ಪುನೀತ್ ಕೆರೆಹಳ್ಳಿ ಪ್ರಕರಣ: ಪೊಲೀಸರ ಕ್ರೌರ್ಯ, ಅಟ್ಟಹಾಸ ವಿರುದ್ಧ ವಿಜಯೇಂದ್ರ ಕಿಡಿ
ಬೆಂಗಳೂರು, ಜುಲೈ 31: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಕುರಿ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ರಾಜಸ್ಥಾನದಿಂದ ಬಂದ ಮಟನ್ ಮಾಂಸದ ಬಾಕ್ಸ್ಗಳನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆ ಹಿಡಿದಿದ್ದು ಈ ವೇಳೆ ನಡೆದ ಸಂಘರ್ಷದಲ್ಲಿ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಅವರನ್ನ ಪೊಲೀಸರು ಬಂಧಿಸಲಾಗಿತ್ತು.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಿ.ವೈ ವಿಜಯೇಂದ್ರ, ಹಿಂದೂ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದ್ವೇಷಿಸುವುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪರಮ ಉದ್ದೇಶವಿದ್ದಂತಿದೆ.

ಹಿಂದೂಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ನಿರಂತರ ಕ್ರೌರ್ಯ ಮೆರೆಯುತ್ತಾ ಬಂದಿರುವ ಈ ಸರ್ಕಾರ ರಾಜಸ್ಥಾನದಿಂದ ಬೆಂಗಳೂರಿಗೆ ಬರುತ್ತಿದ್ದ ಟನ್ ಗಟ್ಟಲೆ ಅಕ್ರಮ ಮಾಂಸ ರಫ್ತಿನ ಮಾಫಿಯಾ ಚಟುವಟಿಕೆಯ ಮೇಲೆ ಬೆಳಕು ಚೆಲ್ಲಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರೀಕವಾಗಿ ನಡೆದುಕೊಂಡಿರುವ ಪೊಲೀಸರ ದೌರ್ಜನ್ಯವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ.
ಜನಜಾಗೃತಿ ಹಾಗೂ ನಾಗರೀಕ ಪ್ರಜ್ಞೆ ಮೆರೆದು ಜನರ ಆರೋಗ್ಯದ ಕಾಳಜಿ ವಹಿಸಿ ಕುರಿ ಮಾಂಸದ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಬೆಂಗಳೂರಿಗೆ ಸಾಗಿ ಬರುತ್ತಿದ್ದ ಶಂಕಿತ ಮಾಂಸದ ಕುರಿತು ಪ್ರಶ್ನೆ ಮಾಡಿದ್ದು, ಹೋರಾಡಿದ್ದು ತಪ್ಪು ಎಂದು ಪೊಲೀಸರು ಪರಿಗಣಿಸುವುದಾದರೆ, ಇನ್ನು ಮುಂದೆ ಈ ಸರ್ಕಾರದಲ್ಲಿ ಅಕ್ರಮ ಹಾಗೂ ಮಾಫಿಯಾಗಳ ವಿರುದ್ಧ ಹೋರಾಟವನ್ನು ನಡೆಸುವುದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ.
ಜನರ ಆರೋಗ್ಯದ ಕಾಳಜಿಗಾಗಿ ಪ್ರಾಮಾಣಿಕವಾಗಿ ದನಿಯೆತ್ತಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರಿಕವಾಗಿ ವರ್ತಿಸಿರುವ ಪೊಲೀಸರ ನಡವಳಿಕೆ ಬ್ರಿಟಿಷರ ಕಾಲದ ದಮನಕಾರಿ ಧೋರಣೆಯನ್ನು ಪ್ರತಿಬಿಂಬಿಸಿದೆ. ಪೊಲೀಸರ ಕ್ರೌರ್ಯ ಹಾಗೂ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications