ಸಂತೋಷ್, ಜೋಶಿ ಮುಖ ತೋರಿಸಿದರೂ ಮತ ಬರುವುದಿಲ್ಲ!
ಬಿಜೆಪಿಯಲ್ಲಿನ ಯಾವ ಮುಖಕ್ಕೂ ಜನರಲ್ಲಿ ಭರವಸೆ ಹುಟ್ಟಿಸುವ ಯೋಗ್ಯತೆ ಇಲ್ಲ ಎಂಬುದು ವಿಜಯೇಂದ್ರರ ಮಾತಿನ ಸಾರಾಂಶ ಅಲ್ಲವೇ? ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬೆಂಗಳೂರು, ಮಾರ್ಚ್ 16; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಡೆಗಣನೆ, ವಸತಿ ಸಚಿವ ವಿ. ಸೋಮಣ್ಣ ವಿಚಾರ, ಬಿ. ವೈ. ವಿಜಯೇಂದ್ರ ಹೇಳಿಕೆ ಹೀಗೆ ಕರ್ನಾಟಕ ಬಿಜೆಪಿಯ ಸಾಲು ಸಾಲು ವಿಚಾರ ಪ್ರತಿಪಕ್ಷ ಕಾಂಗ್ರೆಸ್ ಟ್ವೀಟ್ಗೆ ಆಹಾರವಾಗಿದೆ. ಬಿಜೆಪಿ 'ಸಂತೋಷ ಕೂಟ'ದ ಬಗ್ಗೆ ಸದಾ ಟ್ವೀಟ್ ಮಾಡುವ ಕಾಂಗ್ರೆಸ್ ಸದಸ್ಯ ಮತ್ತೆ ಬಿ. ಎಲ್. ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪ ಮಾಡಿದೆ.
ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, 'ಬಿಜೆಪಿಯಲ್ಲಿನ ಯಾವ ಮುಖಕ್ಕೂ ಜನರಲ್ಲಿ ಭರವಸೆ ಹುಟ್ಟಿಸುವ ಯೋಗ್ಯತೆ ಇಲ್ಲ ಎಂಬುದು ವಿಜಯೇಂದ್ರರ ಮಾತಿನ ಸಾರಾಂಶ ಅಲ್ಲವೇ? ಕರ್ನಾಟಕ ಬಿಜೆಪಿ' ಎಂದು ಕುಟುಕಿದೆ. ಮೋದಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ, ಸಿಎಂ ಕ್ಯಾಂಡಿಡೇಟ್ ಎಂದು ಬಿಂಬಿಸಿಕೊಳ್ಳುತ್ತಿರುವ ಸಂತೋಷ್, ಜೋಶಿ ಮುಖ ತೋರಿದರೂ ಮತ ಬರುವುದಿಲ್ಲ' ಎಂದು ಹೇಳಿದೆ.

'ಬಿಜೆಪಿಯ ಕಲಹ ಸಂಕಲ್ಪ ಯಾತ್ರೆ ಜೋರಾಗಿ ನಡೆಯುತ್ತಿದೆ. ಬಿಜೆಪಿ ಈಗ ಸಂತೋಷ ಕೂಟದ ಹಿಡಿತದಲ್ಲಿದೆ, ಬಿಜೆಪಿಗೆ BSY ನಗಣ್ಯ ಎಂಬ ಸಂದೇಶ ಕೊಟ್ಟ ಸಿ. ಟಿ. ರವಿಗೆ ಮಾತಿನ ಗುದ್ದು ಕೊಟ್ಟ ಬಿ. ವೈ. ವಿಜಯೇಂದ್ರ!. ಬಿಜೆಪಿ ಎಂಬ ಕಲಹದ ಮನೆಯಲ್ಲಿ ಯಾರು ಯಾರಿಗೆ ಶತ್ರುಗಳು ಎಂದು ಸ್ವತಃ ಬಿಜೆಪಿ ಕರ್ನಾಟಕ ಗೇ ತಿಳಿಯದೆ ಗೊಂದಲದಲ್ಲಿದೆ!' ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ವ್ಯಂಗ್ಯವಾಡಿದೆ.

'BSY ಅವರಿಗೆ ಅಧಿಕಾರವಿಲ್ಲ, ಟಿಕೆಟ್ ಕೂಡ ಇಲ್ಲ. BSYರಿಗೆ ಟಿಕೆಟ್ ನಿರ್ಧರಿಸುವ ಹಕ್ಕಿಲ್ಲ. BSYರಿಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ. BSYರಿಗೆ ವೇದಿಕೆಗಳಲ್ಲಿ ಜಾಗವಿಲ್ಲ BSY ಅವರ ರಾಜ್ಯ ಪ್ರವಾಸಕ್ಕೆ ಅವಕಾಶ ಕೊಡಲಿಲ್ಲ, BSY ಬಿಜೆಪಿಗೆ ಅನಿವಾರ್ಯವಲ್ಲ - ಕಟೀಲ್ ಈ ಘಟನೆಗಳೇ ಈ ಹೇಳಿಕೆಗೆ ಸ್ಪೂರ್ತಿಯೇ ಬಿಜೆಪಿ ಕರ್ನಾಟಕ ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಪ್ರಶ್ನೆ ಮಾಡಿದೆ.
ಬಿ. ವೈ. ವಿಜಯೇಂದ್ರ ಹೇಳಿದ್ದೇನು?; ಕರ್ನಾಟಕ ಬಿಜೆಪಿ ಉಪಾಧ್ಯಕ್ಷ, ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಹಾವೇರಿಯಲ್ಲಿ ಮಾತನಾಡಿದ್ದರು, "ಬಿ. ಎಸ್. ಯಡಿಯೂರಪ್ಪ ಇಂದು ಮೌನವಾಗಿದ್ದಾರೆ ಅಂದರೆ, ಅದನ್ನು ಯಾರಾದರೂ ದೌರ್ಬಲ್ಯ ಎಂದು ಭಾವಿಸಿದರೆ ಪಶ್ಚಾತಾಪ ಪಡೆಬೇಕಾಗುತ್ತದೆ. ಯಡಿಯೂರಪ್ಪರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ಇರಬೇಕು. ಇಂದು ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿಲ್ಲ. ಯಾವುದೇ ದೊಡ್ಡ ಸ್ಥಾನಮಾನದಲ್ಲಿ ಇಲ್ಲದಿದ್ದರೂ ಕೂಡಾ ಆರೂವರೆ ಕೋಟಿ ಕನ್ನಡಿಗರು ತಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ" ಎಂದು ಹೇಳಿದ್ದರು.
"ಕುಟುಂಬವನ್ನು ಬೆಳೆಸಬೇಕು ಎಂದು ಯಡಿಯೂರಪ್ಪ ಎಂದೂ ರಾಜಕಾರಣ ಮಾಡಿಲ್ಲ. ನಾಳೆ ಮತ್ತೆ ಮುಖ್ಯಮಂತ್ರಿ ಆಗಬೇಕು, ಮಗನನ್ನು ಮಂತ್ರಿ ಮಾಡಬೇಕು ಎಂಬ ಕನಸು ಇಟ್ಟುಕೊಂಡಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು, ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ, ಸಾಮಾಜಿಕ ನ್ಯಾಯದಡಿ ಆಡಳಿತ ನಡೆಸಿದರು. ಎಲ್ಲಾ ಸಮಾಜಗಳ ಕಣ್ಣೀರನ್ನು ಒರೆಸುವ ಕೆಲಸವನ್ನು ಯಡಿಯೂರಪ್ಪ ಮಾಡಲಿಲ್ಲವೇ?. ಯಡಿಯೂರಪ್ಪನವರಿಗೆ 81 ವರ್ಷ ಆಗಿದ್ದು, ವಯಸ್ಸಾಗಿದೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂಬ ಎದೆಗಾರಿಕೆ ಬೇರೆ ಯಾರಿಗಾದರೂ ಇದೆಯಾ?" ಎಂದು ವಿಜಯೇಂದ್ರ ಪ್ರಶ್ನಿಸಿದ್ದರು.












Click it and Unblock the Notifications