ಉಪಚುನಾವಣೆ: ಸಿಎಂ ಬಿಎಸ್ವೈಗೆ ತಂತಿಯ ಮೇಲಿನ ನಡಿಗೆಗೆ 2 ಕಾರಣಗಳು
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದವರನ್ನು ಕಟುವಾದ ಶಬ್ದದಿಂದ ಟೀಕಿಸುತ್ತಿರುವವರು ಯಾರು? ವಿರೋಧ ಪಕ್ಷಗಳು ಮಾಡಬೇಕಾಗಿದ್ದ ಕೆಲಸವನ್ನು ಬಿಜೆಪಿಯವರೇ ಮಾಡುತ್ತಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ರಾಜ್ಯದ ಒಂದು ಲೋಕಸಭಾ ಕ್ಷೇತ್ರ (ಬೆಳಗಾವಿ) ಮತ್ತು ಎರಡು ವಿಧಾನಸಭಾ ಕ್ಷೇತ್ರದ (ಮಸ್ಕಿ, ಬಸವಕಲ್ಯಾಣ) ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಏಪ್ರಿಲ್ ಹದಿನೇಳರಂದು ಚುನಾವಣೆ ನಡೆಯಲಿದ್ದು, ಮೇ ಎರಡನೇ ತಾರೀಕಿಗೆ ಫಲಿತಾಂಶ ಹೊರಬೀಳಲಿದೆ.
ಮುಖ್ಯಮಂತ್ರಿಯಾದ ನಂತರ ಹಲವು ಉಪಚುನಾವಣೆಗಳನ್ನು ಯಡಿಯೂರಪ್ಪ ಗೆದ್ದಿದ್ದರೂ, ಈ ಬಾರಿಯ ಚುನಾವಣೆ ಮಾತ್ರ ಅವರಿಗೆ ತಂತಿಯ ಮೇಲಿನ ನಡಿಗೆ. ಇದಕ್ಕೆ ಕಾರಣ, ಬದಲಾದ ರಾಜಕೀಯ ಸನ್ನಿವೇಶಗಳು.
ಕೋವಿಡ್ ಮತ್ತೆ ಅಬ್ಬರಿಸುತ್ತಿರುವ ಮಧ್ಯೆ ಉಪಚುನಾವಣೆ ಎದುರಾಗುತ್ತಿದೆ. ಕಾಂಗ್ರೆಸ್ ಈಗಾಗಲೇ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದೇ ಬರುವ ಮಾರ್ಚ್ ಇಪ್ಪತ್ತರಂದು ಕೋರ್ ಕಮಿಟಿ ಸಭೆಯ ನಂತರ ವರಿಷ್ಠರಿಗೆ ರಾಜ್ಯ ಬಿಜೆಪಿ ಮುಖಂಡರು ಅಭ್ಯರ್ಥಿಗಳ ಶಿಫಾರಸು ಪಟ್ಟಿಯನ್ನು ಕಳುಹಿಸಲಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತಿರುವುದು ಸ್ವಯಂಕೃತ ತಪ್ಪಿನಿಂದ..

ಮುಖ್ಯಮಂತ್ರಿಗಳಿಗೆ ದುಃಸ್ವಪ್ನದಂತೆ ಕಾಡುತ್ತಿರುವ ಯತ್ನಾಳ್
ರಾಜ್ಯ ಬಿಜೆಪಿಗೆ, ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿಗಳಿಗೆ ದುಃಸ್ವಪ್ನದಂತೆ ಕಾಡುತ್ತಿರುವುದು ಸ್ವಪಕ್ಷೀಯರೇ ಆದ, ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಸದನದ ಹೊರಗೆ ಮತ್ತು ಒಳಗೆ ಪಕ್ಷಕ್ಕೆ ತೀವ್ರ ಮುಜುಗರ ತಂದೊಡ್ದುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗುತ್ತಿದೆ. ಪಂಚ ರಾಜ್ಯಗಳ ಚುನಾವಣೆ ಮತ್ತು ಉಪಚುನಾವಣೆಯ ಈ ವೇಳೆ ಶಿಸ್ತಿನಿಂದ ಇರಬೇಕು ಎನ್ನುವ ಎಚ್ಚರಿಕೆಗೆ ಯತ್ನಾಳ್ ತಲೆಕೆಡಿಸಿಕೊಳ್ಳುತ್ತಿಲ್ಲ.

ಮೊದಲು ಮೀಸಲಾತಿ ವಿಚಾರದಲ್ಲಿ ನಂತರ ಅನುದಾನದ ವಿಚಾರದಲ್ಲಿ
ಮೊದಲು ಮೀಸಲಾತಿ ವಿಚಾರದಲ್ಲಿ ನಂತರ ಅನುದಾನದ ವಿಚಾರದಲ್ಲಿ ಸರಕಾರವನ್ನು ಬೆಂಬಿಡದೇ ಕಾಡುತ್ತಿರುವ ಯತ್ನಾಳ್ ನಡೆ ಹಲವು ಅನುಮಾನಕ್ಕೆ ಕಾರಣವಾಗುತ್ತಿರುವುದಂತೂ ಹೌದು. ವರಿಷ್ಠರು ಅವರಿಗೆ ಎಚ್ಚರಿಕೆ/ನೊಟೀಸ್ ನೀಡಿದ್ದರೂ ಯತ್ನಾಳ್ ಸರಿದಾರಿಗೆ ಬರುತ್ತಿಲ್ಲ. ಜೊತೆಗೆ, ಸಿಡಿಯ ವಿಚಾರದಲ್ಲೂ ಯತ್ನಾಳ್ ನೀಡುತ್ತಿರುವ ಹೇಳಿಕೆಗಳು ಉಪಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯಿಲ್ಲದಿಲ್ಲ.

ಸದ್ದು ಮಾಡುತ್ತಿರುವ ಅಶ್ಲೀಲ ಸಿಡಿ ಪ್ರಕರಣ
ಇನ್ನೊಂದು, ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ರಮೇಶ್ ಜಾರಕಿಹೊಳಿಯವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ಸಿಡಿ ಪ್ರಕರಣ. ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಒಬ್ಬರೊನ್ನೊಬ್ಬರನ್ನು ದೂಷಿಸಿಕೊಳ್ಳುತ್ತಿವೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾವಿಸಲು ಕಾಂಗ್ರೆಸ್ ನಿರ್ಧರಿಸಿರುವುದು ಲೇಟೆಸ್ಟ್ ಬೆಳವಣಿಗೆ.
Recommended Video

ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ
ಹೀಗಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಪಕ್ಷ/ಸಿಎಂ ವಿರೋಧಿ ನಿಲುವು ಮತ್ತು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಮುಂಬರುವ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಬಹುದು. ಈ ಸಮಯದಲ್ಲಿ ಯತ್ನಾಳ್ ಅವರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಂಡರೆ, ಅವರು ಇನ್ನಷ್ಟು ಸಿಡಿಯಬಹುದು. ಹಾಗಾಗಿ, ಈ ಬಾರಿಯ ಉಪಚುನಾವಣೆ, ಯಡಿಯೂರಪ್ಪ ಮತ್ತು ಬಿಜೆಪಿಯವರಿಗೆ ಎಣಿಸಿದಷ್ಟು ಸುಲಭವಾಗಿಲ್ಲ ಎನ್ನುವುದು ವಾಸ್ತವತೆ.











Click it and Unblock the Notifications