'ಟೊಪ್ಪಿ ಧರಿಸಲು ಯಾರಿಗೆ ಹುಟ್ಟಿರಬೇಕು'? ಸಿ.ಟಿ. ರವಿ ಟ್ವೀಟ್
ಬೆಂಗಳೂರು: ಉಪಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ ಬಿಜೆಪಿಯ ಸಿ.ಟಿ. ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ.
ಪಕ್ಷ ನಿಂದನೆ, ವೈಯಕ್ತಿಕ ನಿಂದನೆ, ನಾ ಮೇಲು- ತಾ ಮೇಲು ಎಂದು ಮಾತನಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ "ಯಾರಿಗೆ ಹುಟ್ಟಿರಬೇಕು" ಎಂಬಂತಹ ಕೀಳು ಪದಗಳನ್ನು ಬಳಸುವ ಮೂಲಕ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದ್ದಾರೆ.
ಬೊಮ್ಮಾಯಿ- ಸಿದ್ದರಾಮಯ್ಯ- ಕುಮಾರಸ್ವಾಮಿ ನಡುವೆ 'ಕುರಿ - ಕಂಬಳಿ ಫೈಟ್' ಜೋರು!
ಉಪಚುನಾವಣಾ ಸಮಯದಲ್ಲಿ ಕಂಬಳಿಯ ವಿಷಯದಲ್ಲಿ ಭಾರಿ ಫೈಟ್ ನಡೆದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಮಧ್ಯೆ ಕುರಿ ಕಂಬಳಿ ಜಗಳ ಜೋರಾಗಿ ನಡೆಯುತ್ತಿದೆ.
ಈ ಮಧ್ಯೆ ಟ್ವೀಟ್ ಮಾಡಿರುವ ಸಿ.ಟಿ. ರವಿ, "ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕು ಎಂಬ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ?'' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಟೊಪ್ಪಿ ಧರಿಸಿ, ಪುಸ್ತಕ ಓದುತ್ತಾ ಕುಳಿತಿರುವ ಫೋಟೋವೊಂದನ್ನು ಟ್ಯಾಗ್ ಮಾಡಿದ್ದಾರೆ.
ಸಿ.ಟಿ. ರವಿ ಮತ್ತೊಂದು ಟ್ವೀಟ್ನಲ್ಲಿ "ಕುಲಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಬಲ್ಲಿರಾ..
ದಾಸ ಶ್ರೇಷ್ಟ ಕನಕದಾಸರ ಈ ಮಾತುಗಳನ್ನು ಎಂದೋ ಮರೆತುಬಿಟ್ಟು ಕುಲಗಳನ್ನು ಒಡೆದು, ಸಮಾಜವನ್ನು ಅಸ್ಥಿರಗೊಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ರಾಜಕೀಯ ಎಂದು ಭಾವಿಸಿದ್ದು ದುರಂತ''.