ಸಚಿವ ಸಂಪುಟ: ಈ ಗೊಂದಲ ಸಂಜೆಯೊಳಗೆ ಬಗೆ ಹರಿಯುತ್ತದೆ
ಬೆಂಗಳೂರು, ನ. 18: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುತ್ತಿದ್ದಂತೆಯೆ ಬಿಜೆಪಿ ಪಾಳೆಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಕುರಿತು ಚರ್ಚೆಗಳು ಶುರುವಾಗಿವೆ. ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಖುಷಿಯಿದ್ದರೆ, ಹಲವು ಸಚಿವರಿಗೆ ಎಲ್ಲಿ ಸಂಪುಟದಿಂದ ಕೈಬಿಡುತ್ತಾರೊ ಎಂಬ ಆತಂಕ ಶುರುವಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಜೆಯೊಳಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೋ ಈ ಗೊಂದಲ ಸಂಜೆಯೊಳಗೆ ಬಗೆ ಹರಿಯುತ್ತದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ನಮ್ಮೊಂದಿಗೆ ಯಾವ ಚರ್ಚೆಯನ್ನೂ ಮಾಡಿಲ್ಲ. ಹಿರಿಯ ಸಚಿವರನ್ನು ಕೈ ಬಿಡಬೇಕು ಎಂಬ ಯಾವ ಸೂಚನೆಯೂ ಇಲ್ಲ. ಅಚ್ಚರಿಯ ವ್ಯಕ್ತಿಗಳ ಆಯ್ಕೆ ಅಂದರೆ ಯಾರನ್ನೇ ಮಾಡಿದ್ರೂ ಕೂಡ ಎಂಎಲ್ಎ, ಎಂಎಲ್ಸಿಗಳನ್ನೇ ಮಂತ್ರಿ ಮಾಡಬೇಕು ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಮಾತನಾಡಿರುವ ಈಶ್ವರಪ್ಪ ಅವರು, ಮರಾಠಾ ಸಮುದಾಯ ಅಭಿವೃದ್ದಿ ನಿಗಮ ಮಾಡಿದ್ದೇವೆ ಹೊರತು ಭಾಷೆಯ ಆದಾರದ ಮೇಲೆ ಅಲ್ಲ. ಕುರುಬ ಸಮುದಾಯ ಅಭಿವೃದ್ದಿ ನಿಗಮಕ್ಕೆ ನಾನು ಒತ್ತಾಯಿಸುವುದಿಲ್ಲ. ಆದರೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.
ರಾಜ್ಯದಲ್ಲಿ ಇನ್ನೂ ಕೋವಿಡ್ ಹರಡುತ್ತಲೇ ಇದೆ. ಹಾಗಾಗಿ ಸಧ್ಯಕ್ಕೆ ಗ್ರಾಮಪಂಚಾಯ್ತಿ ಚುನಾವಣೆ ಬೇಡ ಅನ್ನೋದು ಎಲ್ಲ ರಾಜಕೀಯ ಪಕ್ಷಗಳ ಒತ್ತಾಯವಾಗಿದೆ. ಅದನ್ನೇ ಚುನಾವಣಾ ಆಯೋಗಕ್ಕೂ ಮನವಿ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.