ಸಂಪುಟ ವಿಸ್ತರಣೆ : ಜೆಡಿಎಸ್ನಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ
ಬೆಂಗಳೂರು, ಅಕ್ಟೋಬರ್ 13 : ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಒಂದು ಸ್ಥಾನ ತೆರವಾಗಿದೆ. ಜೆಡಿಎಸ್ ಶಾಸಕರು ಈ ಸ್ಥಾನವನ್ನು ಪಡೆಯಲು ಲಾಬಿ ಆರಂಭಿಸಿದ್ದಾರೆ.
ಅಕ್ಟೋಬರ್ 10ರೊಳಗೆ ಸಂಪುಟ ವಿಸ್ತರಣೆ ನಡೆಯಬೇಕಿತ್ತು. 3 ಲೋಕಸಭೆ, 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. ಈಗ ಎನ್.ಮಹೇಶ್ ರಾಜೀನಾಮೆಯಿಂದಾಗಿ ಮತ್ತೊಂದು ಸ್ಥಾನ ತೆರವಾಗಿದೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸದ್ಯ 8 ಸಚಿವ ಸ್ಥಾನಗಳ ಖಾಲಿ ಇವೆ. ಇವುಗಳಲ್ಲಿ 6 ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಮೀಸಲು, ಉಳಿದ ಎರಡು ಸ್ಥಾನಗಳು ಜೆಡಿಎಸ್ಗೆ ಸಿಗಲಿವೆ. ಇದಕ್ಕಾಗಿ 5ಕ್ಕೂ ಹೆಚ್ಚು ಶಾಸಕರು ಲಾಬಿ ಆರಂಭಿಸಿದ್ದಾರೆ.
ನವೆಂಬರ್ 3ರಂದು 5 ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷದಲ್ಲಿಯೂ 6 ಸ್ಥಾನಗಳಿಗೆ ಡಜನ್ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ....

ಬಸವರಾಜ ಹೊರಟ್ಟಿ
ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಹೊರಟ್ಟಿ ಅವರಿಗೆ ಶಿಕ್ಷಣ ಖಾತೆ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರನ್ನು ಪರಿಷತ್ ಸಭಾಪತಿಯನ್ನಾಗಿ ಮಾಡಲಾಯಿತು. ಆದ್ದರಿಂದ, ಸಂಪುಟಕ್ಕೆ ಸೇರಿಸಿಕೊಂಡಿಲ್ಲ.

ಕೆ.ಗೋಪಾಲಯ್ಯ
ಬೆಂಗಳೂರು ನಗರ ಕೋಟಾದಲ್ಲಿ ಸಚಿವ ಸ್ಥಾನ ನೀಡಬೇಕು ಎಂಬುದು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರು ಎರಡು ಬಾರಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಖಾಲಿ ಇರುವ ಸಚಿವ ಸ್ಥಾನ ಪಡೆಯಲು ಅವರು ಲಾಬಿ ನಡೆಸುತ್ತಿದ್ದಾರೆ.

ಡಾ.ಕೆ.ಅನ್ನದಾನಿ
ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಅವರು ಸಚಿವ ಸ್ಥಾನದ ಆಕಾಂಕ್ಷಿ. 2004ರ ಚುನಾವಣೆಯಲ್ಲಿ ಗೆದ್ದಿದ್ದ ಅವರು ಸತತ ಎರಡು ಸೋಲುಗಳ ಬಳಿಕ ಈ ಬಾರಿ ಗೆದ್ದು ಬಂದಿದ್ದಾರೆ. ಆದರೆ, ಮಂಡ್ಯ ಜಿಲ್ಲೆಯ ಸಿ.ಎಸ್.ಪುಟ್ಟರಾಜು (ಮೇಲುಕೋಟೆ), ಡಿ.ಸಿ.ತಮ್ಮಣ್ಣ (ಮದ್ದೂರು) ಈಗಾಗಲೇ ಸಚಿವರು. ಆದ್ದರಿಂದ, ಅನ್ನದಾನಿ ಅವರಿಗೆ ಅವಕಾಶ ಸಿಗಲಿದೆಯೇ? ಕಾದು ನೋಡಬೇಕು.

ಎಚ್.ಕೆ.ಕುಮಾರಸ್ವಾಮಿ
ಸಕಲೇಶಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿ. ಸರ್ಕಾರ ರಚನೆಯಾದಾಗಲೇ ಕುಮಾರಸ್ವಾಮಿ ಅವರು ಸಂಪುಟ ಸೇರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಜಿಲ್ಲೆಯಿಂದ ಎಚ್.ಡಿ.ರೇವಣ್ಣ (ಹೊಳೆನರಸೀಪುರ) ಅವರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಬಿ.ಎಂ.ಫಾರೂಕ್
ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅಲ್ಪ ಸಂಖ್ಯಾತ ಕೋಟಾದಡಿ ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಆಪ್ತ ವಲಯದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಈಗ ಅವರು ಸಂಪುಟ ಸೇರಬಹುದು ಎಂಬ ನಿರೀಕ್ಷೆ ಇದೆ.












Click it and Unblock the Notifications