ರಾಜಕೀಯ ಗೊಂದಲದಲ್ಲಿ ಶ್ರೀರಾಮುಲು ಮತ್ತದೇ ರಾಗ
ಬೆಂಗಳೂರು, ನವೆಂಬರ್ 11: ರಾಜಕೀಯವಾಗಿ ಗೊಂದಲಾಪುರದಲ್ಲಿರುವ ಬಡವ-ಶ್ರಮಿಕ-ರೈತ ಕಾಂಗ್ರೆಸ್ ಸಂಸ್ಥಾಪಕ, ಜೈಲುವಾಸಿ ಜನಾರ್ದನ ರೆಡ್ಡಿಯ ಪರಮಾಪ್ತ ಬಿ ಶ್ರೀರಾಮಲು ಮತ್ತದೇ ರಾಗ ಹಾಡಿದ್ದಾರೆ.
ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಲು ಹವಣಿಸುತ್ತಿರುವ ಬಳ್ಳಾರಿ ಗ್ರಾಮಾಂತರ ಸ್ವತಂತ್ರ ಶಾಸಕ ರಾಮುಲು ಏನಾದರೂ ದಕ್ಕುತ್ತದಾ ಎಂದು ಸಮಾಜವಾದಿ ಪಕ್ಷದ ಕದ ತಟ್ಟಿದ್ದರಾದರೂ ಅದರಿಂದ ಹೆಚ್ಚಿನದೇನೂ ಲಭಿಸುತ್ತಿಲ್ಲ ಎಂಬ ಸುಳವನ್ನರಿತು ಆ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ.
ಜೆಡಿಎಸ್ ಜತೆ ಮೈತ್ರಿ?:

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ಇರಾದೆ ಹೊಂದಿದ್ದ ಶ್ರೀರಾಮುಲು, ಮೈತ್ರಿ ಕುರಿತಂತೆ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಜತೆ ಭಾನುವಾರ ಚರ್ಚೆ ನಡೆಸಿದರಾದರೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಮಧ್ಯೆ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರವೂ ನುಸುಳಿದೆ. ಹಾಗಾಗಿ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರುವುದು ಬೇಡ ಎಂಬುದು ಶ್ರೀರಾಮುಲು ಅವರ ಆಲೋಚನೆಯಾಗಿ ಎನ್ನಲಾಗಿದೆ.
ಈ ಹಿಂದೆ ಬಿಜೆಪಿ ವಿಷಯದಲ್ಲೂ ರಾಮುಲು ಹೀಗೇ ಮಾಡಿದ್ದರು. ರಾಜಕೀಯವಾಗಿ ಒಂದಷ್ಟು ಷರತ್ತುಗಳನ್ನು ಹಾಕುವುದು ಜತೆಗೆ ಸೋದರ ಸಮಾನ ಜನಾರ್ದನ ರೆಡ್ಡಿ ಶೀಘ್ರ ಬಿಡುಗಡೆ ಕೋರುವ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಕ್ಕುವುದು ದುರ್ಲಭವೆಂದು ಅರಿತುಕೊಂಡು 'ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ' ಅಂದುಬಿಟ್ಟಿದ್ದರು.
ಈಗಲೂ ಅಷ್ಟೇ ಈಡೇರಿಸಲು ಸಾಧ್ಯವಾಗದಂತಹ ಷರತ್ತುಗಳ ಜತೆಗೆ ಮತ್ತದೇ ರೆಡ್ಡಿ ಮುಕ್ತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಎಸ್ಪಿ ನಾಯಕರು ಸೊಪ್ಪು ಹಾಕದ್ದರಿಂದ ನಿರಾಶೆಗೊಂಡ ರಾಮುಲು' 'ಇಲ್ಲ! ಸಮಾಜವಾದಿ ಪಕ್ಷದ ಜತೆ ಬಿಎಸ್ಸಾರ್ ಜತೆ ಒಂದುಗೂಡುವ ಪ್ರಸ್ತಾವನೆಯೇ ಇಲ್ಲ. ಆ ಪ್ರಶ್ನೆಯೇ ಉದ್ಭವಿಸದು' ಎಂದು ಹೇಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಇದರಿಂದ ರಾಜಕೀಯವಾಗಿ ಡೆಡ್ ಎಂಡ್ ತಲುಪಿರುವ ರಾಮುಲು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಬಿಎಸ್ಸಾರ್ ಆಪ್ತ ಮೂಲಗಳು ತಿಳಿಸಿವೆ.
ಸೋ, ಸದ್ಯಕ್ಕೆ ವಿಲೀನ ಪ್ರಕ್ರಿಯೆಗಳನ್ನು ಕೈಬಿಟ್ಟು 'ಮುಂದಿನ ಲೋಕಸಭೆ ಚುನಾವಣೆಗಾಗಿ ಪಕ್ಷವನ್ನು ಅಣಿಗೊಳಿಸುವ ಕಾರ್ಯದಲ್ಲಿ ತೊಡಗುವುದಾಗಿ' ಅವರೇ ಸ್ಪಷ್ಟಪಡಿಸಿದ್ದಾರೆ.
ನ 16ರಿಂದ ರಾಮುಲು ಪ್ರವಾಸ:
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಪುನರ್ ರಚಿಸಲಾಗಿದೆ. ಕಾರ್ಯಕರ್ತರನ್ನು ಸಂಘಟಿಸುವ ಕೆಲಸಕ್ಕೆ ಚಾಲನೆ ದೊರೆತಿದೆ. ಈ ತಿಂಗಳ 16ರಿಂದ ಚಿತ್ರದುರ್ಗದಿಂದ ಪಕ್ಷದ ಅಧ್ಯಕ್ಷ ಶ್ರೀರಾಮುಲು ರಾಜ್ಯ ಪ್ರವಾಸ ಮಾಡಲಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕರ್ತರ ಸಭೆ, ಸಮಾರಂಭ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications