ಅಧ್ಯಕ್ಷರಾದ ಬಳಿಕ ಕುಮಾರಸ್ವಾಮಿಯನ್ನು ಭೇಟಿಯಾಗಲೇ ಇಲ್ಲ ವಿಜಯೇಂದ್ರ: ಪ್ರೀತಂ ಗೌಡರ ಬಾಯಿಗೆ ಸ್ವೀಟ್ ಇಟ್ಟ ಬಿಎಸ್ವೈ
ಬೆಂಗಳೂರು, ನವೆಂಬರ್ 15: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಹಲವಾರು ಬಿಜೆಪಿಯ ನಾಯಕರು ಗೈರಾಗಿದ್ದರು.
ಮುಂಬರುವ ಲೋಕಸಭಾ ಚುನಾವಣೆಗೆ ಎನ್ಡಿಎ ಒಕ್ಕೂಟಕ್ಕೆ ಕರ್ನಾಟಕದ ಜೆಡಿಎಸ್ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಕುತೂಹಲ ಕೆರಳಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಅಭ್ಯರ್ಥಿ ನೇಮಕವೂ ಆದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೂತನ ಅಧ್ಯಕ್ಷ ಬಿವೈ ವಿಜಯೇಂದ್ರರಿಗೆ ಶುಭಾಶಯ ತಿಳಿಸಲು ಹೋಗಬಹುದು ಎನ್ನಲಾಗಿತ್ತು. ಆದರೆ ಎಚ್ಡಿಕೆ ಇದು ಪಕ್ಷದ ಕಾರ್ಯಕ್ರಮವಾದ್ದರಿಂದ ಹೋಗಲಿಲ್ಲ.

ಆದರೆ ಹಾಸನದ ಬಿಜೆಪಿ ಶಾಸಕರಾದ ಪ್ರೀತಂ ಗೌಡ ಅವರು ಸದಾ ಜೆಡಿಎಸ್ನ ಕಟು ಟೀಕಾಕಾರರಲ್ಲಿ ಒಬ್ಬರು. ಅವರು ಹಾಸನ ಮಾತ್ರವಲ್ಲ ಹೋದಲೆಲ್ಲಾ ಜೆಡಿಎದ್ದಿಗರ ಮೇಲೆ ಟೀಕೆ ಮಾಡುವುದು ಸಾಮಾನ್ಯವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಪ್ರೀತಂ ಗೌಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಿಹಿ ತಿಂದು ಬಂದಿರುವುದು ಹಲವು ಆಶ್ಚರ್ಯಗಳಿಗೆ ಕಾರಣವಾಗಿದೆ.
ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಘೋಷಣೆಯಾಗುತ್ತಿದ್ದಂತೆ ಅವರು ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು. ಹಾಗೆಯೇ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ತೆಗೆದುಕೊಂಡು ಬಂದಿದ್ದರು. ಆದರೆ ಬೆಂಗಳೂರಿನಲ್ಲೇ ಇದ್ದ ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಎಚ್ಡಿ ಕುಮಾರಸ್ವಾಮಿ ಅವರನ್ನು ವಿಜಯೇಂದ್ರ ಭೇಟಿಯಾಗಿರಲಿಲ್ಲ.
ಇನ್ನು ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತುಕತೆಗೆ ಬಿಎಸ್ ಯಡಿಯೂರಪ್ಪ ಅವರೂ ಸೇರಿದಂತೆ ಹಲವು ನಾಯಕರು ಪೂರ್ಣ ಪ್ರಮಾಣ ಹಸಿರು ನಿಶಾನೆ ತೋರಿಲ್ಲ. ಅವರನ್ನು ಎಲ್ಲವನ್ನು ಹೈಕಮಾಂಡ್ ಮೇಲೆ ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ನ ಕಟುಟೀಕಾಕಾರಲ್ಲಿ ಒಬ್ಬರಾದ ಪ್ರೀತಂ ಗೌಡ ಅವರಿಗೆ ಬಿಎಸ್ ಯಡಿಯೂರಪ್ಪ ಸಿಹಿ ತಿನಿಸುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಂತೆ ಚರ್ಚೆ ಆರಂಭವಾಗಿದೆ.
ಬಿಜೆಪಿ ಜೆಡಿಎಸ್ ಬಗ್ಗೆ ಬುಧವಾರ ಜಂಟಿ ಪತ್ರಿಕಾಗೋಷ್ಠಿ ಕರೆಯಲಾಗುತ್ತದೆ ಎಂದು ಊಹಿಸಲಾಗಿತ್ತು, ಆದರೆ ಆ ಯಾವ ಪ್ರಯತ್ನಗಳು ಆಗದಿರುವುದು ಮೈತ್ರಿ ಬಗ್ಗೆ ಮತ್ತೆ ಅನುಮಾನ ಪ್ರಶ್ನೆಗಳನ್ನು ಎತ್ತಿದೆ. ಈ ಮಧ್ಯೆ ಎಚ್ಡಿ ಕುಮಾರಸ್ವಾಮಿ ಅವರ ಕರೆಂಟ್ ವಿವಾದ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಎಚ್ಡಿಕೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಆಶ್ಚರ್ಯವೆಂಬಂತೆ ಬಿಜೆಪಿ ಯಾವ ನಾಯಕರೂ ಎಚ್ಡಿಕೆ ಅವರ ಈ ಕ್ರಮವನ್ನು ಖಂಡಿಸಿಲ್ಲ.
ಈ ನಿಟ್ಟಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ರಚನೆಯಾಗುವುದೋ ಇಲ್ಲ, ಮುರಿದು ಬೀಳುವುದೋ ಕಾದು ನೋಡಬೇಕಿದೆ. ಬುಧವಾರ ಜೆಡಿಎಸ್ಗೆ ಮತ್ತೊಂದು ಆಘಾತ ಉಂಟಾಗಿದೆ. ಜೆಡಿಎಸ್ನ ಇಬ್ಬರು ಶಾಸಕರಾದ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾತ್ರವಲ್ಲದೆ ಹಲವಾರು ತಳ ಮಟ್ಟದ ನಾಯಕರೂ ಕಾಂಗ್ರೆಸ್ ಸೇರಿರುವುದು ಜೆಡಿಎಸ್ಗೆ ಪ್ರಮುಖ ಹಿನ್ನಡೆಯೇ ಎನ್ನಬಹುದು.












Click it and Unblock the Notifications