ಪೇಜಾವರ ಮಠಕ್ಕೆ 600 ಕೋಟಿ ದೇಣಿಗೆಯ ವಿಷಯ ಏನಾಯ್ತು?
ಏಪ್ರಿಲ್ ಎರಡರಂದು ಬೆಂಗಳೂರಿನಲ್ಲಿ ಹೈದರಾಬಾದಿನ ಉದ್ಯಮಿಯೊಬ್ಬರು ಮಠಕ್ಕೆ ನೀಡುವ ದೇಣಿಗೆ ವಿಚಾರದಲ್ಲಿ ಭಾರೀ ಸುದ್ದಿಮಾಡಿದ್ದರು.
ರಾಜ್ಯದ ಯಾವುದೇ ಮಠವೊಂದರ ಇತಿಹಾಸದಲ್ಲಿ ಕಂಡುಕೇಳರಿಯದ ಬರೋಬ್ಬರಿ ಆರು ನೂರು ಕೋಟಿ ರೂಪಾಯಿಯನ್ನು ಉಡುಪಿಯ ಪೇಜಾವರ ಅಧೋಕ್ಷಜ ಮಠಕ್ಕೆ ದೇಣಿಗೆ ನೀಡುತ್ತೇನೆಂದು ಹೇಳಿ ಭಾರೀ ಸಂಚಲನ ಮೂಡಿಸಿದ್ದರು.
ಹದಿನೈದು ದಿನದೊಳಗೆ ದುಡ್ಡನ್ನು ಪೇಜಾವರ ಮಠಕ್ಕೆ ತಲುಪಿಸುತ್ತೇನೆಂದು ಶ್ರೀಸತಿ ಗೋಪಾಲಕೃಷ್ಣ ಫೌಂಡೇಷನಿನ ಗೋಪಾಲಕೃಷ್ಣ ರೆಡ್ಡಿ ಹೇಳಿಕೆ ನೀಡಿದ್ದರು. (ಪೇಜಾವರ ಮಠಕ್ಕೆ ಒಲಿದ ಆಧುನಿಕ ಕುಬೇರ)
ಆದರೆ, ಹದಿನೈದು ದಿನ ಕಳೆದು ತಿಂಗಳಾದರೂ ಘೋಷಿಸಿದ ಆರು ನೂರು ಕೋಟಿ ರೂಪಾಯಿಯಲ್ಲಿ ಒಂದು ಬಿಡಿಗಾಸು ಉದ್ಯಮಿ ಕಡೆಯಿಂದ ಮಠಕ್ಕೆ ಇದುವರೆಗೆ ಬಂದಿಲ್ಲ.
ಲಂಡನ್ ಬ್ಯಾಂಕಿನಲ್ಲಿರುವ ಈ ಹಣವನ್ನು ರೂಪಾಯಿಗೆ ಪರಿವರ್ತಿಸಿ ತರಲು ಹದಿನೈದು ದಿನದ ಕಾಲಾವಕಾಶ ಬೇಕಾಗುತ್ತದೆ ಎಂದಿದ್ದ ಉದ್ಯಮಿ ಗೋಪಾಲಕೃಷ್ಣ ರೆಡ್ಡಿ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಉದ್ಯಮಿ ಟೋಕನ್ ರೂಪದಲ್ಲಿ ಕೊಟ್ಟಿದ್ದ ಒಂದು ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದೆ ಎಂದು ಸುದ್ದಿಯಾಗಿತ್ತು. ಆದರೆ ಉದ್ಯಮಿ ಯಾವುದೇ ಚೆಕ್ ನೀಡಿಲ್ಲ ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಪಷ್ಟ ಪಡಿಸಿದೆ.
ಪೇಜಾವರ ಮಠದ ವತಿಯಿಂದ ಹಲವು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕೆಲಸಗಳು ನಡೆಯುತ್ತಿವೆ. ಎಲ್ಲಾ ಕೆಲಸಗಳು ಭಕ್ತರ ಸಹಕಾರದಿಂದ ಮತ್ತು ಶ್ರೀಕೃಷ್ಣನ ಅನುಗ್ರಹದಿಂದ ಮಾತ್ರ ನಡೆಯಲು ಸಾಧ್ಯ.
ಉದ್ಯಮಿಯೊಬ್ಬರು ದೇಣಿಗೆ ನೀಡುತ್ತಾರೆನ್ನುವ ಭರವಸೆಯಿಂದ ಯಾವುದೇ ಕೆಲಸ ನಾವು ಆರಂಭಿಸಿಲ್ಲ, ಭಕ್ತರ ಸಹಕಾರದಿಂದ ನಮ್ಮೆಲ್ಲಾ ಸಾಮಾಜಿಕ ಕೆಲಸಗಳು ಮುಂದುವರಿಯಲಿವೆ ಎಂದು ಪೇಜಾವರ ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯಮಿ ಗೋಪಾಲಕೃಷ್ಣ ರೆಡ್ಡಿ ನೀಡುವ ದೇಣಿಗೆ ಹಣವನ್ನು ಉಡುಪಿ ಹಾಗೂ ಬೆಂಗಳೂರಿನಲ್ಲಿರುವ ಗೋ ಶಾಲೆಗಳಿಗೆ 100 ಕೋಟಿ ರೂಪಾಯಿ, ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಗೆ 250 ಕೋಟಿ ರೂಪಾಯಿ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು.
ಪೇಜಾವರ ಮಠದ ಜೊತೆಗೆ ಮಂತ್ರಾಲಯ ರಾಘವೇಂದ್ರ ಮಠಕ್ಕೂ ಈ ಉದ್ಯಮಿ ನೂರು ಕೋಟಿ ದೇಣಿಗೆ ನೀಡುತ್ತಾರೆಂದು ಸುದ್ದಿಯಾಗಿತ್ತು.