ಬಜೆಟ್ ಅಧಿವೇಶನ ಅರ್ಥಹೀನ, ಸರ್ಕಾರಕ್ಕೆ ಸಂಖ್ಯಾಬಲವಿಲ್ಲ : ಶ್ರೀರಾಮುಲು
ಬೆಂಗಳೂರು, ಫೆಬ್ರವರಿ 07: ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನದ ಎರಡನೇ ದಿನವೂ ಹೈ ಡ್ರಾಮಾ ಮುಂದುವರೆದಿದೆ. ಮೈತ್ರಿ ಸರ್ಕಾರವು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸರ್ಕಸ್ ಮಾಡುತ್ತಿದ್ದರೆ, ಸರಣಿ ಸುದ್ದಿಗೋಷ್ಠಿಗಳ ಮೂಲಕ ಕುಮಾರಸ್ವಾಮಿ ಅವರ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.
ಈ ನಡುವೆ ಶಾಸಕ ಬಿ . ಶ್ರೀರಾಮುಲು ಮಾತನಾಡಿ, ಎಚ್. ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವ ಅರ್ಹತೆ ಕಳೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಬಹಮತವೇ ಇಲ್ಲ. ಕಾಂಗ್ರೆಸ್ ಅಲ್ಲದೆ, ಜೆಡಿಎಸ್ ಶಾಸಕರು ಕೂಡಾ ಸ್ವಇಚ್ಛೆಯಿಂದ ಬಿಜೆಪಿ ಕಡೆಗೆ ಬರುತ್ತಿದ್ದಾರೆ. ಜೆಡಿಎಸ್ ಶಾಸಕ ನಾರಾಯಣಸ್ವಾಮಿ ಅವರು ಮುಂಬೈಯಲ್ಲಿದ್ದಾರೆ. ಕೂಡಲೇ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದು ಒಳ್ಳೆಯದು ಎಂದಿದ್ದಾರೆ.

ಕಾಂಗ್ರೆಸ್ನ ಅತೃಪ್ತ ಶಾಸಕರು ಎರಡು ದಿನವು ಕೈ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಸುದ್ದಿ ಬಂದಿದೆ. ಕಾಂಗ್ರೆಸ್ಸಿನ ಆರು ಮಂದಿ ಅತೃಪ್ತ ಶಾಸಕರು ಬಜೆಟ್ ಅಧಿವೇಶನಕ್ಕೆ ಗೈರಾಗಬಹುದು ಎಂಬ ಶಂಕೆ ಇತ್ತು. ಆದರೆ, ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಇತ್ತ ವಿಧಾನಸಭೆಯ ಇಂದು ಕೂಡಾ ಬಿಜೆಪಿ ಶಾಸಕರು ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕಲಾಪಕ್ಕೆ ಅಡ್ಡಿಪಡಿಸಿದರು. ಪ್ರತಿಭಟನೆ, ಕೂಗಾಟ ತೀವ್ರಗೊಂಡಿದ್ದರಿಂದ ಸದನದ ಕಲಾಪವನ್ನು ನಾಳೆ 12.30ಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಮುಂದೂಡಿದರು.












Click it and Unblock the Notifications