ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ, ಬಿಜೆಪಿಯಲ್ಲೇ ಇರ್ತಾರೆ: ಬಿ.ಎಸ್.ಯಡಿಯೂರಪ್ಪ
ಕೊಪ್ಪಳ,ಡಿಸೆಂಬರ್ 15: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇರ್ತಾರೆ, ಹೊಸ ಪಕ್ಷ ಕಟ್ಟಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಈ ಕುರಿತು ಕೊಪ್ಪಳ ಬಸಾಪೂರ ಬಳಿಯ ಲಘು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇರತಾರೆ, ಅವರನ್ನು ಬಳಸಿಕೊಂಡು ನಾವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿರುವುದರಿಂದ ಗೊಂದಲ ಉಂಟಾಗಿರಬಹುದು. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದರು.
ಇನ್ನೂ ಅವರ ಮೇಲೆ ಕೆಲವೊಂದು ಕೇಸ್ ಗಳಿರುವುದರಿಂದ ಬಿಜೆಪಿಯಲ್ಲಿ ಮತ್ತೆ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿಳಂಭವಾಗಿದೆ. ಜನಾರ್ದನ ರೆಡ್ಡಿಯವರ ಜತೆ ಈಗಾಗಲೇ ನಾನು ಮಾತನಾಡಿದ್ದೇನೆ. ಕೇಸ್ ಒಂದೊಂದೇ ಇತ್ಯರ್ಥವಾಗುತ್ತಿದ್ದು, ವರಿಷ್ಠರ ಜತೆ ಮಾತನಾಡಿ, ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲಾಗುವುದು ಎಂದರು.
ಇನ್ನೂ ಕಾಂಗ್ರೆಸ್ ನವರು ತಮ್ಮಲ್ಲಿರುವ ಗೊಂದಲ ಬಗೆಹರಿಸಿಕೊಳ್ಳುವುದು ಬಿಟ್ಟು ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ನಾನು ಈಗಾಗಲೇ ಮುಖ್ಯಮಂತ್ರಿಯಾದೇ ಎಂದು ಕಾಂಗ್ರೆಸ್ ನ ಕೆಲವರು ಹಗಲು ಕಾಣುತ್ತಿರುವುದು ಸರಿಯಲ್ಲ. ಇನ್ನೂ ಹಗುರವಾಗಿ ಮಾತನಾಡಿದರೇ ಪ್ರಸಿದ್ದಿ ಪಡೆಯುತ್ತೇನೆ ಎನ್ನುವ ಭ್ರಮೆಯಲ್ಲಿ ಪ್ರಿಯಾಂಕ ಖರ್ಗೆ ಇದ್ದಾರೆ. ಹಾಗಾಗಿ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ ಎನ್ನುತ್ತಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಉರುಳಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದವನಲ್ಲಿ ನಾನು ಒಬ್ಬ. ನನ್ನನ್ನು ನಿರ್ಲಕ್ಷ್ಯ ಮಾಡುವ ಪ್ರಮೇಯವೇ ಇಲ್ಲ. ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ನಾವೆಲ್ಲ ಒಗ್ಗಟ್ಟಾಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.
ನಾನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಕೊಟ್ಟು ಹೊರ ಬಂದಿರುವೆ. ಸಾಮಾನ್ಯ ಕಾರ್ಯಕರ್ತ ನಾಗಿದ್ದು, ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದೇನೆ. ವಿಜಯೇಂದ್ರಗೆ ಶಿಕಾರಿಪುರ ದಿಂದ ಸ್ಪರ್ಧೆ ಮಾಡಲು ಈಗಾಗಲೇ ಕ್ಷೇತ್ರ ಬಿಟ್ಟುಕೊಡುವುದಾಗಿ ತಿರ್ಮಾನಿಸಿದ್ದೇನೆ. ಆದರೆ, ಪಕ್ಷದ ತಿರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳು ಇಲ್ಲ. ಮಾಧ್ಯಮ ಸ್ನೇಹಿತರು ಯಾವುದನ್ನು ಸೃಷ್ಟಿ ಮಾಡೋಕೆ ಹೋಗಬೇಡಿ. ನಾವೆಲ್ಲ ಒಟ್ಟಾಗಿ ಇದ್ದೇವೆ. ಒಂದಾಗಿ ಇದ್ದೇವೆ ನಮ್ಮದು ಒಂದೇ ಅಜೆಂಡಾ ಮುಂದೆ ಚುನಾವಣೆ ಇದೆ. ಪಕ್ಷವನ್ನ ಅಧಿಕಾರಕ್ಕೆ ತರೋದು, ಅದಕ್ಕೆ ಬೇಕಾದ ಎಲ್ಲಾ ಶ್ರಮ ಹಾಕ್ತೀನಿ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ. ಬಿಜೆಪಿ ಪರ ರಾಜ್ಯದಲ್ಲಿ ವಾತಾವರಣ ಇದೆ. ಮೋದಿ,ಅಮಿತ್ ಶಾ ನಡ್ಡಾ ನೇತೃತ್ವದಲ್ಲಿ ಹೆಚ್ಚು ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತೆ. ಇದೆಲ್ಲದ್ರ ಪರಿಣಾಮ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
ನನ್ನನ್ನ ಪಕ್ಷ ನೆಗಲೆಟ್ ಮಾಡ್ತಿಲ್ಲ. ಇದ್ರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲಾ ಕಾರ್ಯಕ್ರಮಗಳಿಗೆ ನಾನು ಹೋಗ್ತಾ ಇದ್ದೀನಿ. ಸರ್ಕಾರಿ ಕಾರ್ಯಕ್ರಮಕ್ಕೆ ನಾನು ಹೋಗೋದು ಸರಿಯಲ್ಲ ಅಂತ ಹೋಗಿಲ್ಲ ಅಷ್ಟೆ. ಆದರೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನನ್ನನ್ನ ಯಾರು ಕರೆಯಬೇಕಾಗಿಲ್ಲ. ನನ್ನ ಕರ್ತವ್ಯ ನಾನು ಮಾಡ್ತೀನಿ. ಈ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ಆಹ್ವಾನ ಬಂದಿಲ್ಲ. ನಾನು ಹೋಗೋ ಸ್ಥಿತಿಯಲ್ಲಿ ಇರಲಿಲ್ಲ ಅದಕ್ಕೆ ಹೋಗಿರಲಿಲ್ಲ. ನಡ್ಡಾ ಬರ್ತಿದ್ದಾರೆ ಅದಕ್ಕೆ ಹೋಗ್ತಿದ್ದೇನೆ ಎಂದರು.