಶೇಖರ್ ಹೇಳಿದ್ದರು. ಅದಕ್ಕೆ ಶಾಸಕ ಕೆ. ಸುಧಾಕರ್ ಕೂಡ ದನಿಗೂಡಿಸಿದ್ದರು. ಇದು ಮಾಜಿ ಶಾಸಕ ಎಚ್ ವಿಶ್ವನಾಥ್ ಅವರನ್ನು ಕೆರಳಿಸಿದೆ. ಸಂಪುಟ ವಿಸ್ತರಣೆಯಾಗುವ ಮೊದಲೇ ಈ ವಾಗ್ಯುದ್ಧ ಜೋರಾಗಿದೆ.

ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ
ವಿಶ್ವನಾಥ್ ಅವರು ಹಿರಿಯರು. ಅವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಸುಪ್ರೀಂಕೋರ್ಟ್ ತೀರ್ಪು ಏನು ಹೇಳುತ್ತದೆ ಎನ್ನುವುದು ಕೂಡ ಮುಖ್ಯ. ಸಚಿವ ಸ್ಥಾನ ಯಾರಿಗೆ ಕೊಡಬಹುದು ಎನ್ನುವುದನ್ನು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಕೂಡ ಕಾನೂನಿನ ಇತಿಮಿತಿಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಗೆದ್ದ ಎಲ್ಲರಿಗೂ ಮುಖ್ಯಮಂತ್ರಿ ಸಚಿವ ಸ್ಥಾನ ನೀಡುತ್ತಾರೆ. ಉಪ ಚುನಾವಣೆಯಲ್ಲಿ ಸೋತವರ ವಿಚಾರವನ್ನು ಸಹ ಅವರೇ ನಿರ್ಧರಿಸುತ್ತಾರೆ ಎಂದು ಸುಧಾಕರ್ ಹೇಳಿದ್ದರು.

ಯಾರಿಗೂ ಲಾಭವಿಲ್ಲ
ಎಚ್. ವಿಶ್ವನಾಥ್ ಜತೆ ಮುಖ್ಯಮಂತ್ರಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದರ ಕುರಿತು ಬಹಿರಂಗವಾಗಿ ಮಾತಾಡುವುದರಿಂದ ವಿಶ್ವನಾಥ್ ಅವರಿಗೂ ಲಾಭ ಇಲ್ಲ. ನಮಗೂ ಲಾಭ ಇಲ್ಲ. ಪಕ್ಷಕ್ಕೂ ಲಾಭ ಇಲ್ಲ ಎಂದಿದ್ದ ಸುಧಾಕರ್, ಸೋತವರನ್ನು ಸಚಿವರನ್ನಾಗಿ ಮಾಡಲು ಕಾನೂನು ಅಡ್ಡಿಯಾಗಿದೆ ಎಂದು ಸುಧಾಕರ್ ತಿಳಿಸಿದ್ದರು.

ನಮ್ಮದು ಹೋರಾಟವೇ ಹೊರತು ಮಾರಾಟವಲ್ಲ
'ಸುಧಾಕರ್ ಡಾಕ್ಟರ್. ಆದರೆ ನಾನು ಲಾಯರ್. ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ಚುನಾವಣೆಗೆ ನಿಂತು ಪವಿತ್ರರಾಗಿ ಬನ್ನಿ ಎಂದು ತೀರ್ಪು ಹೇಳಿದೆಯೇ ಹೊರತು ಚುನಾವಣೆಯ ಸೋಲು ಗೆಲುವಿನ ಬಗ್ಗೆ ಹೇಳಿಲ್ಲ. ಸೋತ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಹೀಗಿರುವಾಗ ನಾವು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಸರ್ಕಾರ ರಚನೆಯಾಗಲು ಕಾರಣರಾಗಿರುವ ನಮ್ಮ ಹೋರಾಟಕ್ಕೆ ಸೂಕ್ತ ಗೌರವ ಸಿಗಬೇಕು. ನಮ್ಮದು ಹೋರಾಟವೇ ಹೊರತು ಮಾರಾಟವಲ್ಲ. ಯಡಿಯೂರಪ್ಪ ಸೇರಿದಂತೆ ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು' ಎಂದು ಎಚ್ ವಿಶ್ವನಾಥ್ ತೀಕ್ಷ್ಣವಾಗಿ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ನಂಬಿದ್ದೇನೆ
'ನಾನು ಚುನಾವಣೆಗೆ ನಿಲ್ಲಬಾರದಿತ್ತು ಎನ್ನಲು ಸುಧಾಕರ್ ಯಾರು? ನನ್ನ ಸ್ಪರ್ಧೆಯ ಕುರಿತು ಮಾತನಾಡಲು ಅವರು ಯಾರು? ನಾನು ಯಡಿಯೂರಪ್ಪ ಅವರನ್ನು ಈಗಲೂ ನಂಬಿದ್ದೇನೆ. ಮಂತ್ರಿ ಸ್ಥಾನ ಸಿಗಲಿಲ್ಲ ಎಂದರೆ ಆಕಾಶವೇನೂ ಕಳಚಿಬೀಳುವುದಿಲ್ಲ. ನಾನು ಇಟ್ಟಿರುವ ಹೆಜ್ಜೆ ಬಗ್ಗೆ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಇಬ್ಬರಿಗೂ ಗೊತ್ತಿದೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಬೇಕು ಎಂಬ ಗುರಿಯಿಂದ ರಾಜೀನಾಮೆ ನೀಡಿದ್ದೆ. ಹೀಗಾಗಿ ನನ್ನ ಉದ್ದೇಶ ಈಡೇರಿದೆ. ಮಂತ್ರಿಗಿರಿ ಸಿಗದಿದ್ದರೂ ಈ ವಿಶ್ವನಾಥ್ ಅಳುಕುವುದಿಲ್ಲ' ಎಂದು ಅವರು ಹೇಳಿದ್ದಾರೆ.

ನಾನೇನು ಚಿಕ್ಕಮಗುವಲ್ಲ
'ವಿಶ್ವನಾಥ್ ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರ ನೋವಿ ನನಗೆ ಅರ್ಥವಾಗುತ್ತದೆ. ಉಪ ಚುನಾವಣೆಯಲ್ಲಿ ಸೋತಿರುವ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರೊಂದಿಗೆ ಎಂದೆಂದಿಗೂ ಇರುತ್ತೇವೆ. ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಲ್ಲಿ ನಾನೂ ಒಬ್ಬ. ಮಾಧ್ಯಮಗಳ ಮೂಲಕ ಬಹಿರಂಗವಾಗಿ ಮಾತನಾಡುವುದರಲ್ಲಿ ಪ್ರಯೋಜನವಿಲ್ಲ. ಸೂಕ್ತ ವೇದಿಕೆಯಲ್ಲಿ ಯಾರಿಗೆ ಹೇಗೆ ಹೇಳಬೇಕೋ ಹಾಗೆ ಅರ್ಥ ಮಾಡಿಸೋಣ ಎಂದು ಹೇಳಿದ್ದೆ. ಅವರಿವರ ಮಾತು ಕೇಳಿ ಮಾತನಾಡಲು ನಾನೇನು ಎಳೆ ಮಗುವೇ? ಮೂರು ಬಾರಿ ಗೆದ್ದು ಶಾಸಕನಾಗಿದ್ದೇನೆ. ವೈದ್ಯ ಕೂಡ ಆಗಿದ್ದೇನೆ. ನಾನು ಕೂಡ ಪ್ರಪಂಚ ನೋಡಿದ್ದೇನೆ. ನನಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ' ಎಂದು ಸುಧಾಕರ್ ತಿರುಗೇಟು ನೀಡಿದ್ದಾರೆ.












Click it and Unblock the Notifications