ಕನ್ನಡ ಸುದ್ದಿ ಗ್ರಾಹಕರಿಗೆ ಇನ್ನೊಂದು ಟಿವಿ ಚಾನಲ್
ಬೆಂಗಳೂರು, ಜೂ.24: ಕನ್ನಡ ಮಾಧ್ಯಮ ಲೋಕಕ್ಕೆ ಹೊಸದೊಂದು ಸುದ್ದಿ ವಾಹಿನಿ ಭರ್ಜರಿಯಾಗಿ ಎಂಟ್ರಿ ಕೊಡಲು ಸಿದ್ಧವಾಗಿದೆ. ಜುಲೈ 10 ರಂದು ಹೊಸ ಸುದ್ದಿ ವಾಹಿನಿ 'ಬಿಟಿವಿ ಕರ್ನಾಟಕ' ಲೋಕಾರ್ಪಣೆಗೊಳ್ಳುತ್ತಿದೆ. ಕಾಯುವಿಕೆ ದಿನಗಳು ಮುಗಿದಿವೆ. ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದು ಬಿಟಿವಿ ಕರ್ನಾಟಕ ಸುದ್ದಿ ವಾಹಿನಿ ತಂಡ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದೆ.
ಫೇಸ್ ಬುಕ್ ನಲ್ಲಿ ಸುಮಾರು 4,610ಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿರುವ ಬಿಟಿವಿ ನ್ಯೂಸ್ ಕರ್ನಾಟಕ ಸಂಸ್ಥೆ ಪ್ರಕಟಿಸಿದ್ದು ಹೀಗೆ...
'ಕಾಯುವಿಕೆಯ ದಿನಗಳು ಮುಗಿದವು... ಇದು ಪತ್ರಕರ್ತರೇ ವೃತ್ತಿನಿಷ್ಠೆಯಿಂದ ಕಟ್ಟಿದ ನ್ಯೂಸ್ ಚಾನಲ್. ಮಾನವೀಯತೆಯ ನೆಲೆಗಟ್ಟಿನಲ್ಲಿ, ಸತ್ಯ ಹಾಗೂ ನಿಷ್ಠುರತೆಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಸಂಕಲ್ಪ ನಮ್ಮದು. ನಮ್ಮ ಪ್ರತಿ ಸುದ್ದಿಯೂ ವಸ್ತುನಿಷ್ಠ ಹಾಗೂ ಪ್ರತಿ ವಿಶ್ಲೇಷಣೆಯೂ ಸತ್ವಭರಿತವಾಗಿರುತ್ತದೆ. ಯಾವುದೇ ರಾಗ ದ್ವೇಷಗಳಿಲ್ಲದೆ ನಿಷ್ಪಕ್ಷಪಾತವಾಗಿ ನಿಮಗೆ ಸುದ್ದಿ ನೀಡುತ್ತೇವೆ. ನಿಮ್ಮೆಲ್ಲಾ ನಿರೀಕ್ಷೆಗಳಿಗೆ ಸ್ಪಂದಿಸುವ ಭರವಸೆಯೊಂದಿಗೆ ಜುಲೈ 10ನೇ ತಾರೀಖು ನಿಮ್ಮ ಮನೆಗೇ ಬರುತ್ತಿದ್ದೇವೆ. ಹೊಸ ಸಾಹಸಕ್ಕೆ ಸದಾ ಬೆನ್ನೆಲುಬಾಗಿ ನಿಂತು ಬೆಂಬಲಿಸಿದವರು ನೀವು. ಈಗ ನಮ್ಮನ್ನೂ ಆದರಿಸಿ, ಹರಸಿ, ಹಾರೈಸಿ...

ಉದ್ಘಾಟನೆಗೂ ಮುನ್ನ ಬಿಟಿವಿ ಕಚೇರಿಗೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣ ಗೌಡ, ಬೆಂಗಳೂರು ವಕೀಲರ ಸಂಘದ ಖಜಾಂಚಿ ಬಿಎಸ್ ರಾಜಶೇಖರ್, ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ, ನಟಿ ಶುಭ ಪೂಂಜಾ, ಜಂಟಿ ಪೊಲೀಸ್ ಆಯುಕ್ತ(ಕ್ರೈಂ) ಹೇಮಂತ್ ನಿಂಬಾಳ್ಕರ್ ಹಾಗೂ ಅವರ ಪತ್ನಿ ಅಂಜಲಿ ನಿಂಬಾಳ್ಕರ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಸಿಬಿಐ ಎಸ್ಪಿ ಎ ಸುಬ್ರಮಣ್ಯೇಶ್ವರರಾವ್, ಬಿಎಂಟಿಸಿ ಎಂಡಿ ಅಜುಮ್ ಪರ್ವೇಜ್, ನಟಿ ಭಾವನಾ, ಎಸ್ಪಿಎಸ್ ಸ್ಥಾಪಕ ಎಸ್.ಆರ್ ಹಿರೇಮಠ್, ನಟ ಪುನೀತ್ ರಾಜ್ ಕುಮಾರ್, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಮೇಯರ್ ಕಟ್ಟೆ ಸತ್ಯನಾರಾಯಣ, ನಿರ್ದೇಶಕ ಟಿ.ಎನ್ ಸೀತಾರಾಮ್ ಸೇರಿದಂತೆ ಅನೇಕರು ಕಚೇರಿಗೆ ಆಗಮಿಸಿ ಶುಭಕೋರಿದ್ದಾರೆ.
ಬಿಟಿವಿ ನ್ಯೂಸ್ ಸಂಸ್ಥೆ ವಿಳಾಸ:
#32/1-2, ಕ್ರೆಸೆಂಟ್ ಟವರ್
ಕ್ರೆಸೆಂಟ್ ರಸ್ತೆ, ಹೈ ಗ್ರೌಂಡ್ಸ್,
ಬೆಂಗಳೂರು- 560 001.
ಸಂಪರ್ಕ ಸಂಖ್ಯೆ: 080-4968 6666.












Click it and Unblock the Notifications