B.Y.Vijayendra: ಈ ಕಾರಣಕ್ಕೆ ವಿಜಯೇಂದ್ರ ಕೈ ತಪ್ಪಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಜೋರಾಗಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಾನೇ ಮುಂದಿನ ರಾಜ್ಯಾಧ್ಯಕ್ಷ ಎನ್ನುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ ಎಂದು ತೊಡೆತಟ್ಟಿದ್ದಾರೆ. ಆದರೆ, ಒಂದು ವೇಳೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಅದಕ್ಕೆ ಹಲವು ಬಲವಾದ ಕಾರಣಗಳು ಕೂಡ ಇವೆ ಎಂದು ಹೇಳಲಾಗುತ್ತಿದೆ.
ಹೌದು, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ನಂತರವೇ ಬಿಜೆಪಿ ಮನೆಯಲ್ಲಿ ಒಡಕು ಮೂಡಿತು ಎನ್ನುವ ಮಾತಿದೆ. ಇದಕ್ಕೆ ಕಾರಣ ವಿಜಯೇಂದ್ರ ಅವರೇ ಎಂಬ ವಾದ ಹಲವರದ್ದು. ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಬಿಜೆಪಿ ಒಗ್ಗಟ್ಟಿನ ಮನೆಯಾಗಿತ್ತು. ಆದರೆ, ಬಿಎಸ್ವೈ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಪಕ್ಷದಲ್ಲೇ ಇದ್ದ ಹಲವರು ಪ್ರಮುಖ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ, ಯಡಿಯೂರಪ್ಪ ಅವರು ಪುತ್ರನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಅವಿರತ ಶ್ರಮಪಟ್ಟಿದ್ದರು.

ಈ ಪ್ರಯತ್ನ ಗೆದ್ದಿದ್ದ ಅವರು ಹೈಕಮಾಂಡ್ ಮನವೊಲಿಸಿ, ಪುತ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದರು. ಹೈಕಮಾಂಡ್ ಕೂಡ ಬಿಎಸ್ ಯಡಿಯೂರಪ್ಪ ಅವರಂತೆ ಪುತ್ರ ವಿಜಯೇಂದ್ರ ಕೂಡ ಪಕ್ಷವನ್ನು ಬಲಗೊಳಿಸುತ್ತಾರೆ ಎನ್ನುವ ವಿಶ್ವಾಸದಲ್ಲೇ ಇತ್ತು. ಆದರೆ ಮತ್ತೊಂದೆಡೆ ಇದೇ ವಿಚಾರಕ್ಕೆ ಬಿಜೆಪಿ ಮನೆಯಲ್ಲಿ ಒಡಕು ಮೂಡಲು ಶುರುವಾಯಿತು ಎನ್ನುತ್ತದೆ ಪಕ್ಷದ ಮೂಲಗಳು.
ವಿಜಯೇಂದ್ರ ಅವರನ್ನು ಏಕಾಏಕಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದ ಉಳಿದ ನಾಯಕರ ಪೈಕಿ ಹಲವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ ಎನ್ನುವ ಮಾತಿದೆ. ಆದರೂ ಕೆಲವರು ವಿಧಿಯಿಲ್ಲದೆ ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದರಂತೆ. ಇನ್ನು ಇತ್ತೀಚೆಗೆ ವಿಜಯೇಂದ್ರ ಅವರ ಬಗ್ಗೆ ಸ್ವಪಕ್ಷ ನಾಯಕರಿಂದಲೇ ಬಹಿರಂಗವಾಗಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಅವರು ಅಷ್ಟೊಂದು ಸಮರ್ಥನೀಯ ನಡೆ ತೋರಿಲ್ಲ ಎಂದೇ ಹೇಳಲು ಶುರು ಮಾಡಿದ್ದಾರೆ.

ವಿಜಯೇಂದ್ರ ಅವರ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಬಣ ರಾಜಕೀಯ ದೊಡ್ಡಮಟ್ಟದಲ್ಲಿ ಬೇರೂರಿದೆ ಎನ್ನುವ ದೂರು ಕೂಡ ಇದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ವಿಚಾರದ ಬಗ್ಗೆ ಹಲವು ವೇದಿಕೆಗಳಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಅಲ್ಲದೆ, ವಿಜಯೇಂದ್ರ ಬಿಟ್ಟು ಬೇರೆ ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಅದಕ್ಕೆ ನಮ್ಮ ಸಮ್ಮತಿ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ನಂತರ ಎಲ್ಲರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಇತ್ತೀಚೆಗೆ ಡಿ.ವಿ.ಸದಾನಂದ ಗೌಡರು ಕೂಡ ಹೇಳಿದ್ದಾರೆ. ಪಕ್ಷದಲ್ಲಿರುವ ಅಸಮಾಧಾನಿತರನ್ನು ಕರೆದು ಮಾತನಾಡುವ ಕೆಲಸವನ್ನು ಅವರು ಮಾಡಲಿಲ್ಲ. ಇದರಿಂದ ಗುಂಪುಗಾರಿಕೆ ಹೆಚ್ಚಾಗಿದೆ ಎಂದೇ ದೂರಿದ್ದಾರೆ.

ಅಧ್ಯಕ್ಷ ಸ್ಥಾನದಲ್ಲಿ ಇರುವವರು ಪಕ್ಷದ ಆಂತರಿಕ ಜಗಳ, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಹೈಕಮಾಂಡ್ ಗಮನಕ್ಕಾದರೂ ತರಬೇಕಿತ್ತು. ಆದರೆ, ವಿಜಯೇಂದ್ರ ಅವರು ಇಂತಹ ಯಾವ ಕೆಲಸಗಳನ್ನೂ ಮಾಡಲಿಲ್ಲ, ಆಂತರಿಕ ಕಲಹದಿಂದಲೇ ಪಕ್ಷ ದುರ್ಬಲಗೊಳ್ಳುತ್ತಿದೆ ಎಂದು ನೇರವಾಗಿ ಹೇಳಿದ್ದಾರೆ. ನಾಯಕರ ಭಿನ್ನಮತ ಶಮನ ಮಾಡುವ ಸಂಬಂಧ ಸಭೆಗಳಲ್ಲೂ ಅವರು ಚತುರತೆ ತೋರಲಿಲ್ಲ. ಸದ್ಯ ವಿಜಯೇಂದ್ರ ಅವರು ತಾತ್ಕಾಲಿಕ ಅಧ್ಯಕ್ಷರಾಗಿದ್ದು, ಚುನಾವಣೆ ಮೂಲಕ ಪೂರ್ಣಾವಧಿ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದಿದ್ದಾರೆ.
ಅಲ್ಲದೆ ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಸಾಕಷ್ಟಿದೆ ಎಂದು ದೂರು ಬಿಜೆಪಿ ನಾಯಕರ ಬಾಯಲ್ಲೇ ಬಂದಿದೆ. ಹಲವರು ಇದೇ ಕಾರಣವನ್ನು ವಿಜಯೇಂದ್ರ ವಿಚಾರದಲ್ಲಿ ಪ್ರಸ್ತಾಪಿಸುತ್ತಿದ್ದು, ಏಕಾಏಕಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದ ಬಗ್ಗೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಈ ಎಲ್ಲ ಕಾರಣಗಳಿಂದ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಬಿಜೆಪಿಯಲ್ಲೇ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications