ಉಪ ಚುನಾವಣೆ ಫಲಿತಾಂಶ : ಸತ್ಯವಾಯಿತು ಗುಪ್ತಚರ ಇಲಾಖೆ ವರದಿ!
Recommended Video
ಬೆಂಗಳೂರು, ನವೆಂಬರ್ 06 : 5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 4 ಸ್ಥಾನಗಳನ್ನು ಗೆದ್ದು ಬೀಗಿದೆ. ಬಿಜೆಪಿ ಶಿವಮೊಗ್ಗವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಂಗಳವಾರ ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿತು. ಬಳ್ಳಾರಿ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದ್ದು, ಜಿಲ್ಲೆ ಪುನಃ ಕಾಂಗ್ರೆಸ್ ವಶವಾಗಿದೆ.
ಉಪ ಚುನಾವಣೆ ಗುಪ್ತಚರ ವರದಿ : ಬಳ್ಳಾರಿಯಲ್ಲಿ ಬಿಜೆಪಿಗೆ ಸೋಲು
ನವೆಂಬರ್ 3ರಂದು 5 ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಮತದಾನ ನಡೆದಿತ್ತು. ಅಂದು ಸಂಜೆ ಗುಪ್ತಚರ ಇಲಾಖೆ ಅಧಿಕಾರಿಗಳು ವರದಿಯೊಂದನ್ನು ತಯಾರಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದ್ದರು. ವರದಿಯಲ್ಲಿ ಹೇಳಿದಂತೆಯೇ ಫಲಿತಾಂಶ ಬಂದಿದೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಸೋಲಿಗೆ 5 ಕಾರಣಗಳು
ಉಪ ಚುನಾವಣೆ ಫಲಿತಾಂಶ ಬಿಜೆಪಿಗೆ ಭಾರಿ ಹಿನ್ನಡೆ ಉಂಟು ಮಾಡಿದೆ. ಅದರಲ್ಲೂ ಬಳ್ಳಾರಿಯಲ್ಲಿನ ಸೋಲು ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಗುಪ್ತಚರ ಇಲಾಖೆ ವರದಿಯಲ್ಲಿ ಏನಿತ್ತು? ಚಿತ್ರಗಳಲ್ಲಿ ವಿವರಗಳಿವೆ....
ಗುಪ್ತಚರ ಇಲಾಖೆ ವರದಿ ಏನಿತ್ತು
5 ಕ್ಷೇತ್ರಗಳ ಉಪ ಚುನಾವಣೆ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಸೇರಿದ್ದ ಗುಪ್ತಚರ ಇಲಾಖೆ ವರದಿಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳು ಮೈತ್ರಿಕೂಟದ ಪಾಲಾಗಿವೆ.
ರಾಮನಗರ, ಮಂಡ್ಯ ಗೆಲುವು
ರಾಮನಗರ ವಿಧಾನಸಭಾ ಕ್ಷೇತ್ರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿತ್ತು. ವರದಿಯಂತೆಯೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ಎಲ್.ಆರ್.ಶಿವರಾಮೇಗೌಡ ದಾಖಲೆಯ ಗೆಲುವನ್ನು ಕಂಡಿದ್ದಾರೆ.
ಜಮಖಂಡಿ ಕಾಂಗ್ರೆಸ್ ವಶಕ್ಕೆ
ಜಮಖಂಡಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ದಿ.ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗುಪ್ತಚರ ಇಲಾಖೆ ವರದಿಯೂ ಆನಂದ್ ನ್ಯಾಮಗೌಡ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿತ್ತು. ಜಮಖಂಡಿ ಕ್ಷೇತ್ರದ ಸೋಲು ಬಿಜೆಪಿ ನಾಯಕರಿಗೆ ಮುಖಭಂಗ ಉಂಟು ಮಾಡಿದೆ.
ಬಳ್ಳಾರಿಯಲ್ಲಿ ಹೀನಾಯ ಸೋಲು
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಸುಮಾರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗುಪ್ತಚರ ಇಲಾಖೆ ವರದಿಯೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಎಂದು ಹೇಳಿತ್ತು. ಅಚ್ಚರಿಯ ವಿಷಯವೆಂದರೆ ಚುನಾವಣೆಗೂ ಮೊದಲು ಬಂದ ಗುಪ್ತಚರ ಇಲಾಖೆ ವರದಿ ಬಿಜೆಪಿ ಗೆಲ್ಲಬಹುದು ಎಂದು ಹೇಳಿತ್ತು. ಕೊನೆ ಕ್ಷಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪ್ರಚಾರ ತಂತ್ರವನ್ನು ಬದಲಾಯಿಸಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿದ್ದಾರೆ.
ಪ್ರಬಲ ಪೈಪೋಟಿ
ಇನ್ನು ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಗುಪ್ತಚರ ಇಲಾಖೆಯೂ ಜಿಲ್ಲೆಯಲ್ಲಿ ಕಮಲ ಅರಳಲಿದೆ ಎಂದು ಹೇಳಿತ್ತು. ಹಾಗಯೇ ಜೆಡಿಎಸ್ನ ಮಧು ಬಂಗಾರಪ್ಪ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ಹೇಳಿತ್ತು. ಅದರಂತೆಯೇ ಅವರು ಪೈಪೋಟಿ ನೀಡಿದ್ದು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮಾತ್ರ ರಾಘವೇಂದ್ರ ಗೆದ್ದಿದ್ದಾರೆ.