ಕುಮಾರಸ್ವಾಮಿ ಸಂಪುಟ ಸೇರುವ ಶಾಸಕರ ಹೆಸರು ಇನ್ನೂ ನಿಗೂಢ!
Recommended Video
ಬೆಂಗಳೂರು, ಜೂನ್ 13 : ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಗೊಂದಲಕ್ಕೆ ಕಾರಣವಾಗಿದೆ. ಶುಕ್ರವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಸಂಪುಟ ಸೇರುವ ಶಾಸಕರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ 3 ಸಚಿವ ಸ್ಥಾನಗಳು ಖಾಲಿ ಇವೆ. ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಕಾಂಗ್ರೆಸ್-ಜೆಡಿಎಸ್ ತೀರ್ಮಾನ ಕೈಗೊಂಡಿವೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಂಪುಟ ವಿಸ್ತರಣೆ ನಡೆಯಲಿದೆ.
ಜೆಡಿಎಸ್ ಕೋಟಾದಲ್ಲಿ 2, ಕಾಂಗ್ರೆಸ್ ಕೋಟಾದಲ್ಲಿ 1 ಸಚಿವ ಸ್ಥಾನ ಖಾಲಿ ಇತ್ತು. ಮೈತ್ರಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿರುವ ಇಬ್ಬರು ಪಕ್ಷೇತರ ಶಾಸಕರು ಸಂಪುಟ ಸೇರುವುದು ಖಚಿತವಾಗಿದೆ. ಆದರೆ, ಇನ್ನೊಬ್ಬರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಗುರುವಾರ ಮಧ್ಯಾಹ್ನದ ವರೆಗೂ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಲ್ಲ. ಕಾಂಗ್ರೆಸ್ನಿಂದ ಯಾವುದೇ ಶಾಸಕರು ಸಂಪುಟಕ್ಕೆ ಸೇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಕಾಂಗ್ರೆಸ್ನಲ್ಲಿ ಅಸಮಾಧಾನ ಹೆಚ್ಚಾಗುವ ನಿರೀಕ್ಷೆ ಇದೆ.....

ಪಕ್ಷೇತರರು ಸೇರುವುದು ಖಚಿತ?
ಮೈತ್ರಿ ಸರ್ಕಾರ ರಚನೆಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರಾದ ಎಚ್.ನಾಗೇಶ್ (ಮುಳಬಾಗಿಲು), ಆರ್.ಶಂಕರ್ (ರಾಣೆಬೆನ್ನೂರು) ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಸಂಪುಟ ಸೇರುವ ಮತ್ತೊಬ್ಬ ಶಾಸಕರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

ಜೆಡಿಎಸ್ ಕೋಟಾದಿಂದ ಒಬ್ಬರು ಸೇರ್ಪಡೆ
ಜೆಡಿಎಸ್ ಕೋಟಾದಲ್ಲಿ ಎರಡು ಸಚಿವ ಸ್ಥಾನ ಖಾಲಿ ಇದೆ. ಒಂದು ಸ್ಥಾನವನ್ನು ಪಕ್ಷೇತರ ಶಾಸಕರಿಗೆ ಪಕ್ಷ ಬಿಟ್ಟುಕೊಟ್ಟಿದೆ. ಮತ್ತೊಂದು ಸ್ಥಾನಕ್ಕೆ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕೋಟಾದಲ್ಲಿ ಖಾಲಿ ಇರುವ ಒಂದು ಸ್ಥಾನ ಮತ್ತೊಬ್ಬ ಪಕ್ಷೇತರ ಶಾಸಕರ ಪಾಲಾಗಿದೆ.

ಎಚ್.ವಿಶ್ವನಾಥ್ ಸಂಪುಟಕ್ಕೆ?
ಜೆಡಿಎಸ್ ಕೋಟಾದಿಂದ ಕುರುಬ ಸಮಯದಾಯಕ್ಕೆ ಸೇರಿದ ಎಚ್.ವಿಶ್ವನಾಥ್ ಅವರು ಸಂಪುಟ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ನೀಡುವ ಸಾಧ್ಯತೆ ಇದೆ.

ಬಿ.ಎಂ.ಫಾರೂಖ್ ಹೆಸರು?
ಜೆಡಿಎಸ್ ತನ್ನ ಕೋಟಾದಲ್ಲಿ ಅಲ್ಪ ಸಂಖ್ಯಾತ ನಾಯಕರಿಗೆ ಅವಕಾಶ ನೀಡಿಲ್ಲ. ಆದ್ದರಿಂದ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಅಧಿಕೃತವಾಗಿ ಪಕ್ಷದ ಯಾವ ನಾಯಕರು ಈ ಕುರಿತು ಹೇಳಿಕೆ ನೀಡಿಲ್ಲ.

ಅತೃಪ್ತ ಶಾಸಕ ನಡೆ ಏನು?
ಕಾಂಗ್ರೆಸ್ ಕೋಟಾದಲ್ಲಿ 1 ಸಚಿವ ಸ್ಥಾನ ಖಾಲಿ ಇದೆ. ಅದನ್ನು ಪಕ್ಷೇತರ ಶಾಸಕರಿಗೆ ಬಿಟ್ಟುಕೊಡಲು ಪಕ್ಷ ಮುಂದಾಗಿದೆ. ಇದರಿಂದಾಗಿ ಸಂಪುಟ ಸೇರುವ ಆಕಾಂಕ್ಷಿಗಳಾದ 10 ಕ್ಕೂ ಹೆಚ್ಚು ಶಾಸಕರಿಗೆ ನಿರಾಸೆಯಾಗಲಿದೆ. ಅವರ ಮಂದಿನ ನಡೆ ಏನು? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications