ಕರ್ನಾಟಕ-ಕೇರಳ ಮಧ್ಯೆ 5 ನೂತನ ಮಾರ್ಗಗಳಲ್ಲಿ ಬಸ್ ಸಂಚಾರ
ಬೆಂಗಳೂರು, ಜುಲೈ 25: ಕರ್ನಾಟಕ ಹಾಗೂ ಪಕ್ಕದ ಕೇರಳ ರಾಜ್ಯಗಳ ನಡುವೆ ಬಸ್ ಸಂಚಾರಕ್ಕಾಗಿ ಒಪ್ಪಂದ ನಡೆದಿದೆ. ಈ ಒಪ್ಪಂದದಿಂದ ಎರಡೂ ರಾಜ್ಯಗಳ ಮಧ್ಯೆ ನೂತನ ಐದು ಮಾರ್ಗಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಯ ಬಸ್ ಗಳು ಓಡಾಟ ನಡೆಸಲಿವೆ.
ಇದಕ್ಕಾಗಿ ಎರಡೂ ರಾಜ್ಯಗಳ ನಡುವೆ ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ ಐದು ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಒಪ್ಪಂದಿಂದ ಒಟ್ಟು ಕೇರಳದ 5 ಮಾರ್ಗಗಳಲ್ಲಿ 4,314 ಕಿಲೋ ಮೀಟರ್ ಗಳಷ್ಟು ಕ್ರಮಿಸಲು ಕೆಎಸ್ಆರ್ಟಿಸಿಗೆ ಅನುಮತಿ ಸಿಕ್ಕಿದೆ. ಬೆಂಗಳೂರು-ಪಟ್ಟಣಂ, ಕುಂದಾಪುರ-ತಿರುವನಂತಪುರಂ, ಕುಂದಾಪುರ-ಕೊಟ್ಟಾಯಂ, ಮಣಿಪಾಲ-ಎರ್ನಾಕುಲಂ ಮತ್ತು ಕೊಲ್ಲೂರು-ಗುರುವಾಯೂರು ಮಾರ್ಗಗಳಲ್ಲಿ ನೂತನ ಸಾರಿಗೆ ಬಸ್ ಗಳು ಓಡಾಟ ನಡೆಸಲಿವೆ.
ಇದೇ ರೀತಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಕರ್ನಾಟಕ ರಾಜ್ಯದ 7 ಮಾರ್ಗಗಳಲ್ಲಿ ನೂತನ ಬಸ್ ಗಳನ್ನು ಆರಂಭಿಸಲಿದ್ದಾರೆ. ಒಟ್ಟು 4,420 ಕಿಲೋಮೀಟರ್ ರಸ್ತೆಯಲ್ಲಿ ಸಂಚಾರಕ್ಕೆ ಕೇರಳ ಬಸ್ ಗಳಿಗೆ ಅನುಮತಿ ನೀಡಲಾಗಿದೆ.
ಇನ್ನು ಶಬರಿಮಲೈ, ಬೇಸಿಗೆ ಅವಧಿ ಹಾಗೂ ವಿವಿಧ ಹಬ್ಬಗಳ ಸಮಯದಲ್ಲಿ ಕರ್ನಾಟಕ ಮತ್ತು ಕೇರಳ ಸಾರಿಗೆ ನಿಗಮದ 250 ಬಸ್ಗಳಿಗೆ ಮೋಟಾರ್ ವಾಹನ ತೆರಿಗೆ, ಪ್ರಯಾಣಿಕರ ತೆರಿಗೆ, ಪ್ರವೇಶ ಶುಲ್ಕ ಮುಂತಾದವುಗಳಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.